ಕೋಲ್ಕತ್ತಾ : ಆರ್ಜಿ ಕರ್ ಅತ್ಯಾಚಾರ, ಕೊಲೆ ಪ್ರಕರಣದ ಸಂತ್ರಸ್ತೆಯ ತಾಯಿ, ಪಾನಿಹಟಿಯ ಬಿಜೆಪಿ ಶಾಸಕಿ ರತ್ನಾ ದೇಬನಾಥ್, ಬರುಯಿಪುರದಲ್ಲಿ ನಡೆದ ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಹಿಂದಿನ ಟಿಎಂಸಿ ಸರಕಾರವನ್ನು ದೂಷಿಸಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ರತ್ನಾ ದೇಬನಾಥ್, ರಾಜ್ಯದಲ್ಲಿ ಇಂತಹ ಅಪರಾಧ ಹೆಚ್ಚಳಕ್ಕೆ ಈ ಹಿಂದೆ ಅಧಿಕಾರದಲ್ಲಿದ್ದ ಸರಕಾರವೇ ಕಾರಣ.
ಎಡರಂಗ ಮತ್ತು ತೃಣಮೂಲ ಕಾಂಗ್ರೆಸ್ ಶಿಕ್ಷಣ ಮತ್ತು ಆರೋಗ್ಯಕ್ಕೆ ಆದ್ಯತೆ ನೀಡುವ ಬದಲು ಯುವಕರಲ್ಲಿ ಜೂಜಾಟ ಮತ್ತು ಮದ್ಯಪಾನವನ್ನು ಪ್ರೋತ್ಸಾಹಿಸಿವೆ. ಇದರ ಪರಿಣಾಮ ಈಗ ಕಂಡು ಬರುತ್ತಿದೆ ಎಂದು ಹೇಳಿದರು.
"ಇದು ಬಹಳ ದುಃಖಕರ ಸಂಗತಿ. ಇದರಿಂದ ನನಗೆ ನೋವಾಗಿದೆ. ಮತ್ತೋರ್ವ ಪೋಷಕರು ಕೂಡ ಇದೇ ರೀತಿಯ ದುರಂತವನ್ನು ಅನುಭವಿಸಬೇಕಾಯಿತಲ್ಲ ಎಂದು ನಾನು ಇಡೀ ರಾತ್ರಿ ಅಳುತ್ತಾ ಕಳೆದಿದ್ದೇನೆ" ಎಂದು ಹೇಳಿದರು.
ಬಿಜೆಪಿ ಅಧಿಕಾರಕ್ಕೆ ಬಂದ 7 ದಿನಗಳಲ್ಲಿ ನನ್ನ ಮಗಳಿಗೆ ನ್ಯಾಯ ಸಿಗುತ್ತದೆ ಎಂದು ಮುಖ್ಯಮಂತ್ರಿ ಸುವೇಂದು ಅಧಿಕಾರಿ ಭರವಸೆ ನೀಡಿದ್ದರು. ಆದರೆ ಇದೀಗ ಅವರು ಅಧಿಕಾರಕ್ಕೆ ಬಂದು ಎರಡು ತಿಂಗಳು ಕಳೆದಿವೆ ಎಂದು ದೇಬನಾಥ್ ಹೇಳಿದರು.
ಸರಕಾರದ ಮೇಲಿನ ವಿಶ್ವಾಸವನ್ನು ಪುನರುಚ್ಚರಿಸಿದ ದೇಬನಾಥ್, ಆರೋಪಿಗಳು ಕಠಿಣ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ. ಬರುಯಿಪುರದಲ್ಲಿ ಶಂಕಿತನ ಹತ್ಯೆಯನ್ನು ಖಂಡಿಸಿದ ಅವರು, ಜನರು ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳಬಾರದು. ಆರೋಪಿಗಳಾಗಿದ್ದಲ್ಲಿ ಪೊಲೀಸರಿಗೆ ಒಪ್ಪಿಸಬೇಕಿತ್ತು ಎಂದು ಹೇಳಿದರು.
ಕೃತ್ಯದಲ್ಲಿ ಸ್ಥಳೀಯ ಬಿಜೆಪಿ ನಾಯಕನೋರ್ವ ಭಾಗಿಯಾಗಿದ್ದಾನೆ ಎಂಬ ಆರೋಪವನ್ನೂ ದೇಬನಾಥ್ ತಳ್ಳಿಹಾಕಿದ್ದಾರೆ. ಚುನಾವಣಾ ಗೆಲುವಿನ ನಂತರ ಅನೇಕ ಟಿಎಂಸಿ ಕಾರ್ಯಕರ್ತರು ತಮ್ಮನ್ನು ಬಿಜೆಪಿ ಬೆಂಬಲಿಗರು ಎಂದು ಹೇಳುತ್ತಿದ್ದಾರೆ ಎಂದು ಹೇಳಿದರು.

