Dailyhunt Logo
  • Light mode
    Follow system
    Dark mode
    • Play Story
    • App Story
ರಾಜ್ಯ ಖನಿಜ ನಿಗಮದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ; ಯಾರು ಅರ್ಜಿ ಸಲ್ಲಿಸಬಹುದು?

ರಾಜ್ಯ ಖನಿಜ ನಿಗಮದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ; ಯಾರು ಅರ್ಜಿ ಸಲ್ಲಿಸಬಹುದು?

ರಾಜ್ಯ ಖನಿಜ ನಿಗಮದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ; ಯಾರು ಅರ್ಜಿ ಸಲ್ಲಿಸಬಹುದು?

ಕರ್ನಾಟಕ ರಾಜ್ಯ ಖನಿಜ ನಿಗಮ ನಿಯಮಿತ ಸಂಸ್ಥೆಯು 50 ಗುತ್ತಿಗೆ ಆಧಾರಿತ ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಹೊರಡಿಸಿದೆ.

ಸರ್ಕಾರಿ ಸ್ವಾಮ್ಯದ ಕರ್ನಾಟಕ ರಾಜ್ಯ ಖನಿಜ ನಿಗಮ ನಿಯಮಿತ (KSMCL) ಸಂಸ್ಥೆಯು ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಹೊರಡಿಸಿದೆ.

ನಿಗಮವು ವಿವಿಧ ವಿಭಾಗಗಳ ಒಟ್ಟು 50 ಗುತ್ತಿಗೆ ಆಧಾರಿತ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ. ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ನೇರ ಸಂದರ್ಶನ ಮೂಲಕ ಆಯ್ಕೆ ನಡೆಯಲಿದೆ. ಆಯ್ಕೆಯಾದ ಅಭ್ಯರ್ಥಿಗಳನ್ನು 11 ತಿಂಗಳ ಗುತ್ತಿಗೆ ಅವಧಿಗೆ ಅಥವಾ ನಿಯಮಿತ ನೇಮಕಾತಿ ನಡೆಯುವವರೆಗೆ ಸೇವೆಗೆ ನೇಮಕ ಮಾಡಲಾಗುತ್ತದೆ. ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಜುಲೈ 29ರಿಂದ 31ರವರೆಗೆ ನಡೆಯುವ ನೇರ ಸಂದರ್ಶನದಲ್ಲಿ ಭಾಗವಹಿಸಬೇಕು. ಆಸಕ್ತ ಅಭ್ಯರ್ಥಿಗಳು https://ksmc.karnataka.gov.in/27/recruitment/en ಬಳಸಿ ಅರ್ಜಿ ಸಲ್ಲಿಸಬಹುದು.

ನೇಮಕಾತಿ ವಿವರ

ಸಂಸ್ಥೆಯ ಹೆಸರು: ಕರ್ನಾಟಕ ರಾಜ್ಯ ಖನಿಜ ನಿಗಮ ನಿಯಮಿತ

ಹುದ್ದೆಯ ಹೆಸರು: ಎಂಜಿನಿಯರ್‌ಗಳು, ಎಲೆಕ್ಟ್ರಿಷಿಯನ್

ಒಟ್ಟು ಹುದ್ದೆಗಳು: 50

ಉದ್ಯೋಗ ಸ್ಥಳ: ಬೆಂಗಳೂರು - ಕರ್ನಾಟಕ

ಮಾಸಿಕ ಸಂಬಳ: 18,350 ರೂ.ರಿಂದ 50,000 ರೂ.ವರೆಗೆ!

ಪ್ರಮುಖ ದಿನಾಂಕಗಳು

* ಅರ್ಜಿ ಸಲ್ಲಿಕೆ ಆರಂಭ: 17 ಜುಲೈ 2026

* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28 ಜುಲೈ 2026

* ನೇರ ಸಂದರ್ಶನದ ದಿನಾಂಕ: 2026 ಜುಲೈ 29-31

ಹುದ್ದೆಗಳ ವಿವರ

ನೇಮಕಾತಿ ಪ್ರಕ್ರಿಯೆಯಲ್ಲಿ ಸಹಾಯಕ ವ್ಯವಸ್ಥಾಪಕ (ಪ್ರೊಡಕ್ಷನ್), ಸಹಾಯಕ ವ್ಯವಸ್ಥಾಪಕ (ಲೀಸ್ ಮತ್ತು ಎಕ್ಸ್‌ಪ್ಲೋರೇಶನ್), ಪರಿಸರ ಎಂಜಿನಿಯರ್, ಸಹಾಯಕ ಎಂಜಿನಿಯರ್ (ಮೆಕ್ಯಾನಿಕಲ್, ಎಲೆಕ್ಟ್ರಿಕಲ್ ಹಾಗೂ ಸಿವಿಲ್), ಸಹಾಯಕ ವ್ಯವಸ್ಥಾಪಕ (ಸರ್ವೇ), ಜೂನಿಯರ್ ಎಂಜಿನಿಯರ್, ಮೈನ್ ಫೋರ್‌ಮ್ಯಾನ್, ಮೈನ್ ಮೇಟ್, ಬ್ಲಾಸ್ಟರ್, ಸರ್ವೇ ಅಸಿಸ್ಟೆಂಟ್, ಎಲೆಕ್ಟ್ರಿಷಿಯನ್ ಹಾಗೂ ಬ್ಲಾಸ್ಟಿಂಗ್ ಹೆಲ್ಪರ್ ಸೇರಿದಂತೆ ವಿವಿಧ ಹುದ್ದೆಗಳು ಒಳಗೊಂಡಿವೆ. ಅತ್ಯಧಿಕ ವೇತನ ಸಹಾಯಕ ವ್ಯವಸ್ಥಾಪಕ (ಪ್ರೊಡಕ್ಷನ್) ಹುದ್ದೆಗೆ ನಿಗದಿಪಡಿಸಲಾಗಿದೆ.

ಶೈಕ್ಷಣಿಕ ಅರ್ಹತೆ

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮೈನಿಂಗ್ ಎಂಜಿನಿಯರಿಂಗ್, ಜಿಯಾಲಜಿ, ಅಪ್ಲೈಡ್ ಜಿಯಾಲಜಿ, ಅರ್ಥ್ ಸೈನ್ಸ್, ಎನ್ವಿರಾನ್‌ಮೆಂಟಲ್ ಎಂಜಿನಿಯರಿಂಗ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಸಿವಿಲ್ ಎಂಜಿನಿಯರಿಂಗ್ ಪದವಿ, ಸಂಬಂಧಿತ ಡಿಪ್ಲೊಮಾ, ಐಟಿಐ, ಎಸ್‌ಎಸ್‌ಎಲ್‌ಸಿ ಅಥವಾ ಇತರ ತಾಂತ್ರಿಕ ಅರ್ಹತೆಗಳನ್ನು ಹೊಂದಿರಬೇಕು. ಕೆಲವು ಹುದ್ದೆಗಳಿಗೆ ಮೈನ್ ಮ್ಯಾನೇಜರ್ ಸರ್ಟಿಫಿಕೇಟ್, ಮೈನ್ ಫೋರ್ಮ್ಯಾನ್ ಸರ್ಟಿಫಿಕೇಟ್, ಮೈನ್ ಮೇಟ್ ಸರ್ಟಿಫಿಕೇಟ್, ಬ್ಲಾಸ್ಟರ್ ಸರ್ಟಿಫಿಕೇಟ್ ಮತ್ತು ಮೈನ್ ಸರ್ವೇಯರ್ ಸರ್ಟಿಫಿಕೇಟ್ ಕಡ್ಡಾಯವಾಗಿದ್ದು, ಸಂಬಂಧಿತ ಕ್ಷೇತ್ರದಲ್ಲಿ 2 ರಿಂದ 10 ವರ್ಷಗಳ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ. ಗರಿಷ್ಠ ವಯೋಮಿತಿ 40 ವರ್ಷ ನಿಗದಿಪಡಿಸಲಾಗಿದೆ.

ಅರ್ಜಿ ಸಲ್ಲಿಸುವುದು ಹೇಗೆ?

* ಅಭ್ಯರ್ಥಿಗಳು ಮೊದಲು KSMCL ಅಧಿಕೃತ https://ksmc.karnataka.gov.in/27/recruitment/en ನಲ್ಲಿ ಮೊದಲ ಡೌನ್‌ಲೋಡ್ ಆಪ್ಷನ್‌ ಆಯ್ಕೆ ಮಾಡಿಕೊಂಡು ಅದರಲ್ಲಿ 7-8 ನೇ ಪೇಜಿನನಲ್ಲಿರುವ ಅರ್ಜಿಯನ್ನು ಡೌನ್‌ಲೋಡ್‌ ಮಾಡಿಕೊಂಡು ಸ್ವಹಸ್ತಾಕ್ಷರದಲ್ಲಿ ಭರ್ತಿ ಮಾಡಬೇಕು.

* ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ ಅಂಟಿಸಿ, ಎಸ್‌ಎಸ್‌ಎಲ್‌ಸಿ, ಪಿಯುಸಿ/ಐಟಿಐ/ಡಿಪ್ಲೊಮಾ/ಪದವಿ ಪ್ರಮಾಣಪತ್ರಗಳು, ಅನುಭವ ಪ್ರಮಾಣ ಪತ್ರ, ತಾಂತ್ರಿಕ ಪ್ರಮಾಣ ಪತ್ರಗಳು, ಗುರುತಿನ ಚೀಟಿ ಹಾಗೂ ಇತರೆ ಅಗತ್ಯ ದಾಖಲೆಗಳ ಸ್ವಯಂ ದೃಢೀಕರಿಸಿದ ಪ್ರತಿಗಳನ್ನು ಲಗತ್ತಿಸಬೇಕು.

* ಸಂದರ್ಶನಕ್ಕೆ ಹಾಜರಾಗುವ ವೇಳೆ ಈ ದಾಖಲೆಗಳ ಮೂಲ ಪ್ರತಿಗಳನ್ನು ಕಡ್ಡಾಯವಾಗಿ ತರಬೇಕು.‌

ಆಯ್ಕೆ ವಿಧಾನ ಹೇಗೆ?

* ಎಲ್ಲಾ ಸಂದರ್ಶನಗಳು ಬೆಳಿಗ್ಗೆ 10.30 ಗಂಟೆಗೆ ಆರಂಭವಾಗಲಿವೆ.

* ನೇರ ಸಂದರ್ಶನವನ್ನು ಹಂತ ಹಂತವಾಗಿ ಆಯೋಜಿಸಲಾಗಿದೆ. ಜುಲೈ 29ರಂದು ಸಹಾಯಕ ವ್ಯವಸ್ಥಾಪಕ, ಪರಿಸರ ಎಂಜಿನಿಯರ್ ಹಾಗೂ ವಿವಿಧ ಸಹಾಯಕ ಎಂಜಿನಿಯರ್ ಹುದ್ದೆಗಳ ಸಂದರ್ಶನ ನಡೆಯಲಿದೆ.

* ಜುಲೈ 30ರಂದು ಜೂನಿಯರ್ ಎಂಜಿನಿಯರ್, ಮೈನ್ ಫೋರ್‌ಮ್ಯಾನ್ ಮತ್ತು ಮೈನ್ ಮೇಟ್ ಹುದ್ದೆಗಳ ಅಭ್ಯರ್ಥಿಗಳು ಹಾಜರಾಗಬೇಕು.

* ಜುಲೈ 31ರಂದು ಬ್ಲಾಸ್ಟರ್, ಸರ್ವೇ ಅಸಿಸ್ಟೆಂಟ್, ಎಲೆಕ್ಟ್ರಿಷಿಯನ್ ಹಾಗೂ ಬ್ಲಾಸ್ಟಿಂಗ್ ಹೆಲ್ಪರ್ ಹುದ್ದೆಗಳಿಗಾಗಿ ಸಂದರ್ಶನ ನಡೆಯಲಿದೆ.

ಸಂದರ್ಶನ ನಡೆಯುವ ಸ್ಥಳ

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ನೇರವಾಗಿ ಕೆಳಗಿನ ವಿಳಾಸಕ್ಕೆ ನೇರ ಸಂದರ್ಶನಕ್ಕೆ ಹಾಜರಾಗಬಹುದು:

ಕರ್ನಾಟಕ ರಾಜ್ಯ ಖನಿಜ ನಿಗಮ ಲಿಮಿಟೆಡ್,

ಟಿಟಿಎಂಸಿ ಎ ಬ್ಲಾಕ್, 5ನೇ ಮಹಡಿ,

ಬಿಎಂಟಿಸಿ ಕಟ್ಟಡ, ಕೆಹೆಚ್ ರಸ್ತೆ, ಶಾಂತಿನಗರ,

ಬೆಂಗಳೂರು - 560027.

ಎಲ್ಲಿ ಕಾರ್ಯ ನಿರ್ವಹಿಸಬೇಕು?

ಆಯ್ಕೆ ಪ್ರಕ್ರಿಯೆ ವಿದ್ಯಾರ್ಹತೆ, ಅನುಭವ ಹಾಗೂ ನೇರ ಸಂದರ್ಶನದಲ್ಲಿ ಅಭ್ಯರ್ಥಿಯ ಪ್ರದರ್ಶನದ ಆಧಾರದ ಮೇಲೆ ನಡೆಯಲಿದೆ. ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳಿಗೆ ಪ್ರಯಾಣ ಭತ್ಯೆ ಅಥವಾ ದಿನಭತ್ಯೆ ನೀಡಲಾಗುವುದಿಲ್ಲ. ಆಯ್ಕೆಯಾದ ಅಭ್ಯರ್ಥಿಗಳು ರಾಜ್ಯದ ಯಾವುದೇ ಗಣಿ ಅಥವಾ KSMCL ಘಟಕದಲ್ಲಿ ಕರ್ತವ್ಯ ನಿರ್ವಹಿಸಲು ಸಿದ್ಧರಾಗಿರಬೇಕು.

Dailyhunt
Disclaimer: This content has not been generated, created or edited by Dailyhunt. Publisher: Varthabharathi