ಹೊಸದಿಲ್ಲಿ, ಜು. 5: ಪರೀಕ್ಷಾ ಅಕ್ರಮಗಳ ಆರೋಪದ ಹಿನ್ನಲೆಯಲ್ಲಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ ಹೊಸದಿಲ್ಲಿಯ ಜಂತರ್ ಮಂತರ್ನಲ್ಲಿ ನಡೆಸುತ್ತಿರುವ ಪ್ರತಿಭಟನೆ ರವಿವಾರ 16ನೇ ದಿನಕ್ಕೆ ಕಾಲಿರಿಸಿದೆ.
ಈ ಪ್ರತಿಭಟನೆಗೆ ಕೈಜೋಡಿಸಿರುವ ಪರಿಸರ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಅವರ ಉಪವಾಸ ಮುಷ್ಕರ ಎಂಟನೇ ದಿನಕ್ಕೆ ಕಾಲಿರಿಸಿದೆ.
ಉಪವಾಸ ಮುಷ್ಕರ ಪ್ರಾರಂಭಿಸಿದಾಗಿನಿಂದ ವಾಗ್ಚುಕ್ ಅವರ ತೂಕ ಸುಮಾರು 6 ಕಿ.ಗ್ರಾಂ. ಕಡಿಮೆಯಾಗಿದೆ ಎಂದು ವೈದ್ಯಕೀಯ ಬುಲೆಟಿನ್ ತಿಳಿಸಿದೆ.
ಪರೀಕ್ಷೆಗಳಲ್ಲಿ ಪದೇ ಪದೇ ನಡೆಯುತ್ತಿರುವ ಅಕ್ರಮಗಳು ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆಗಳು ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳ ಬದುಕಿನ ಮೇಲೆ ತೀವ್ರ ಪರಿಣಾಮ ಬೀರಿವೆ ಎಂದು ಆರೋಪಿಸಿರುವ ಸಿಜೆಪಿ, ಪ್ರಧಾನ್ ಅವರ ರಾಜೀನಾಮೆಗಾಗಿ ತನ್ನ ಒತ್ತಾಯವನ್ನು ಮುಂದುವರಿಸಿದೆ.
ಎಕ್ಸ್ ಜಾಲತಾಣದಲ್ಲಿ ಮಾಡಿರುವ ಪೋಸ್ಟ್ನಲ್ಲಿ ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ, ನೀಟ್ ಆಕಾಂಕ್ಷಿಯಾಗಿದ್ದ ರಿಯಾ ಕುಮಾರಿ ಥಾಪಾ ಅವರ ಪೋಷಕರು ರವಿವಾರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆಯು ಥಾಪಾ ಕನಸುಗಳನ್ನು ನುಚ್ಚನೂರು ಮಾಡಿದ ಬಳಿಕ ಆಕೆ ಸಾವನ್ನಪ್ಪಿದ್ದಾಳೆ ಎಂದು ಅವರು ಹೇಳಿದ್ದಾರೆ ಎಂದು ತಿಳಿಸಿದರು.
ಥಾಪಾ ಅವರ ತಂದೆ ತಮ್ಮ ಕುಟುಂಬ ಅನುಭವಿಸಿದ ನೋವನ್ನು ಮತ್ತೆ ಯಾವ ಕುಟುಂಬವೂ ಅನುಭವಿಸಬಾರದು ಎಂಬ ಮನವಿಯೊಂದಿಗೆ ಪ್ರತಿಭಟನೆಯಲ್ಲಿ ಭಾಗವಹಿಸಿದರು. ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ಕೇಂದ್ರ ಸರಕಾರವನ್ನು ಅವರು ಆಗ್ರಹಿಸಿದರು ಎಂದು ದೀಪ್ಕೆ ಹೇಳಿದ್ದಾರೆ.

