ಛತ್ರಪತಿ ಸಂಭಾಜಿನಗರ: ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿರುವ 'ಕಾಕ್ರೋಚ್ ಜನತಾ ಪಾರ್ಟಿ' (CJP) ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರ ನಿವಾಸಕ್ಕೆ ಮಹಾರಾಷ್ಟ್ರ ಪೊಲೀಸರು ಭದ್ರತೆ ಒದಗಿಸಿದ್ದಾರೆ.
ಛತ್ರಪತಿ ಸಂಭಾಜಿನಗರದ ಎಂಐಡಿಸಿ ವಾಲುಜ್ ಪ್ರದೇಶದಲ್ಲಿರುವ ಅವರ ನಿವಾಸದ ಬಳಿ ಜನಸಂದಣಿ ಉಂಟಾಗದಂತೆ ನೋಡಿಕೊಳ್ಳಲು 24 ಗಂಟೆಗಳ ಪೊಲೀಸ್ ಕಾವಲು ನಿಯೋಜಿಸಲಾಗಿದೆ ಎಂದು ಪೊಲೀಸ್ ಉಪ ಆಯುಕ್ತ ಪಂಕಜ್ ಅತುಲ್ಕರ್ ತಿಳಿಸಿದ್ದಾರೆ.
ಕಳೆದ ವಾರ ಆನ್ಲೈನ್ನಲ್ಲಿ ಆರಂಭವಾದ CJP, ನಿರುದ್ಯೋಗ, ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಶಿಕ್ಷಣ ಕ್ಷೇತ್ರದ ಸಮಸ್ಯೆಗಳ ಕುರಿತು ಮೀಮ್ಸ್ ಮತ್ತು ರಾಜಕೀಯ ವಿಡಂಬನೆಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯತೆ ಗಳಿಸಿದೆ.
"ಸಿಜೆಪಿ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಚರ್ಚೆ ನಡೆಯುತ್ತಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಈ ಭದ್ರತೆ ಒದಗಿಸಲಾಗಿದೆ" ಎಂದು ಅತುಲ್ಕರ್ 'ಪಿಟಿಐ'ಗೆ ತಿಳಿಸಿದ್ದಾರೆ.
ಭದ್ರತೆಯನ್ನು ಬೆದರಿಕೆ ಹಿನ್ನೆಲೆಯಲ್ಲಿ ನೀಡಲಾಗಿದೆ ಎಂಬುದನ್ನು ಅವರು ತಳ್ಳಿಹಾಕಿದ್ದಾರೆ. "ಈ ಸಂಬಂಧ ಯಾವುದೇ ಪೊಲೀಸ್ ಠಾಣೆಗೆ ಔಪಚಾರಿಕ ದೂರು ಬಂದಿಲ್ಲ" ಎಂದೂ ಹೇಳಿದ್ದಾರೆ.
ಶನಿವಾರ ಅಭಿಜೀತ್ ದಿಪ್ಕೆ, ಸಿಜೆಪಿಯ ಎಲ್ಲ ಸಾಮಾಜಿಕ ಜಾಲತಾಣ ಖಾತೆಗಳು ಮತ್ತು ವೆಬ್ಸೈಟ್ ತೆಗೆದುಹಾಕಲಾಗಿದೆ ಅಥವಾ ಹ್ಯಾಕ್ ಮಾಡಲಾಗಿದೆ ಎಂದು ಆರೋಪಿಸಿದ್ದರು. ಇದರಿಂದ ಪಕ್ಷದ ಅಧಿಕೃತ ವೇದಿಕೆಗಳಿಗೆ ಪ್ರವೇಶ ಕಳೆದುಕೊಂಡಿದ್ದೇವೆ ಎಂದು ಅವರು ಹೇಳಿಕೊಂಡಿದ್ದರು.

