Dailyhunt
ಚುನಾವಣೆಯಲ್ಲಿ ಬಿಜೆಪಿ ಮಾಸ್ಟರ್‌ ಸ್ಟ್ರೋಕ್‌! ಬಾಗಲಕೋಟೆ ಪ್ರಚಾರದ ಅಖಾಡಾಕ್ಕೆ ಯತ್ನಾಳ ಎಂಟ್ರಿ, ಹಿಂದೂಗಳ ಮತಕ್ಕೆ ಗಾಳ

ಚುನಾವಣೆಯಲ್ಲಿ ಬಿಜೆಪಿ ಮಾಸ್ಟರ್‌ ಸ್ಟ್ರೋಕ್‌! ಬಾಗಲಕೋಟೆ ಪ್ರಚಾರದ ಅಖಾಡಾಕ್ಕೆ ಯತ್ನಾಳ ಎಂಟ್ರಿ, ಹಿಂದೂಗಳ ಮತಕ್ಕೆ ಗಾಳ

Vijay Karnataka 1 week ago

ಬಾಗಲಕೋಟೆ: ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ತಂತ್ರಕ್ಕೆ ಪ್ರತಿತಂತ್ರ ಹೆಣೆದಿರುವ ಬಿಜೆಪಿ, ಪ್ರಚಾರಕ್ಕೆ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳಗೆ ಸಮ್ಮತಿಸುವ ಮೂಲಕ ಮಾಸ್ಟರ್‌ ಸ್ಟ್ರೋಕ್ ಕೊಟ್ಟಿದೆ.ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪಸಿಂಗ್‌ ಸುರ್ಜೇವಾಲಾ ಬುಧವಾರ ಚುನಾವಣೆ ಉಸ್ತುವಾರಿ ಗಳ ಸಭೆ ನಡೆಸಿ ಸಚಿವರಿಗೂ ಟಾಸ್ಕ್‌ ಕೊಟ್ಟಿದ್ದರು.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿಸ್ತಾರಕರ ಸಭೆ ನಡೆಸಿ ಗೇಮ್‌ ಪ್ಲ್ಯಾನ್‌ ಸಿದ್ಧಪಡಿಸಿದ್ದರು. ಏತನ್ಮಧ್ಯೆ ಗುರುವಾರ ಅಖಾಡಕ್ಕೆ ಯತ್ನಾಳ ಎಂಟ್ರಿ ಕೊಡುವ ಮೂಲಕ ಬಿಜೆಪಿ ಮತಗಳಿಕೆ ರಾಜಕೀಯಕ್ಕೆ ಹೊಸ ದಿಕ್ಕು ತೋರಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.


ಮತಗಳಿಕೆ ಪ್ಲ್ಯಾನ್‌

ಅಶಿಸ್ತು ಪ್ರದರ್ಶಿಸಿದ ಆರೋಪದ ಮೇಲೆ ಬಿಜೆಪಿಯಿಂದ ಉಚ್ಚಾಟಿತರಾದ ಯತ್ನಾಳ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದರು. ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ನಿರಂತರ ವಾಗ್ದಾಳಿ ನಡೆಸಿದ್ದರು. ಆದರೆ ಪಕ್ಷ, ಮುಖಂಡರು ಹಾಗೂ ಕಾರ್ಯಕರ್ತರ ಬಗ್ಗೆ ಮೃದು ಧೋರಣೆ ಹೊಂದಿದ್ದರು. ಮಾಜಿ ಶಾಸಕ, ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠರಿಗೆ ಯತ್ನಾಳ ಆತ್ಮೀಯರು. 2018, 2023 ರಲ್ಲಿ ಚರಂತಿಮಠ ಪರ ಪ್ರಚಾರ ನಡೆಸಿದ್ದರು.

ಉಪ ಚುನಾವಣೆ ಭರಾಟೆ ಶುರುವಾಗುತ್ತಿದ್ದಂತೆ ಪ್ರಚಾರಕ್ಕೆ ಯತ್ನಾಳ ಕರೆತರಬೇಕು ಎಂಬ ಬೇಡಿಕೆ ಕಾರ್ಯಕರ್ತರಲ್ಲಿತ್ತು. ಬಾಗಲಕೋಟೆ, ವಿಜಯಪುರ ಜಿಲ್ಲೆಗಳಲ್ಲಿ ಯತ್ನಾಳ ಕೇಸರಿಯ ಬ್ರ್ಯಾಂಡೆಡ್‌ ನಾಯಕ. ಸಾವಿರಾರು ಅಭಿಮಾನಿಗಳು ಎರಡೂ ಜಿಲ್ಲೆಯಲ್ಲಿದ್ದಾರೆ. ಪ್ರಬಲ ಹಿಂದುತ್ವ ಪ್ರತಿಪಾದಿಸುವ ಯತ್ನಾಳ ಯುವ ಜನತೆ ಮತ ಸೆಳೆಯಬಲ್ಲರು. ಹೀಗಾಗಿ ಯತ್ನಾಳ ಕರೆತರಬೇಕು ಎಂಬ ಒತ್ತಾಯ ಮುಖಂಡರಲ್ಲೂಇತ್ತು.

ಇತ್ತೀಚೆಗೆ ಮಾಜಿ ಸಿಎಂ ಯಡಿಯೂರಪ್ಪ, ರಾಜ್ಯಾಧ್ಯಕ್ಷ ವಿಜಯೇಂದ್ರ ಕೂಡ '' ಪ್ರಚಾರಕ್ಕೆ ಯಾರೇ ಬಂದರೂ ಸ್ವಾಗತ'' ಎಂದು ಹೇಳಿ ಯತ್ನಾಳ ಪ್ರವೇಶಕ್ಕೆ ಗ್ರೀನ್‌ ಸಿಗ್ನಲ್‌ ನೀಡಿದ್ದರು. ಜಿಲ್ಲೆಯ ಸ್ಥಳೀಯ ಮುಖಂಡರಲ್ಲಿ ಈ ಮಾತು ಉತ್ಸಾಹ ಮೂಡಿಸಿತ್ತು. ಪಕ್ಷದ ಹೈಕಮಾಂಡ್‌ ಅನುಮೋದನೆ ದೊರೆತ ನಂತರವೇ ಯತ್ನಾಳ ಪ್ರಚಾರಕ್ಕೆ ಎಂಟ್ರಿ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ನಾಲ್ಕು ದಿನ ಬಾಗಲಕೋಟೆ ಯಲ್ಲಿ ವಾಸ್ತವ್ಯ ಹೂಡಿದ್ದ ರಾಜ್ಯಾಧ್ಯಕ್ಷ ವಿಜಯೇಂದ್ರ ಬುಧವಾರ ಬೆಂಗಳೂರಿಗೆ ತೆರಳಿದರು. ಇತ್ತ ಯತ್ನಾಳ ಪ್ರಚಾರದ ಅಖಾಡಾಕ್ಕೆ ಧುಮುಕಿದ್ದಾರೆ.

ಘರ್‌ ವಾಪ್ಸಿ ?

ಯತ್ನಾಳ ಉಪ ಚುನಾವಣೆ ಪ್ರಚಾರದಲ್ಲಿ ಕಾಣಿಸಿಕೊಂಡಿದ್ದು ಬಿಜೆಪಿ ವಾಪಸ್ಸಾತಿಗೆ ಸೂಚನೆಯೇ ಎಂಬ ಗುಮಾನಿ ಶುರುವಾಗಿದೆ. ಕೇಸರಿ ಪಾಳಯದ ಹಾರ್ಡ್‌ ಕೋರ್‌ ನಾಯಕನನ್ನು ವಾಪಸ್‌ ಕರೆಸಿಕೊಳ್ಳುವ ಯತ್ನ ನಡೆದಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಹಿಂದುತ್ವ, ಪಂಚಮಸಾಲಿ ಮತಗಳು ಚದುರಿ ಹೋಗದಂತೆ ಎಚ್ಚರಿಕೆ ವಹಿಸಲು ಬಿಜೆಪಿ ಮತ್ತೊಂದು ಹೆಜ್ಜೆಯಿಟ್ಟಿದೆ. ಕಾಂಗ್ರೆಸ್‌ ಸಚಿವರು, ಶಾಸಕರು ನಾನಾ ಸಮುದಾಯಗಳ ಸಭೆ ನಡೆಸಿ ಮತ ಸಂಗ್ರಹಕ್ಕೆ ಮುಂದಾಗಿದ್ದಾರೆ. ಬಿಜೆಪಿ ಈ ತಂತ್ರಕ್ಕೆ ಪ್ರತಿಯಾಗಿ ಹಿಂದುತ್ವದ ಸಾಮೂಹಿಕ ಮತ ಗಳಿಕೆಗೆ ಮುಂದಾಗಿದೆ.

ಕ್ಷೇತ್ರದಲ್ಲಿ ರೋಡ್‌ ಶೋ

ಬಾಗಲಕೋಟೆ ಯಲ್ಲಿ ಪಂಚಮಸಾಲಿ ಸಮಾಜದ ಸಭೆಯಲ್ಲಿ ಯತ್ನಾಳ ಭಾಗಿಯಾದರು. ಭಗವತಿ, ರಾಂಪೂರ, ಬಾಗಲಕೋಟೆ ನಗರ ಪ್ರದೇಶದಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪರ ರೋಡ್‌ ಶೋ ನಡೆಸಿದರು.
Dailyhunt
Disclaimer: This content has not been generated, created or edited by Dailyhunt. Publisher: Vijay Karnataka