ಹೊಸದಿಲ್ಲಿ: ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಿರುವ ಸಂಭಾವ್ಯ ಅಪಾಯ ಹಾಗೂ ಪೊಲೀಸರ ಮೂಲಕ ಬೆದರಿಸುವ ತಂತ್ರದ ಕುರಿತು ಟ್ವಿಟರ್ ಆತಂಕ ವ್ಯಕ್ತಪಡಿಸಿ ಗುರುವಾರ ಹೇಳಿಕೆ ಬಿಡುಗಡೆ ಮಾಡಿತ್ತು. ಇದರ ಬೆನ್ನಿಗೇ ಟ್ವಿಟರ್ ಗೆ ಕೇಂದ್ರ ಸರಕಾರ ತಿರುಗೇಟು ನೀಡಿದೆ. ಈ ನೆಲದ ಕಾನೂನನ್ನು ಪಾಲಿಸುವಂತೆ ತಾಕೀತು ಮಾಡಿದೆ.
ದೇಶದ ಕಾನೂನನ್ನು ಪಾಲಿಸಲು ಶ್ರಮಿಸುವುದಾಗಿ ತನ್ನ ಹೇಳಿಕೆಯಲ್ಲಿ ತಿಳಿಸಿದ್ದ ಟ್ವಿಟರ್, ಸರಕಾರದ ನಿಯಮದಲ್ಲಿರುವ ಮುಕ್ತ ಸಂವಹನ ತಡೆಯುವ ಅಂಶಗಳನ್ನು ಬದಲಿಸುವಂತೆ ಕೇಳುವುದಾಗಿ ತಿಳಿಸಿತ್ತು.
ಇದಕ್ಕೆ ತಿರುಗೇಟು ನೀಡಿರುವ ಕೇಂದ್ರ ಮಾಹಿತಿ ಹಾಗೂ ಪ್ರಸಾರ ಸಚಿವಾಲಯ, ಟ್ವಿಟರ್ ಈ ನೆಲದ ಕಾನೂನನ್ನು ಪಾಲಿಸಬೇಕು. ಕಾನೂನು ಹಾಗೂ ನೀತಿ ನಿರೂಪಣೆ ಎಂಬುದು ಇಲ್ಲಿನ ಸಾರ್ವಭೌಮತ್ವದ ಪರಮಾಧಿಕಾರ. ಟ್ವಿಟರ್ ಒಂದು ಸಾಮಾಜಿಕ ಮಾಧ್ಯಮವಷ್ಟೇ.

