Dailyhunt Logo
  • Light mode
    Follow system
    Dark mode
    • Play Story
    • App Story
ಚಿಂತಾಮಣಿ: ಚುಡಾಯಿಸಿದ ಯುವಕರಿಗೆ ಕಪಾಳಮೋಕ್ಷ ಮಾಡಿದ ಯುವತಿ ಮನೆಗೆ ನುಗ್ಗಿ  ಕೊಲೆಗೆ ಯತ್ನಿಸಿ ಪುಂಡರ ಗ್ಯಾಂಗ್ ದಾಂಧಲೆ!

ಚಿಂತಾಮಣಿ: ಚುಡಾಯಿಸಿದ ಯುವಕರಿಗೆ ಕಪಾಳಮೋಕ್ಷ ಮಾಡಿದ ಯುವತಿ ಮನೆಗೆ ನುಗ್ಗಿ ಕೊಲೆಗೆ ಯತ್ನಿಸಿ ಪುಂಡರ ಗ್ಯಾಂಗ್ ದಾಂಧಲೆ!

Vijay Karnataka 2 weeks ago

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ನಡುರಸ್ತೆಯಲ್ಲಿ ನಿಂತು ದಾರಿಯಲ್ಲಿ ನಡೆದುಕೊಂಡು ಬರುತ್ತಿದ್ದ ಯುವತಿಯೊರ್ವಳನ್ನು ಚುಡಾಯಿಸಿ ಆಕೆಯೊಂದಿಗೆ ಅಸಭ್ಯ ವರ್ತನೆ ಮಾಡಿ ಪುಂಡರಿಗೆ ಆಕೆ ಕಪಾಳಮೋಕ್ಷ ನಡೆಸಿದ್ದು, ಇದರಿಂದ ರೊಚ್ಚಿಗೆದ್ದ ಪುಂಡರ ಗ್ಯಾಂಗ್‌ ಆಕೆಯ ಮನೆಗೆ ನುಗ್ಗಿ ದಾಂಧಲೆ ಎಬ್ಬಿಸಿ, ಆಕೆಯ ಮೇಲೆ ಹಲ್ಲೆ ನಡೆಸಿ, ಕೊಲೆಗೆ ಯತ್ನಿಸಿರುವ ಆಘಾತಕಾರಿ ಘಟನೆ ನಡೆದಿದೆ.

ಚುಡಾಯಿಸಿದ್ದನ್ನು ವಿರೋಧಿಸಿ ಕಪಾಳಮೋಕ್ಷ ಮಾಡಿದ್ದ ಯುವತಿ

ಚಿಕ್ಕಬಳ್ಳಾಪುರದ ಚಿಂತಾಮಣಿಯ ನಿವಾಸಿಯಾಗಿರುವ ಮೇಘನಾ ಎಂಬ ಯುವತಿ ಜು.1ರಂದು ಸಂಜೆ ಸುಮಾರಿಗೆ ಶಾಲೆಗೆ ಹೋಗಿದ್ದ ತನ್ನ ತಂಗಿಯನ್ನು ಕರೆದುಕೊಂಡು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಅದೇ ರಸ್ತೆಯಲ್ಲಿದ್ದ ಸ್ಥಳೀಯ ಪುಂಡರ ಗ್ಯಾಂಗ್‌ ಒಂದು ಅವರಿಬ್ಬರನ್ನು ಅಡ್ಡಗಟ್ಟಿದ್ದು, ಆಕೆಯನ್ನು ಚುಡಾಯಿಸಿದ್ದಲ್ಲದೆ, ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಯುವತಿ ಮೇಘಾನ ಅವರಲ್ಲಿ ಒಬ್ಬರಿಗೆ ಕಪಾಳಮೋಕ್ಷ ನಡೆಸಿ ಅಲ್ಲಿಂದ ಆಕೆಯ ತಂಗಿಯನ್ನು ಸುರಕ್ಷಿತವಾಗಿ ಕರೆದುಕೊಂಡು ಹೊರಟು ಹೋಗಿದ್ದಾಳೆ. ಈ ವಿಚಾರವನ್ನು ಆಕೆ ತನ್ನ ತಾಯಿಗೂ ತಿಳಿಸಿದ್ದಾಳೆ. ಈ ವೇಳೆ ಆ ಯುವಕರು ಪಾನಮತ್ತರಾಗಿದ್ದರು ಎಂಬ ವಿಚಾರ ಸಹ ತಿಳಿದುಬಂದಿದೆ.

ಯುವತಿ ಮನೆಗೆ ನುಗ್ಗಿ ಪುಂಡರ ಗ್ಯಾಂಗ್ ದಾಂಧಲೆ

ಆದರೆ, ಮೇಘನಾ ಕಪಾಳಕ್ಕೆ ಹೊಡೆದದ್ದರಿಂದ ಕೆರಳಿದ್ದ ಆ ಯುವಕರ ಗ್ಯಾಂಗ್‌ ರಾತ್ರಿ ವೇಳೆ ನೇರವಾಗಿ ಆಕೆಯ ಮನೆಗೆ ನುಗ್ಗಿ ಭೀಕರ ದಾಂಧಲೆ ನಡೆಸಿದೆ. ಅಷ್ಟೇ ಅಲ್ಲದೆ, ಮನೆಯ ಮೇಲೆ ಮನಸೋಇಚ್ಛೆ ಕಲ್ಲು ತೂರಾಟ ನಡೆಸಿ ಆತಂಕದ ವಾತಾವರಣ ಸೃಷ್ಟಿಸಿದೆ. ಜಗಳ ತಾರಕಕ್ಕೇರಿದಾಗ ಪುಂಡರು ಅತ್ಯಂತ ಕ್ರೂರವಾಗಿ ವರ್ತಿಸಿದ್ದು, ಆಕೆಯ ಮೇಲೆ ಹಲ್ಲೆಗೆ ಮುಂದಾಗಿದ್ದಲ್ಲದೆ, ಆಕೆಯ ಕುತ್ತಿಗೆಯನ್ನು ಚಾಕುವಿನಿಂದ ಕೊಯ್ಯಲು ಯತ್ನಿಸಿ ವಿಕೃತಿ ಮೆರೆದಿದ್ದಾರೆ. ಮನೆಯ ಬಳಿ ಗಲಾಟೆ ಮತ್ತು ಕಿರುಚಾಟದ ಸದ್ದು ಕೇಳಿ ತಕ್ಷಣವೇ ಎಚ್ಚೆತ್ತ ಸ್ಥಳೀಯ ನಿವಾಸಿಗಳು ಗುಂಪಾಗಿ ಧಾವಿಸಿ ಬಂದು ರಕ್ಷಣೆಗೆ ಮುಂದಾಗಿದ್ದಾರೆ. ಅದೃಷ್ಟವಶಾತ್, ಯುವತಿ ಮೇಘನಾ ಪ್ರಾಣಪಾಯದಿಂದ ಪಾರಾಗಿದ್ದಾಳೆ.

ಈ ದಾಳಿಯಿಂದಾಗಿ ಮೇಘನಾ ಹಾಗೂ ಆಕೆಯ ತಾಯಿಗೂ ಗಾಯಗಳಾಗಿವೆ ಎಂದು ತಿಳಿದುಬಂದಿದ್ದು, ತಕ್ಷಣವೇ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಈ ಕೃತ್ಯ ಎಸಗಿದ ಆ ಯುವಕರ ಗ್ಯಾಂಗ್‌ ಅದೇ ಊರಿನ ನಿವಾಸಿಗಳಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ತನಿಖೆಯನ್ನು ಚುರುಕುಗೊಳಿಸಿದ್ದಾರೆ.
Dailyhunt
Disclaimer: This content has not been generated, created or edited by Dailyhunt. Publisher: Vijay Karnataka