ಗುರುಪುರ : ಬೆಳ್ಳಿಬೆಟ್ಟು ಬಸ್ ನಿಲ್ದಾಣದ ಬಳಿ ಖಾಸಗಿ ಬಸ್ ಮತ್ತು ಲಾರಿಯ ನಡುವೆ ಅಪಘಾತ ನಡೆದು ಚಾಲಕರಿಬ್ಬರೂ ಗಂಭೀರ ಗಾಯಗೊಂಡಿರುವ ಘಟನೆ ಬುಧವಾರ ವರದಿಯಾಗಿದೆ.
ಮಂಗಳೂರಿನಿಂದ ಕಾರ್ಕಳದತ್ತ ಸಾಗುತ್ತಿದ್ದ ಖಾಸಗಿ ಬಸ್ ಮತ್ತು ಮಂಗಳೂರು ಕಡೆಗೆ ಹೋಗುತ್ತಿದ್ದ ಲಾರಿಯ ನಡುವೆ ಬೆಳ್ಳಿಬೆಟ್ಟ ತಿರುವಿನಲ್ಲಿ ಅಪಘಾತ ಸಂಭವಿಸಿದೆ.
ಅಪಘಾತದ ರಭಸಕ್ಕೆ ಬಸ್ ಮತ್ತು ಲಾರಿ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಎರಡೂ ವಾಹನಗಳ ಚಾಲಕರು ಗಂಭೀರ ಗಾಯಗೊಂಡಿದ್ದಾರೆ.
ಸ್ಥಳೀಯರು ಗ್ಯಾಸ್ ಕಟ್ಟರ್ ಮೂಲಕ ಲಾರಿ ಮತ್ತು ಬಸ್ಸಿನ ಕೆಲವು ಭಾಗಗಳನ್ನು ತುಂಡರಿಸಿ ಚಾಲಕರನ್ನು ಹೊರತೆಗೆದಿದ್ದು, ಬಸ್ ನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಾಳಾಗಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಗಂಭೀರ ಗಾಯಗೊಂಡಿದ್ದ ಇಬ್ಬರು ಚಾಲಕರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಜ್ಪೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಗದು ಪತ್ತೆ :
ಅಪಘಾತಕ್ಕೀಡಾಗಿದ್ದ ಬಸ್ ನ ಭಾಗಗಳನ್ನು ಗ್ಯಾಸ್ ಕಟ್ಟರ್ನಿಂದ ತುಂಡರಿಸಿ ಚಾಲಕರನ್ನು ರಕ್ಷಿಸುವ ತುರ್ತು ಕಾರ್ಯಾಚರಣೆ ವೇಳೆ, ರಫೀಕ್ ಗುರುಪುರ ಎಂಬವರಿಗೆ ಸುಮಾರು 6 ಲಕ್ಷ ರೂ. ಮೊತ್ತದ ನಗದು ಸಿಕ್ಕಿದ್ದು, ಅದನ್ನು ಅವರು ಸ್ಥಳದಲ್ಲಿದ್ದ ಬಜ್ಪೆ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ ಎಂದು ಬಜ್ಪೆ ವೃತ್ತ ನಿರೀಕ್ಷಕ ಬಾಲಕೃಷ್ಣ ಅವರು ಮಾಹಿತಿ ನೀಡಿದ್ದಾರೆ.
ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಇಬ್ಬರು ಚಾಲಕರನ್ನು ಸ್ಥಳೀಯರಾದ ರಫೀಕ್, ಶಿವರಾಮ, ರವೂಫ್, ಫಾಝಿಲ್ ಮತ್ತಿತರರು ಸೇರಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ ಎಂದು ತಿಳಿದು ಬಂದಿದೆ.

