ಬೆಂಗಳೂರು : ಮಾನವ-ವನ್ಯಜೀವಿ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಆಯ್ದ ವನ್ಯಜೀವಿಗಳ ಸಂತಾನ ಶಕ್ತಿ ಹರಣ ಅಥವಾ ಚುಚ್ಚುಮದ್ದು ನೀಡುವ ಬಗ್ಗೆ ಚಿಂತನೆ ಮಾಡುವ ಅಗತ್ಯವಿದ್ದು, ಈ ಬಗ್ಗೆ ಸಾರ್ವಜನಿಕವಾಗಿ ಚರ್ಚೆಯೂ ನಡೆಯಬೇಕು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.
ಬುಧವಾರ ನಗರದಲ್ಲಿರುವ ತಮ್ಮ ಸರಕಾರಿ ನಿವಾಸದಲ್ಲಿ ಸುದ್ದಿಗಾರರೊಂಧಿಗೆ ಮಾತನಾಡಿದ ಅವರು, ಕೆಲವು ಆಯ್ದ ವನ್ಯಜೀವಿಗಳ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗುತ್ತಿದೆ. ಇವುಗಳ ಸಂಖ್ಯೆಗೆ ಕಡಿವಾಣ ಹಾಕುವ ಅಗತ್ಯವೂ ಕಂಡು ಬರುತ್ತಿದೆ. ವನ್ಯಜೀವಿಗಳ ಸಂರಕ್ಷಣೆಯೂ ಆಗಬೇಕು. ಅಮೂಲ್ಯವಾದ ಜೀವಹಾನಿಯೂ ತಪ್ಪಬೇಕು. ಮಾನವರ ಜೀವ ಉಳಿಸುವ ಕೆಲಸವೂ ಆಗಬೇಕಿದೆ ಎಂದು ತಿಳಿಸಿದರು.
ಇದು ನಿರ್ಧಾರವಲ್ಲ, ಒಂದು ಚಿಂತನೆ ಮಾತ್ರ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ ಆಗುವ ಅಗತ್ಯವಿದೆ. ಜೊತೆಗೆ ತತ್ಸಂಬಂಧವಾದ ಪ್ರಕರಣ ಸರ್ವೋಚ್ಚ ನ್ಯಾಯಾಲಯದಲ್ಲಿದ್ದು, ತಜ್ಞರು, ಕಾನೂನು ಪಂಡಿತರೊಂದಿಗೆ ಚರ್ಚಿಸಿ ನ್ಯಾಯಾಲಯಕ್ಕೆ ಪ್ರಸ್ತಾವನೆ ಸಲ್ಲಿಸುವ ಬಗ್ಗೆಯೂ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಬೇಕಾಗುತ್ತದೆ ಎಂದು ಈಶ್ವರ್ ಖಂಡ್ರೆ ಹೇಳಿದರು.
ಜೀವನವೂ ಇರಬೇಕು, ಜೀವನೋಪಾಯವೂ ಇರಬೇಕು ಎಂದ ಅವರು, ಯಾವ ಭಾಗದಲ್ಲಿ ಯಾವ ವನ್ಯಜೀವಿಗಳ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗುತ್ತದೊ ಅಲ್ಲಿ ಒಂದೆರೆಡು ವರ್ಷ ನಿಯಂತ್ರಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ. ಬೇರೆ ಬೇರೆ ರಾಜ್ಯಗಳಲ್ಲೂ ಇಂತಹ ಆಲೋಚನೆ, ಚಿಂತನೆ ಇದೆ. ಈ ಬಗ್ಗೆ ಸಾರ್ವಜನಿಕ ಚರ್ಚೆ ನಡೆಯುವ ಅಗತ್ಯವಿದೆ ಎಂದರು.
ಸ್ವಯಂ ಇಚ್ಛೆಯಿಂದ ಕಾಡಿನಿಂದ ಹೊರಬರಲು ಇಚ್ಛಿಸುವ ಅರಣ್ಯವಾಸಿಗಳ ಸ್ಥಳಾಂತರದ ಬಗ್ಗೆಯೂ ಸರಕಾರ ಗಂಭೀರ ಚಿಂತನೆ ನಡೆಸಿದ್ದು, ಆ ರೀತಿ ಸ್ವಯಂ ಪ್ರೇರಣೆಯಿಂದ ಹೊರಬರುವವರ ಪಟ್ಟಿ ಸಿದ್ಧಪಡಿಸಲು ತಿಳಿಸಿದ್ದೇವೆ, ಪಟ್ಟಿ ಸಿದ್ಧವಾದ ಬಳಿಕ ಎಷ್ಟು ಹಣದ ಅಗತ್ಯ ಬರುತ್ತದೆ. ಆಯವ್ಯಯದಲ್ಲಿ ಎಷ್ಟು ಹಣ ನೀಡಲಾಗಿದೆ. ಎಷ್ಟು ಕೊರತೆ ಆಗುತ್ತದೆ ಎಂಬ ಬಗ್ಗೆ ಹಣಕಾಸು ಸಚಿವರೂ ಆದ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಈಶ್ವರ್ ಖಂಡ್ರೆ ಹೇಳಿದರು.
ಈ ರೀತಿ ಅರಣ್ಯದಲ್ಲಿರುವ ವಸತಿಪ್ರದೇಶಗಳನ್ನು ಸ್ಥಳಾಂತರಿಸುವುದರಿಂದ ವನ್ಯಜೀವಿಗಳ ಆವಾಸ ಸ್ಥಾನ ವಿಸ್ತರಣೆ ಆಗುತ್ತದೆ. ಮೂಲಭೂತ ಸೌಕರ್ಯ ಇಲ್ಲದೆ ಬದುಕುತ್ತಿರುವ ಅರಣ್ಯವಾಸಿಗಳನ್ನೂ ಸಮಾಜದ ಮುಖ್ಯವಾಹಿನಿಗೆ ತಂದಂತೆ ಆಗುತ್ತದೆ ಎಂದು ಈಶ್ವರ್ ಖಂಡ್ರೆ ವಿವರಿಸಿದರು.
ಆನೆ ದಾಳಿಗೆ ಕಾಫಿ ಬೆಳೆಗಾರ ಸಾವು-ಸಂತಾಪ: ಇಂದು ಕಾಡಾನೆ ದಾಳಿಯಿಂದ ಕಾಫಿ ಬೆಳೆಗಾರರೊಬ್ಬರು ಮೃತಪಟ್ಟಿರುವುದು ಅತ್ಯಂತ ನೋವಿನ ಸಂಗತಿ. ಮಾನವ-ಆನೆ ಸಂಘರ್ಷ ತಡೆಯಲು ಸರಕಾರ ಮತ್ತು ಇಲಾಖೆ ಶಕ್ತಿ ಮೀರಿ ಪ್ರಯತ್ನ ಮಾಡುತ್ತಿದೆ. ಜೀವಕ್ಕೆ ಬೆಲೆ ನೀಡಲು ಸಾಧ್ಯವೆ ಇಲ್ಲ. ಈ ನೋವಿನ ಸಂದರ್ಭದಲ್ಲಿ ನೊಂದ ಕುಟುಂಬದ ಜೊತೆ ಸರಕಾರ ಇದೆ ಎಂದು ಅವರು ಹೇಳಿದರು.
ಆನೆಗಳ ಸಮಸ್ಯೆ ಪರಿಹರಿಸಲು ಆನೆ ಧಾಮ ಮಾಡುವ ಬಗ್ಗೆ ಸರಕಾರ ಯೋಜನೆ ರೂಪಿಸಿತ್ತು. ಅದಕ್ಕೆ ಕೇಂದ್ರ ಸರಕಾರದಿಂದ ಅನುಮತಿ ಸಿಗುವಲ್ಲಿ ತೊಡಕಾಗಿದೆ. ಈ ಸಮಸ್ಯೆ ಪರಿಹರಿಸಿಕೊಂಡು ಆನೆ ಧಾಮ ನಿರ್ಮಾಣದ ಬಗ್ಗೆ ಕ್ರಮ ವಹಿಸಲಾಗುವುದು ಎಂದು ಈಶ್ವರ್ ಖಂಡ್ರೆ ತಿಳಿಸಿದರು.

