ಬೆಂಗಳೂರು : ಸ್ವಾತಂತ್ರ ಹೋರಾಟಗಾರ, ಮಾಜಿ ಸಚಿವ ಭೀಮಣ್ಣ ಖಂಡ್ರೆ ಹೆಸರಿನಲ್ಲಿ ಅವರ ಪುತ್ರ, ಸಚಿವ ಈಶ್ವರ ಖಂಡ್ರೆ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ 3 ಲಕ್ಷ ರೂ.ದತ್ತಿ ನಿಧಿ ಸ್ಥಾಪನೆ ಮಾಡಿದ್ದು, ಮೊದಲ ಪ್ರಶಸ್ತಿಗೆ ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ನ ಸಹಾಯಕ ಸ್ಥಾನಿಕ ಸಂಪಾದಕ ರಾಮು ಪಾಟೀಲ್ರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ತಿಳಿಸಿದ್ದಾರೆ.
ಕಲಬುರ್ಗಿ ಜಿಲ್ಲೆ ಸೇಡಂನ ರಾಮು ಪಾಟೀಲ್ 1997ರಲ್ಲಿ ಪತ್ರಿಕೋದ್ಯಮ ಪ್ರವೇಶ ಮಾಡಿದರು. ವೀಕ್ ಪತ್ರಿಕೆ, ಮಸ್ಕತ್ ಡೈಲಿಯಲ್ಲಿ ಸೇವೆ ಸಲ್ಲಿಸಿ ಬಳಿಕ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಮುಖ್ಯ ವರದಿಗಾರರಾಗಿ ಸೇರ್ಪಡೆಗೊಂಡರು. ಸತತ 25 ವರ್ಷಗಳ ವೃತ್ತಿ ಸೇವೆ ಮಾಡಿರುವ ಅವರು ಈಗಲೂ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ನ ಸಹಾಯಕ ಸ್ಥಾನಿಕ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಬೀದರ್ನಲ್ಲಿ ಎ.11 ಮತ್ತು 12ರಂದು ನಡೆಯಲಿರುವ ಪತ್ರಕರ್ತರ ಸಮ್ಮೇಳನದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು.
ಲಿಂಗಸುಗೂರು ಸಿದ್ರಾಮಪ್ಪ ಪ್ರಶಸ್ತಿ: ಲಿಂಗಸುಗೂರು ಸಿದ್ರಾಮಪ್ಪ ಹೆಸರಿನಲ್ಲಿ ಹೊಸದಾಗಿ ಅವರು ಪುತ್ರ ಶಿವರಾಜ ಕೆಂಭಾವಿ ಸ್ಥಾಪನೆ ಮಾಡಿರುವ ಪ್ರಶಸ್ತಿಗೆ ಹಾಸನ ಜಿಲ್ಲೆ ಹಾಸನವಾಣಿ ಪತ್ರಿಕೆ ಬೇಲೂರು ತಾಲೂಕು ವರದಿಗಾರರಾದ ಭಾರತಿಗೌಡ ಮತ್ತು ವಿಜಯಪುರ ಜಿಲ್ಲೆ ಸುವರ್ಣ ನ್ಯೂಸ್ ಟಿವಿ ಜಿಲ್ಲಾ ವರದಿಗಾರರಾದ ಷಡಾಕ್ಷರಿ ಬಸವರಾಜು ಕಂಪೂನವರ(ಷಡಾಕ್ಷರಿ ಬಿ.ಕಂಪೂನವರ) ಅವರು ಆಯ್ಕೆ ಯಾಗಿದ್ದಾರೆ.

