ಉಡುಪಿ, ನ.24: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷನಾಗಿ ಒಂದು ಪಕ್ಷದ ಪ್ರತಿನಿಧಿಯಾಗಿ ನಾನು ನೇಮಕವಾಗಿಲ್ಲ. ಪಕ್ಷ ರಹಿತವಾಗಿ ಹಿಂದುಳಿದ ವರ್ಗಗಳ ದನಿಯಾಗಿ ನಾನು ಕೆಲಸ ಮಾಡುತ್ತೇನೆ ಎಂದು ಆಯೋಗದ ನೂತನ ಅಧ್ಯಕ್ಷರಾಗಿ ಸೋಮವಾರ ನೇಮಕಗೊಂಡ ಮಾಜಿ ಸಚಿವ ಕೆ. ತಿಳಿಸಿದ್ದಾರೆ.
ಮಂಗಳವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅದಿಕಾರ ಇಲ್ಲದಿದ್ದಾಗಲೂ ನಾನು ಜನರ ಜೊತೆಗೆ ಇದ್ದೆ. ಹುದ್ದೆಯಲ್ಲಿ ಇಲ್ಲದಿದ್ದರೂ ಕೆಲಸ ಮಾಡುವ ಶಕ್ತಿಯನ್ನು ನಾನು ಬೆಳೆಸಿಕೊಂಡಿದ್ದೇನೆ. ಜನರ ಕೆಲಸ ಮಾಡಲು ಹುದ್ದೆಯೇ ಬೇಕಾಗಿಲ್ಲ ಎಂದು ನಾನು ತಿಳಿದಿದ್ದೇನೆ ಎಂದರು.
'ಪಕ್ಷ ರಹಿತವಾಗಿ ಹಿಂದುಳಿದ ವರ್ಗಗಳ ಧನಿಯಾಗಿ ಕೆಲಸ ಮಾಡುತ್ತೇನೆ. ರಾಜಕೀಯ ಕೆಲಸಗಳನ್ನು ಶಾಸಕನಾಗಿ, ಮಂತ್ರಿಯಾಗಿ, ಸಂಸದ ನಾಗಿ ಮಾಡಿದ್ದೆ. ಈಗ ರಾಜಕೀಯೇತರವಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿದೆ.
ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ಮುಖ್ಯಮಂತ್ರಿಗಳು ನೇಮಕ ಮಾಡಿದ್ದಾರೆ. ಇದೊಂದು ರಾಜಕೀಯೇತರ ಹುದ್ದೆ. ಸಮಿತಿಯ ಸದಸ್ಯರ ನೇಮಕಾತಿ ಮುಂದೆ ಆಗಲಿದೆ. ಈ ಹಿಂದಿನ ಎಲ್ಲಾ ವರದಿಗಳನ್ನು ಅಧ್ಯಯನ ಮಾಡುತ್ತೇನೆ. ರಾಜ್ಯಾದ್ಯಂತ ಓಡಾಡಿ ವರದಿ ಸಿದ್ಧ ಪಡಿಸಿ ಸರಕಾರಕ್ಕೆ ಸಲ್ಲಿಸುತ್ತೇನೆ ಎಂದು ಜಯಪ್ರಕಾಶ್ ಹೆಗ್ಡೆ ನುಡಿದರು.

