Dailyhunt Logo
  • Light mode
    Follow system
    Dark mode
    • Play Story
    • App Story
West Bengal | 12 ವರ್ಷದ ಬಾಲಕಿಯ ಅತ್ಯಾಚಾರ, ಕೊಲೆ : ಬಿಜೆಪಿ ನಾಯಕ ಸೇರಿ ಮೂವರ ಬಂಧನ

West Bengal | 12 ವರ್ಷದ ಬಾಲಕಿಯ ಅತ್ಯಾಚಾರ, ಕೊಲೆ : ಬಿಜೆಪಿ ನಾಯಕ ಸೇರಿ ಮೂವರ ಬಂಧನ

ಕೋಲ್ಕತಾ, ಜು. 7: ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಬರುಯಿಪುರ್ ಎಂಬಲ್ಲಿ ನಡೆದ ಹನ್ನೆರಡು ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಿಸಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ತಪ್ಪಿಸಿಕೊಳ್ಳಲು ಆರೋಪಿಗಳಲ್ಲಿ ಒಬ್ಬನಿಗೆ ಸಹಾಯ ಮಾಡಿದ ಆರೋಪದಲ್ಲಿ ಬಿಜೆಪಿಯ ಸ್ಥಳೀಯ ಪದಾಧಿಕಾರಿಯೊಬ್ಬನನ್ನೂ ಬಂಧಿಸಲಾಗಿದೆ.

ಬಾಲಕಿಯು ಶನಿವಾರ ನಾಪತ್ತೆಯಾಗಿದ್ದಳು. ರವಿವಾರ ಗೋಣಿಚೀಲವೊಂದರಲ್ಲಿ ತುಂಬಿಸಿಟ್ಟಿದ್ದ ಆಕೆಯ ಮೃತದೇಹವನ್ನು ಸುರ್ಜಯಪುರದಲ್ಲಿರುವ ಕೆರೆಯೊಂದರಿಂದ ವಶಪಡಿಸಿಕೊಳ್ಳಲಾಗಿತ್ತು.

ಆರಂಭದಲ್ಲಿ ಶನಿವಾರ ಬಾಲಕಿ ನಾಪತ್ತೆಯಾಗಿರುವ ಬಗ್ಗೆ ಮೊಕದ್ದಮೆ ದಾಖಲಾಗಿತ್ತು. ಪ್ರಾಥಮಿಕ ತನಿಖೆಯ ಬಳಿಕ, ಅತ್ಯಾಚಾರ, ಸಾಮೂಹಿಕ ಅತ್ಯಾಚಾರ, ಕೊಲೆ ಮತ್ತು ಸಾಕ್ಷ್ಯನಾಶ ಆರೋಪಗಳನ್ನು ಮೊಕದ್ದಮೆಗೆ ಸೇರಿಸಲಾಗಿದೆ. ಪೋಕ್ಸೊ ಕಾಯ್ದೆಯ ವಿಧಿಗಳಡಿಯಲ್ಲೂ ಮೊಕದ್ದಮೆ ದಾಖಲಿಸಲಾಗಿದೆ.

ಬಾಲಕಿಯ ಮೃತದೇಹ ಪತ್ತೆಯಾದ ಬಳಿಕ, ಸ್ಥಳೀಯರು ಭಾರೀ ಪ್ರತಿಭಟನೆ ನಡೆಸಿದರು. ಸ್ಥಳೀಯರು ಇಬ್ಬರು ಶಂಕಿತರನ್ನು ಹಿಡಿದು ಥಳಿಸಿದ್ದರು. ಅವರ ಪೈಕಿ, 26 ವರ್ಷದ ಓರ್ವ ಶಂಕಿತ ಸಾವಿಗೀಡಾಗಿದ್ದಾನೆ. ಅವನು ಆರೋಪಿಗಳ ಜೊತೆಗೆ ಇರುತ್ತಿದ್ದನು ಎಂದು ಹೇಳಲಾಗಿದೆ.

ಓರ್ವ ಆರೋಪಿ ತಪ್ಪಿಸಿಕೊಳ್ಳಲು ನೆರವು ನೀಡಿದ ಆರೋಪದಲ್ಲಿ ಪೊಲೀಸರು ಸ್ಥಳೀಯ ಬಿಜೆಪಿ ನಾಯಕ ಸಂತನು ಮೊಂಡಲ್ ಎಂಬಾತನನ್ನು ಬಂಧಿಸಿದ್ದಾರೆ.

ಸ್ಥಳೀಯರು ಇಬ್ಬರು ಶಂಕಿತರನ್ನು ಹಿಡಿದಾಗ ಸಂತನು ಮೊಂಡಲ್ ಮಧ್ಯಪ್ರವೇಶಿಸಿ ಅವರನ್ನು ಪೊಲೀಸ್ ಹೊರಠಾಣೆಯೊಂದಕ್ಕೆ ಕರೆದುಕೊಂಡು ಹೋಗಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಉದ್ರಿಕ್ತ ಸ್ಥಳೀಯರು ಹೊರಠಾಣೆಗೆ ಹೋಗಿ ಶಂಕಿತರಿಗೆ ಮತ್ತೆ ಥಳಿಸಿತು ಎನ್ನಲಾಗಿದೆ.

''ಹೊರಠಾಣೆಯಲ್ಲಿ ಪೊಲೀಸರು ಕಡಿಮೆ ಸಂಖ್ಯೆಯಲ್ಲಿದ್ದರು. ಬಿಜೆಪಿ ನಾಯಕನು ಶಂಕಿತರಿಗೆ ಸಹಾಯ ಮಾಡುತ್ತಿದ್ದಾನೆ ಎಂದು ಆರೋಪಿಸಿದ ಉದ್ರಿಕ್ತ ಜನರು, ಅವರನ್ನು ಮತ್ತೆ ಥಳಿಸಿದರು'' ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

''ಮುಖ್ಯ ಆರೋಪಿ ಆನಂದ ಸರ್ದಾರ್ ಈ ಗೊಂದಲದ ಲಾಭ ಪಡೆದುಕೊಂಡು ಪರಾರಿಯಾದನು'' ಎಂದು ಅವರು ಹೇಳಿದರು.

ಆನಂದ್ ಸರ್ದಾರ್‌ನನ್ನು ಸೋಮವಾರ ಬಂಧಿಸಲಾಯಿತು. ಬಂಧಿತ ಇತರ ಇಬ್ಬರನ್ನು ದಿವಾಕರ ಸರ್ದಾರ್ ಮತ್ತು ಪ್ರವಾಸ್ ಮೊಂಡಲ್ ಎಂದು ಗುರುತಿಸಲಾಗಿದೆ.

ಹಿಂಸಾಚಾರಕ್ಕೆ ಸಂಬಂಧಿಸಿ ಪೊಲೀಸರು ಮೂರು ಹೆಚ್ಚುವರಿ ಪ್ರಕರಣಗಳನ್ನು ದಾಖಲಿಸಿದ್ದಾರೆ. ಇವುಗಳು ಗುಂಪು ಥಳಿತದಿಂದ ಓರ್ವ ಶಂಕಿತ ಸಾವಿಗೀಡಾಗಿರುವುದು, ರೈಲ್ವೇ ಹಳಿಗಳಿಗೆ ಹಾನಿಯಾಗಿರುವುದು ಹಾಗೂ ಭದ್ರತಾ ಸಿಬ್ಬಂದಿ ಮತ್ತು ಪೊಲೀಸ್ ವಾಹನಗಳ ಮೇಲಿನ ದಾಳಿಗೆ ಸಂಬಂಧಿಸಿದ ಪ್ರಕರಣಗಳಾಗಿವೆ.

Dailyhunt
Disclaimer: This content has not been generated, created or edited by Dailyhunt. Publisher: Varthabharathi