Dailyhunt Logo
  • Light mode
    Follow system
    Dark mode
    • Play Story
    • App Story
24 ಗಂಟೆಗಳಲ್ಲಿ 3 ತೈಲ ಹಡುಗಗಳ ಮೇಲೆ ದಾಳಿ; ನಿಯಂತ್ರಣಕ್ಕೆ ಬಾರದ ಹಾರ್ಮುಜ್‌ ಜಲಸಂಧಿ!

24 ಗಂಟೆಗಳಲ್ಲಿ 3 ತೈಲ ಹಡುಗಗಳ ಮೇಲೆ ದಾಳಿ; ನಿಯಂತ್ರಣಕ್ಕೆ ಬಾರದ ಹಾರ್ಮುಜ್‌ ಜಲಸಂಧಿ!

Vijay Karnataka 6 days ago

ಟೆಹ್ರಾನ್‌: ಕಳೆದ 24 ಗಂಟೆಗಳಲ್ಲಿ ಹಾರ್ಮುಜ್ ಜಲಸಂಧಿಯಲ್ಲಿ ಮೂರು ತೈಲ ಟ್ಯಾಂಕರ್‌ಗಳ ಮೇಲೆ ಸ್ಪೋಟಕಗಳು ಡಿಕ್ಕಿ ಹೊಡೆದಿದ್ದು, ಅಮೆರಿಕ-ಇರಾನ್‌ ಶಾಂತಿ ಒಪ್ಪಂದದ ಕುರಿತಾದ ಜಾಗತಿಕ ಭರವಸೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಹಾರ್ಮುಜ್‌ ನಿಯಂತ್ರಣಕ್ಕಾಗಿ ಅಮೆರಿಕ ಮತ್ತು ಇರಾನ್‌ ನಡುವೆ ಈಗಲೂ ಸ್ಪರ್ಧೆ ಏರ್ಪಟ್ಟಿರುವುದು ಖಚಿತವಾಗಿದೆ.

ಹಾರ್ಮುಜ್‌ ಜಲಸಂಧಿಯಲ್ಲಿ ಹಡಗುಗಳ ಸಂಚಾರಕ್ಕೆ ಇರಾನ್‌ ಸೇವಾ ಶುಲ್ಕ ವಿಧಿಸುವ ಬಗ್ಗೆ ಗಂಭೀರವಾಗಿ ಚಿಂತಿಸುತ್ತಿದೆ. ಅಮೆರಿಕ ಇಂತಹ ಶುಲ್ಕವನ್ನು ವಿರೋಧಿಸುತ್ತಿದ್ದು, ಅಗತ್ಯ ಬಿದ್ದರೆ ಜಲಸಂಧಿಯನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವುದಾಗಿ ಇರಾನ್‌ಗೆ ಎಚ್ಚರಿಕೆ ನೀಡಿದೆ. ಈ ಮಧ್ಯೆ ಜಲಸಂಧಿ ಬಳಿ ತೈಲ ಟ್ಯಾಂಕರ್‌ಗಳ ಮೇಲಿನ ದಾಳಿಗಳು ನಿಲ್ಲದಿರುವುದು ಆತಂಕಕ್ಕೆ ಕಾರಣವಾಗಿದೆ.

ಪರ್ಷಿಯನ್ ಕೊಲ್ಲಿಯ ಕಿರಿದಾದ ಮುಖಭಾಗದ ಮೂಲಕ ಚಲಿಸುವ ವೇಳೆ, ಕಳೆದ 24 ಗಂಟೆಗಳಲ್ಲಿ ಒಟ್ಟು ಮೂರು ವಾಣಿಜ್ಯ ಹಡಗುಗಳ ಮೇಲೆ ಯುಎವಿ ದಾಳಿಗಳು ನಡೆದಿವೆ ಎಂದು ಯುಕೆ ಕಡಲ ಸಂಸ್ಥೆ ಇಂದು (ಜುಲೈ 7-ಮಂಗಳವಾರ) ತಿಳಿಸಿದೆ. ದಾಳಿಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲವಾದರೂ, ತೈಲ ಟ್ಯಾಂಕರ್‌ಗೆ ಹಾನಿಯಾಗಿದೆ ಎಂದು ವರದಿ ಹೇಳಿದೆ.


ದಾಳಿಗೊಳಗಾದ ಮೂರು ಹಡಗುಗಳ ಪೈಕಿ ಒಂದು ಕತಾರ್‌ಗೆ ಸೇರಿದ್ದು, ಇದನ್ನು ಅಲ್ಲಿನ ಸರ್ಕಾರ ತೀವ್ರವಾಗಿ ಖಂಡಿಸಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಕತಾರ್‌ ವಿದೇಶಾಂಗ ಸಚಿವಾಲಯದ ವಕ್ತಾರ ಮಜೀದ್ ಅಲ್-ಅನ್ಸಾರಿ, "ನಮ್ಮ ಅಲ್ ರೆಕಯ್ಯತ್ ಹಡಗನ್ನ ಗುರಿಯಾಗಿಸಿಕೊಂಡು ದಾಳಿ ನಡೆಸಿರುವುದು, ಅಂತಾರಾಷ್ಟ್ರೀಯ ಸಂಚರಣೆ ಮತ್ತು ಜಾಗತಿಕ ಇಂಧನ ಭದ್ರತೆಯ ಮೇಲೆ ನಡೆದ ಸ್ವೀಕಾರಾರ್ಹವಲ್ಲದ ದಾಳಿ" ಎಂದು ಗುಡುಗಿದ್ದಾರೆ.

ಹಾರ್ಮುಜ್ ಜಲಸಂಧಿಯ ಮೂಲಕ ತಾನು ಅನುಮೋದಿಸುವ ಮಾರ್ಗ ಮಾತ್ರ ಸುರಕ್ಷಿತ ಎಂದು ಇರಾನ್ ಘೋಷಿಸಿದೆ. ಆದಾಗ್ಯೂ, ಈ ಭಾಗದಲ್ಲಿ ತೈಲ ಟ್ಯಾಂಕರ್‌ಗಳು ದಾಳಿಗೆ ತುತ್ತಾಗುತ್ತಿವೆ. "ಯುಎಸ್ ಪಡೆಗಳು ಹಾರ್ಮುಜ್ ಜಲಸಂಧಿಯಲ್ಲಿ ಹಸ್ತಕ್ಷೇಪ ಮಾಡಿದರೆ, ಅವುಗಳನ್ನು ತ್ವರಿತ ಮತ್ತು ನಿರ್ಣಾಯಕ ಪ್ರತಿಕ್ರಿಯೆಗೆ ಒಳಪಡಿಸಲಾಗುತ್ತದೆ" ಎಂದು ಐಅರ್‌ಜಿಸಿ ಗಂಭೀರ ಎಚ್ಚರಿಕೆ ನೀಡಿದೆ.

ಕಳೆದ ತಿಂಗಳು ಯುದ್ಧ ಕೊನೆಗೊಳಿಸಲು ಅಮೆರಿಕ-ಇರಾನ್‌ 14-ಅಂಶಗಳ ಕದನ ವಿರಾಮ ಒಪ್ಪಂದಕ್ಕೆ ಸಮ್ಮತಿ ಸೂಚಿಸಲಾಗಿತ್ತು. ಇದಾದ ಬಳಿಕ ಸುಮಾರು 200ಕ್ಕೂ ಹೆಚ್ಚು ಹಡಗುಗಳು ಹಾರ್ಮುಜ್ ಜಲಸಂಧಿಯ ಮೂಲಕ ಹಾದು ಹೋಗಿವೆ. ಆದಾಗ್ಯೂ, ತೈಲ ಟ್ಯಾಂಕರ್‌ಗಳ ಮೇಲಿನ ದಾಳಿ ಕಡಿಮೆಯಾಗಿಲ್ಲ.


ಸದ್ಯ ಫೆ.28ರಂದು ಅಮೆರಿಕ ಮತ್ತು ಇಸ್ರೇಲ್‌ ನಡೆಸಿದ ಜಂಟಿ ದಾಳಿಯಲ್ಲಿ ಕೊಲ್ಲಲ್ಪಟ್ಟ ಇರಾನ್‌ ಮಾಜಿ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮನಿ ಅವರ ಅಂತ್ಯಕ್ರಿಯೆ ಪ್ರಕ್ರಿಯೆ ನಡೆಯುತ್ತಿದ್ದು, ಜುಲೈ 9ರ ಬಳಿಕ ಶಾಂತಿ ಒಪ್ಪಂದ ಮಾತುಕತೆಗಳು ಪುನರಾರಂಭವಾಗುವ ಸಾಧ್ಯತೆ ಇದೆ. ಆದರೆ ಹಾರ್ಮುಜ್‌ ಜಲಸಂಧಿಯಲ್ಲಿ ತೈಲ ಟ್ಯಾಂಕರ್‌ಗಳ ಮೇಲಿನ ದಾಳಿಯನ್ನು ನೋಡಿದರೆ, ಶಾಂತಿ ಒಪ್ಪಂದ ಜಾರಿಯಾಗುವ ಭರವಸೆ ಮೇಲೆ ಕಾರ್ಮೋಡ ಕವಿದಿದೆ ಎಂದು ಹೇಳಬಹುದು.

Dailyhunt
Disclaimer: This content has not been generated, created or edited by Dailyhunt. Publisher: Vijay Karnataka