Dailyhunt
ʼಸಾಫ್ಟ್ವೇರ್ ತಪ್ಪುಗಳನ್ನೇ ಮತದಾರರ ಅನರ್ಹತೆ ಎಂದು ಪರಿಗಣನೆʼ?: ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಆಯೋಗದ ಪಾರದರ್ಶಕತೆ ಬಗ್ಗೆ ಪ್ರಶ್ನೆ ಎತ್ತಿದ altnews.in ವರದಿ

ʼಸಾಫ್ಟ್ವೇರ್ ತಪ್ಪುಗಳನ್ನೇ ಮತದಾರರ ಅನರ್ಹತೆ ಎಂದು ಪರಿಗಣನೆʼ?: ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಆಯೋಗದ ಪಾರದರ್ಶಕತೆ ಬಗ್ಗೆ ಪ್ರಶ್ನೆ ಎತ್ತಿದ altnews.in ವರದಿ

ಹೊಸದಿಲ್ಲಿ: ಪಶ್ಚಿಮ ಬಂಗಾಳದಲ್ಲಿನ ಎಸ್‌ಐಆರ್ ವಿಷಯದಲ್ಲಿ ಚುನಾವಣಾ ಆಯೋಗ ಸತ್ಯಗಳನ್ನು ಮರೆಮಾಚಿದೆ ಎಂದು altnews.in ವರದಿ ಮಾಡಿದೆ.

ಜನರೆದುರು ಡೇಟಾ ಇಟ್ಟಂತೆ ಮಾಡಿ, ಅದು ಯಾರಿಗೂ ಎಟುಕದ ಹಾಗೆ ಆಯೋಗ ಹೇಗೆ ಗೋಡೆ ನಿರ್ಮಿಸಿತ್ತು ಎಂಬುದನ್ನು ಅಂಕಿತ್‌ ಜೈನ್‌ ಅವರು altnews.in ತನಿಖಾ ವರದಿಯಲ್ಲಿ ವಿವರಿಸಿದ್ದಾರೆ.

ಎಸ್‌ಐಆರ್ ಪ್ರಕ್ರಿಯೆ ನಂತರ ಆಯೋಗ ಅಪ್ಲೋಡ್ ಮಾಡಿರುವ ಡೇಟಾ ಡಿಜಿಟಲ್ ರೂಪದಲ್ಲಿರದೆ, ಸ್ಕ್ಯಾನ್ ಮಾಡಲಾದ ಪಿಡಿಎಫ್ ಚಿತ್ರಗಳ ರೂಪದಲ್ಲಿತ್ತು. ಮತ್ತದನ್ನು ಪರಿಶೀಲಿಸಿ ವಿಶ್ಲೇಷಿಸಲು ಸಾಧ್ಯವಿರಲಿಲ್ಲ ಎಂದು ʼಆಲ್ಟ್ ನ್ಯೂಸ್ʼ ತನ್ನ ವರದಿಯಲ್ಲಿ ಹೇಳಿದೆ.

ಸಾರ್ವಜನಿಕವಾಗಿ ಲಭ್ಯವಿರಬೇಕಾದ ಡೇಟಾ ಪರಿಶೀಲನೆಗೆ ಅವಕಾಶವಾಗದ ರೀತಿಯಲ್ಲಿದ್ದರೆ ಅದರಿಂದ ಯಾರಿಗೆ ಪ್ರಯೋಜನ ಎಂಬ ಪ್ರಶ್ನೆಯನ್ನು ವರದಿಯಲ್ಲಿ ಎತ್ತಲಾಗಿದೆ. ಅದರಲ್ಲೂ ಎಸ್‌ಐಆರ್ ಬಗ್ಗೆ ಟಿಎಂಸಿ ತೀವ್ರ ವಿರೋಧ ವ್ಯಕ್ತಪಡಿಸಿರುವ ಹೊತ್ತಲ್ಲಿ ಆಯೋಗದ ಡೇಟಾಗಳು ಪಾರದರ್ಶಕವಾಗಿರದೇ ಹೋದಾಗ ಅನುಮಾನಗಳು ಸಹಜ. ಟಿಎಂಸಿ ಈ ಪ್ರಕ್ರಿಯೆಯಲ್ಲಿ ದೊಡ್ಡ ಪ್ರಮಾಣದ ಲೋಪಗಳ ಬಗ್ಗೆ ಆರೋಪಿಸಿದೆ.

ಬಿಜೆಪಿಯನ್ನು ಹೆಚ್ಚು ಬೆಂಬಲಿಸದ ಸಮುದಾಯಗಳ ಮತದಾರರನ್ನು ತೆಗೆದುಹಾಕಲಾಗಿದೆ ಅಥವಾ ಪರಿಶೀಲನೆಯಲ್ಲಿಡಲಾಗಿದೆ ಎಂದು ಅದು ಆರೋಪಿಸಿದೆ.

ಆಯೋಗದ ವಿರುದ್ಧವೂ ಆಕ್ರೋಶ ವ್ಯಕ್ತವಾಗಿದ್ದು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಮಾರ್ಚ್ 13 ರಂದು ದೋಷಾರೋಪಣೆ ನೋಟಿಸ್ ಮಂಡಿಸಲಾಯಿತು. ಅವರ ಮೇಲೆ ಪಕ್ಷಪಾತದ ನಡವಳಿಕೆಯ ಆರೋಪ ಮಾಡಲಾಗಿದೆ.

ಇಂಥ ಸನ್ನಿವೇಶದಲ್ಲಿ ಆಯೋಗದ ಡೇಟಾ ಯಾರಾದರೂ ಪರಿಶಿಲಿಸಲು ಸಾಧ್ಯವಾಗದ ಪಿಡಿಎಫ್ ಇಮೇಜ್ ಸ್ವರೂಪದಲ್ಲಿರುವುದು ಪ್ರಶ್ನೆಗಳನ್ನು ಇನ್ನೂ ಹೆಚ್ಚಿಸುತ್ತದೆ. ಇಡೀ ಪ್ರಕ್ರಿಯೆಯಲ್ಲಿ ಸಾಫ್ಟ್ವೇರ್ ಕಾರಣದಿಂದಾದ ತಪ್ಪುಗಳನ್ನೇ ಮತದಾರರ ಅನರ್ಹತೆ ಎಂದು ಪರಿಗಣಿಸಲಾಯಿತು ಎಂಬುದರ ಬಗ್ಗೆ ವರದಿ ಗಮನ ಸೆಳೆದಿದೆ.

ಹೆಸರುಗಳನ್ನು ಸಾಫ್ಟ್ವೇರ್ ತಪ್ಪಾಗಿ ಗ್ರಹಿಸಿರುವ ಲಿಪ್ಯಂತರದಲ್ಲಿನ ವ್ಯತ್ಯಾಸಗಳು, ಹಳೆಯ ಪಟ್ಟಿಗಳ ಕಳಪೆ ಗುಣಮಟ್ಟದ ಸ್ಕ್ಯಾನ್‌ಗಳು ಇವೆಲ್ಲದರ ಪರಿಣಾಮವಾಗಿ ಅರ್ಹ ಮತದಾರರನ್ನು ಅನುಮಾನದ ಪಟ್ಟಿಗೆ ಸೇರಿಸಲಾಯಿತು.

ಇದೆಲ್ಲದರ ನಡುವೆ ಆಯೋಗ, ಈಗಾಗಲೇ ಯಶಸ್ವಿಯಾಗಿ ಮ್ಯಾಪ್ ಮಾಡಲಾದ ಮತದಾರರನ್ನು ಮರು ಫ್ಲ್ಯಾಗ್ ಮಾಡುವ ಅಲ್ಗಾರಿದಮ್ ಅನ್ನು ಬಳಸಿತು. ಅದರ ಪರಿಣಾಮವಾಗಿ ಗೊಂದಲಗಳು ಮತ್ತಷ್ಟು ಹೆಚ್ಚಿದವು. ಅದರ ಬಗ್ಗೆ ಮತದಾರರಿಗೆ ಬಹಿರಂಗ ಸ್ಪಷ್ಟನೆ ಸಿಗಲಿಲ್ಲ. ಮಾತ್ರವಲ್ಲದೆ ಅಧಿಕಾರಿಗಳಿಗೂ ಸೂಕ್ತ ಮಾಹಿತಿ ಇರಲಿಲ್ಲ.

ಸುಮಾರು 1.36 ಕೋಟಿ ಮತದಾರರನ್ನು ತಾರ್ಕಿಕ ವ್ಯತ್ಯಾಸ ವರ್ಗದಲ್ಲಿ ಇರಿಸಲಾಯಿತು. ಅವರನ್ನು ಅಳಿಸಲಾಗಿಲ್ಲವಾದರೂ, ಅವರಿಗೆ ಮತ ಚಲಾಯಿಸಲು ಅವಕಾಶವಿರಲಿಲ್ಲ. ಇದು ಪೂರಕ ಪಟ್ಟಿಯಲ್ಲಿ ತೆರವುಗೊಳಿಸುವವರೆಗೆ ಮತದಾನದ ಹಕ್ಕನ್ನು ಅಮಾನತಿನಲ್ಲಿಡುವ ಸ್ಥಿತಿಯಾಗಿದೆ. ಮತ್ತು ಈ ಪ್ರಕ್ರಿಯೆಗೆ ಯಾವುದೇ ಗಡುವನ್ನು ನಿಗದಿಪಡಿಸಲಾಗಿಲ್ಲ. ಅದರ ನಡುವೆಯೇ ಚುನಾವಣೆ ಘೋಷಿಸಲಾಯಿತು.

ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಿದ ಸುಪ್ರೀಂ ಕೋರ್ಟ್, ಫೆಬ್ರವರಿ 20 ರಂದು, ನ್ಯಾಯಾಂಗ ಅಧಿಕಾರಿಗಳನ್ನು ನಿಯೋಜಿಸಲು ಅದು ಆರ್ಟಿಕಲ್ 142 ಅನ್ನು ಬಳಸಿತು. ಪ್ರಕರಣಗಳ ಹೊರೆ ನಿಭಾಯಿಸಲು ಜಾರ್ಖಂಡ್ ಮತ್ತು ಒಡಿಶಾದಿಂದ ಸಿಬ್ಬಂದಿಯನ್ನು ಕರೆಸಲಾಯಿತು.

ಆದರೆ ತೀರ್ಪು ನೀಡಿದ 32 ಲಕ್ಷ ಪ್ರಕರಣಗಳಲ್ಲಿ, ಸುಮಾರು 40% ರಷ್ಟು, ಅಂದರೆ ಸುಮಾರು 13 ಲಕ್ಷ ಹೆಸರುಗಳು ಮಾರ್ಚ್ 23 ರಂದು ಬಿಡುಗಡೆಯಾದ ಮೊದಲ ಪೂರಕ ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ.

1952 ರಿಂದ ಹದಿಮೂರು ಬಾರಿ SIR ಅನ್ನು ನಡೆಸಲಾಗಿದೆ. ಆದರೆ, ಯಾವುದೇ ಸ್ಪಷ್ಟ, ಬಹಿರಂಗ ವಿವರಣೆಯಿಲ್ಲದೆ ಲಕ್ಷಾಂತರ ಮತದಾರರನ್ನು ಬದಿಗಿರಿಸಿದ ಈ ತಾರ್ಕಿಕ ವ್ಯತ್ಯಾಸ ಎಂಬ ವರ್ಗವನ್ನು ಹಿಂದೆಂದೂ ಬಳಸಿರಲಿಲ್ಲ ಎಂದು ವರದಿ ಗಮನಿಸಿದೆ.

ಆಯೋಗ ಅಪ್ಲೋಡ್ ಮಾಡಿದ್ದ ಡೇಟಾ ಫೈಲ್ ಗಳನ್ನು ನೊಡುವುದು ಹೇಗೆ ಕಷ್ಟಕರ ಎಂದು ವರದಿ ವಿವರಿಸಿದೆ. ಈ ಅಡತಡೆ ಫೈಲ್ ಡೌನ್ಲೋಡ್ ಹಂತದಿಂದಲೇ ಶುರುವಾಗುತ್ತವೆ ಎಂದಿದೆ.

ಆಯೋಗದ ವೆಬ್‌ಸೈಟ್ ಒಂದು ಬಾರಿಗೆ ಹತ್ತು ಪ್ರದೇಶಗಳಿಗೆ ಮಾತ್ರ ಡೌನ್‌ಲೋಡ್‌ಗಳ ಅವಕಾಶ ನೀಡುತ್ತದೆ. ಆದರೆ ಪ್ರತಿಯೊಂದು ಫೈಲ್ ಕ್ಯಾಪ್ಚಾ ತಡೆ ಹೊಂದಿದ್ದು, ಈ ಆಟೊಮೇಷನ್ ವ್ಯವಸ್ಥೆಯನ್ನು ನಿರ್ಬಂಧಿಸಲಾಗಿದೆ.

ಹಸ್ತಚಾಲಿತ ಡೌನ್‌ಲೋಡ್ ಗಂಟೆಗಳಷ್ಟು ಸಮಯ ತೆಗೆದುಕೊಳ್ಳುತ್ತದೆ. ಅಂತೂ ಡೌನ್ಲೋಡ್ ಆಯಿತಲ್ಲ ಎಂದು ನಿಟ್ಟುಸಿರು ಬಿಟ್ಟರೆ ಸಿಗುವುದು ಸ್ಕ್ಯಾನ್ ಮಾಡಿದ PDF ಗಳು. ಸರಾಸರಿಯಾಗಿ, ಡಿಜಿಟಲ್ ಆಗಿ ಓದಬಹುದಾದ ಗಾತ್ರಕ್ಕಿಂತ 228 ಪಟ್ಟು ದೊಡ್ಡದಾಗಿರುವ ಫೈಲ್ ಗಳು.

ಆಧಾರ್, UPI ಮತ್ತು DigiLocker ನಂತಹ ವ್ಯವಸ್ಥೆಗಳನ್ನು ದೊಡ್ಡ ಪ್ರಮಾಣದಲ್ಲಿ ಬಳಸುವ ದೇಶದಲ್ಲಿ ಡೇಟಾಗಳನ್ನು ಹೀಗೆ ಓದಲಾಗದ ರೀತಿಯಲ್ಲಿ ಇಟ್ಟಿರುವುದು ಸಂಶಯಕ್ಕೆ ಕಾರಣವಾಗಿದೆ.

ಅಲ್ಲದೇ ಫೈಲ್‌ಗಳ ಒಳಗೆ ಮತದಾರರ ನಮೂದುಗಳಲ್ಲಿ ಇರುವ ವಾಟರ್‌ಮಾರ್ಕ್ ಅನೇಕ ಸಲ ಹೆಸರು ಅಸ್ಪಷ್ಟವಾಗಿ ಕಾಣುವಂತೆ ಮಾಡುತ್ತದೆ. ಅಂದರೆ, ಈ ಎಲ್ಲ ಹಂತಗಳಲ್ಲೂ ಒಂದಲ್ಲ ಒಂದು ತಡೆಯಿದೆ. ಮೊದಲು ಕ್ಯಾಪ್ಚಾ ತಡೆ, ಅನಂತರ ಪಿಡಿಎಫ್ ಫೈಲ್ ವಿಶ್ಲೇಷಣೆಗೆ ತಡೆ, ಹೆಸರು ಸ್ಪಷ್ಟವಾಗಿ ಕಾಣದಂತೆ ವಾಟರ್ ಮಾರ್ಕ್ ಇವೆ. ಎರಡು ಕ್ಷೇತ್ರಗಳ ಮತದಾರರ ದಾಖಲೆಗಳನ್ನು 558 ಪಿಡಿಎಫ್ ಫೈಲ್‌ಗಳಿಂದ ಡಿಜಿಟಲೀಕರಿಸಿ ನೋಡಲಾದ ಬಗ್ಗೆ ʼಆಲ್ಟ್ ನ್ಯೂಸ್ʼ ಹೇಳಿಕೊಂಡಿದೆ.

ಅದು ಕಂಡುಕೊಂಡಂತೆ, ಎರಡು ಕ್ಷೇತ್ರಗಳ ಒಟ್ಟು ಮತದಾರರಲ್ಲಿ ಮುಸ್ಲಿಮರು 39.5% ರಷ್ಟಿದ್ದಾರೆ. ತೀರ್ಪಿಗೆ ಒಳಪಟ್ಟ ಮತದಾರರಲ್ಲಿ ಮುಸ್ಲಿಮರು 66.5% ರಷ್ಟಿದ್ದಾರೆ.

ಒಂದು ನಿರ್ದಿಷ್ಟ ಸಮುದಾಯಕ್ಕೆ ಸಂಬಂಧಿಸಿದಂತೆ ತೀರ್ಪಿಗೆ ಒಳಪಟ್ಟ ಮತದಾರರ ಶೇಕಡಾವಾರು ಪ್ರಮಾಣ ಆ ಕ್ಷೇತ್ರದ ಒಟ್ಟು ಜನಸಂಖ್ಯೆಯಲ್ಲಿ ಆ ಸಮುದಾಯದ ಪಾಲನ್ನು ಮೀರಿದರೆ, ಅದು ಪರಿಶೀಲಿಸಬೇಕಾದ ಅಗತ್ಯವಿರುವ ಒಂದು ಮಾದರಿಯೆಂದು ಈ ವರದಿಯಲ್ಲಿ ನೋಡಲಾಗಿದೆ.

ಮುಖ್ಯಮಂತ್ರಿಯವರ ಸ್ವಂತ ಸ್ಥಾನವಾಗಿರುವ ಭವಾನಿಪುರದಲ್ಲಿ, ಮುಸ್ಲಿಮರು 21.9% ಮತದಾರರಾಗಿದ್ದರೂ, ತೀರ್ಪಿಗೆ ಒಳಪಟ್ಟವರು 51.8% ರಷ್ಟಿದ್ದಾರೆ. ಅಂದರೆ ನಾಲ್ಕು ಮುಸ್ಲಿಂ ಮತದಾರರಲ್ಲಿ ಒಬ್ಬರನ್ನು ತೀರ್ಪಿಗೆ ಒಳಪಡಿಸಲಾಗಿದೆ.

ಆದರೆ ಅದೇ ಕ್ಷೇತ್ರದ ಹಿಂದೂ ಮತದಾರರಲ್ಲಿ ತೀರ್ಪಿಗೆ ಒಳಪಟ್ಟವರು 17 ರಲ್ಲಿ ಒಬ್ಬರಿಗಿಂತ ಕಡಿಮೆ. ಈ ಡೇಟಾ ತೋರಿಸುತ್ತಿರುವಂತೆ, ಎರಡೂ ಕ್ಷೇತ್ರಗಳಾದ್ಯಂತ ಇದೇ ಸ್ಥಿರವಾದ ಮಾದರಿಯಾಗಿದ್ದು, ಆಯೋಗ ಇದರ ಬಗ್ಗೆ ಸ್ಪಷ್ಟನೆ ನೀಡಬೇಕಿದೆ ಎಂದು ವರದಿ ಒತ್ತಾಯಿಸಿದೆ.

ಚುನಾವಣಾ ಆಯೋಗದ ಬಳಿ ಈಗಾಗಲೇ ಈ ಡೇಟಾ ಸ್ಟ್ರಕ್ಚರ್ಡ್ ರೂಪದಲ್ಲಿ ಇದೆ. ಮತ್ತು PDF ಗಳನ್ನು ಡೇಟಾಬೇಸ್‌ಗಳಿಂದ ರಚಿಸಲಾಗಿದೆ.

ಹಾಗಾಗಿ, ಡಿಜಿಟಲ್ ಸ್ವರೂಪದಲ್ಲಿ ನೀಡದೆ, ಸ್ಕ್ಯಾನ್ ಮಾಡಿದ ಚಿತ್ರಗಳನ್ನು ಪ್ರಕಟಿಸುವುದು ಅದನ್ನು ಯಾರೂ ಪರಿಶೀಲಿಸಲು ಆಗಬಾರದು ಎಂಬ ಉದ್ದೇಶದ ಕ್ರಮವಾಗಿದೆ ಎಂದು ವರದಿ ಹೇಳುತ್ತದೆ.

ಪತ್ರಕರ್ತರು, ಸಂಶೋಧಕರು ಮತ್ತು ನಾಗರಿಕರು ಲೋಪ ಹುಡುಕಲು, ವಿಶ್ಲೇಷಿಸಲು ಮತ್ತು ವರದಿ ಮಾಡಲು ಸಾಧ್ಯವಾಗುವಂತಹ ವ್ಯವಸ್ಥೆ ಅಳವಡಿಸಬೇಕಿದೆ ಎಂದು ಆಲ್ಟ್ ನ್ಯೂಸ್ ಕೇಳಿದೆ.

ಪ್ರಜಾಪ್ರಭುತ್ವದಲ್ಲಿ, ತಾಂತ್ರಿಕವಾಗಿ ಸಾರ್ವಜನಿಕವಾಗಿರುವ ಡೇಟಾವನ್ನು ಪ್ರಾಯೋಗಿಕವಾಗಿ ಪ್ರವೇಶಿಸಬಹುದು. ಅಂಥ ಅವಕಾಶ ಇಲ್ಲವೆಂದಾದರೆ, ಅದು ತಾಂತ್ರಿಕ ಸಮಸ್ಯೆಯಾಗಿರದೆ, ರಾಜಕೀಯ ಉದ್ದೇಶದ ಕ್ರಮವಾಗಿದೆ ಎಂದು ವರದಿ ಹೇಳಿದೆ.

ಪರಿಶೀಲನೆಗೆ ಎಟುಕದಂತಿದ್ದ ಈ ಮತದಾರರ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲು ಆದ ವೆಚ್ಚ, ಈ ಹಂತವನ್ನು ತಲುಪಲು ಅನುಸರಿಸಿದ ಹಲವಾರು ಸುತ್ತಿನ ಪ್ರಯೋಗಗಳು ಎಲ್ಲದರ ಬಗ್ಗೆಯೂ ವರದಿಯಲ್ಲಿ ವಿವರಿಸಲಾಗಿದೆ.

ಚುನಾವಣಾ ಆಯೋಗ ಸಾರ್ವಜನಿಕ ಹಣ ಖರ್ಚು ಮಾಡಿ ERONET ಅನ್ನು ನಿರ್ಮಿಸಲು ಪ್ರಯತ್ನಿಸಿತು. ಈ ಕೇಂದ್ರೀಕೃತ ವ್ಯವಸ್ಥೆ ಬಳಸಿ ಒಂದು ಕೋಟಿಗೂ ಹೆಚ್ಚು ತಾರ್ಕಿಕ ವ್ಯತ್ಯಾಸಗಳನ್ನು ಎತ್ತಲಾಯಿತು. ಆದರೆ ಅದರ ಬಗ್ಗೆ ಸಾರ್ವಜನಿಕವಾಗಿ ವಿವರಿಸಲು ನಿರಾಕರಿಸಿತು.

ಹೋಲಿಸಿದರೆ, ಆಲ್ಟ್ ನ್ಯೂಸ್, ಆ ಧ್ವಜಗಳನ್ನು ಹುಡುಕಬಹುದಾದ, ವಿಂಗಡಿಸಬಹುದಾದ ಮತ್ತು ಮೊದಲ ಬಾರಿಗೆ ಸಾರ್ವಜನಿಕ ಪರಿಶೀಲನೆಗೆ ಮುಕ್ತವಾಗಿಸಲು ಕೆಲವು ನೂರು ಡಾಲರ್‌ಗಳನ್ನು ಖರ್ಚು ಮಾಡಿತು. ಇಷ್ಟರ ನಂತರ ಅದು ಪರಿಶೀಲಿಸಲು ಸಾಧ್ಯವಾಗದ ಪಿಡಿಎಫ್ ಫೈಲ್ ಗಳನ್ನು ಜನರೆದುದು ಇಟ್ಟಿತು. ಇದರ ಬಗ್ಗೆಯೂ ಅದು ಸಾಕಷ್ಟು ಸಮರ್ಥನೆಗಳನ್ನು ಕೊಟ್ಟಿದೆ. ಯಾರಾದರೂ ದುರ್ಬಳಕೆ ಮಾಡಿಕೊಳ್ಳಬಹುದೆಂದು ಇಮೇಜ್ ಫೈಲ್‌ಗಳಾಗಿ ಪ್ರಕಟಿಸಲು ನಿರ್ಧರಿಸಲಾಯಿತು ಎಂದಿದೆ. ಡಿಜಿಟಲ್ ಸ್ವರೂಪದಲ್ಲಿ ಕೊಟ್ಟರೆ, ಮತದಾರರ ಗೌಪ್ಯತೆಯನ್ನು ಉಲ್ಲಂಘಿಸುವ ಸಾಧ್ಯತೆಯಿದೆ ಎಂದು ಆಯೋಗ ವಾದಿಸಿದೆ.

ಸುಪ್ರೀಂ ಕೋರ್ಟ್ ಈ ವಾದವನ್ನು ಪರಿಶೀಲಿಸಲು ನಿರಾಕರಿಸಿತಲ್ಲದೆ, ಸ್ವರೂಪದ ಆಯ್ಕೆಯನ್ನು ಆಯೋಗದ ವಿವೇಚನೆಗೆ ಬಿಟ್ಟಿತು.

ಯಂತ್ರ-ಓದಬಹುದಾದ ಫೈಲ್‌ಗಳನ್ನು ಎಡಿಟ್ ಮಾಡಬಹುದು ಎಂಬ ಕಾರಣದಿಂದಾಗಿ ಅವುಗಳನ್ನು ನಿರ್ಬಂಧಿಸಲಾಗಿದೆ. ಅದು ದುರುಪಯೋಗವಾಗಬಹುದು ಎಂದು 2025 ರ ಆಗಸ್ಟ್ ನಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಹೇಳಿದರು. ಈ ವಾದವನ್ನು ತಾಂತ್ರಿಕವಾಗಿ ಅಸಮರ್ಥನೀಯ ಎಂದು ವ್ಯಾಪಕವಾಗಿ ಟೀಕಿಸಲಾಗಿದೆ.

ಡೇಟಾಸೆಟ್‌ನ ಡೌನ್‌ಲೋಡ್ ಮಾಡಿದ ಪ್ರತಿಯನ್ನು ಎಡಿಟ್ ಮಾಡುವುದರಿಂದ ಆಯೋಗದ ಬಳಿಯಿರುವ ಮೂಲ ದಾಖಲೆಗಳನ್ನು ಬದಲಾಯಿಸಲು ಸಾಧ್ಯವಿಲ್ಲ. ಅಧಿಕೃತ ಪಟ್ಟಿಗಳ ಸಮಗ್ರತೆ ಅವುಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವ ಸ್ವರೂಪವನ್ನು ಅವಲಂಬಿಸಿಲ್ಲ ಎಂದು ವಾದಿಸಲಾಗಿದೆ.

ಕೃಪೆ: altnews.in

Dailyhunt
Disclaimer: This content has not been generated, created or edited by Dailyhunt. Publisher: Varthabharathi