ಬೆಂಗಳೂರು, ಜೂ.21: ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಅವರ ಮೊಬೈಲ್ ಕದ್ದಾಲಿಕೆ ಆರೋಪ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಕಬ್ಬನ್ ಪಾರ್ಕ್ ಠಾಣಾ ಪೊಲೀಸರು, ಜೈಲಿನಲ್ಲಿರುವ ಯುವರಾಜ್ ಯಾನೆ ಗುರೂಜಿ ಅನ್ನು ವಿಚಾರಣೆಗೊಳಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಎಸಿಪಿ ಯತಿರಾಜ್ ನೇತೃತ್ವದಲ್ಲಿ ತನಿಖಾಧಿಕಾರಿಗಳು ಇಲ್ಲಿನ ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರ ಜೈಲು ಸೇರಿರುವ ಯುವರಾಜ್ನನ್ನು ಒಂದೂವರೆ ಗಂಟೆಗಳ ಕಾಲ ಈ ತಂಡ ವಿಚಾರಣೆ ನಡೆಸಿದೆ.
ಅರವಿಂದ್ ಬೆಲ್ಲದ್ ಅವರಿಂದ ಸಹಾಯ ಕೇಳಲು ಆರೋಪಿ ಕರೆ ಮಾಡಿರುವ ಸಾಧ್ಯತೆಯಿದ್ದು, ಪೊಲೀಸ್ ಕಸ್ಟಡಿಯಲ್ಲಿದ್ದಾಗಲೂ ಹಲವು ಬಾರಿ ಯುವರಾಜ್ ಕರೆ ಮಾಡಿರುವುದು ಗೊತ್ತಾಗಿದೆ ಎಂದು ಹೇಳಲಾಗುತ್ತಿದೆ.
ಇತ್ತೀಚಿಗೆ ಮೊಬೈಲ್ ಕರೆ ಕದ್ದಾಲಿಕೆ ಮಾಡಿ ನನ್ನ ವಿರುದ್ಧ ಷಡ್ಯಂತ್ರ ರೂಪಿಸಿರುವ ಅನುಮಾನ ವ್ಯಕ್ತಪಡಿಸಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಅರವಿಂದ್ ಬೆಲ್ಲದ್ ದೂರು ನೀಡಿದ್ದರು.

