Dailyhunt Logo
  • Light mode
    Follow system
    Dark mode
    • Play Story
    • App Story
ಡಿಕೆ ಶಿವಕುಮಾರ್ ಸಿಎಂ ಸ್ಥಾನಕ್ಕೇರುವ ಬಗ್ಗೆ ಪಾಸ್‌ ಆಗದ ಶಾಸಕ ಇಕ್ಬಾಲ್‌ ಭವಿಷ್ಯವಾಣಿ: ಸಿಎಂ ಬದಲಾವಣೆ ವಿಚಾರದಲ್ಲಿ ಜ್ಯೋತಿಷಿಯಾಗಿ ನಗೆಪಾಟಲಿಗೀಡಾದ ಎಂಎಲ್‌ಎ

ಡಿಕೆ ಶಿವಕುಮಾರ್ ಸಿಎಂ ಸ್ಥಾನಕ್ಕೇರುವ ಬಗ್ಗೆ ಪಾಸ್‌ ಆಗದ ಶಾಸಕ ಇಕ್ಬಾಲ್‌ ಭವಿಷ್ಯವಾಣಿ: ಸಿಎಂ ಬದಲಾವಣೆ ವಿಚಾರದಲ್ಲಿ ಜ್ಯೋತಿಷಿಯಾಗಿ ನಗೆಪಾಟಲಿಗೀಡಾದ ಎಂಎಲ್‌ಎ

Vijay Karnataka 1 week ago

ರಾಮನಗರ: ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಚರ್ಚೆ ಆಗಾಗ ಮುನ್ನೆಲೆಗೆ ಬರುತ್ತಲೇ ಇದೆ. ಈ ಚರ್ಚೆ ಮುನ್ನೆಲೆಗೆ ಬಂದಾಗಲೆಲ್ಲ ರಾಮನಗರ ಶಾಸಕ ಇಕ್ಬಾಲ್‌ ಹುಸೇನ್‌ ತಮ್ಮ ಭವಿಷ್ಯವಾಣಿಯ ಮೂಲಕ ಸುದ್ದಿಯಾಗುತ್ತಿದ್ದಾರೆ. ಆದರೆ ಪದೇಪದೆ ಅವರ ಕುರ್ಚಿ ಭವಿಷ್ಯ ಸುಳ್ಳಾಗುತ್ತಿದ್ದು, ಶಾಸಕರು ರಾಜ್ಯಮಟ್ಟದಲ್ಲಿ ನಗೆಪಾಟಲಿಗೀಡಾಗುವಂತಾಗಿದೆ.

ಹೌದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರ ಪರಮ ಶಿಷ್ಯ ಎಂದೇ ಗುರುತಿಸಿಕೊಂಡಿರುವ ಶಾಸಕ ಇಕ್ಬಾಲ್‌ ಹುಸೇನ್‌, ತಮ್ಮ ನಾಯಕ ಮುಖ್ಯಮಂತ್ರಿಯಾಗಬೇಕು ಎನ್ನುವ ಉದ್ದೇಶದಿಂದ ಅವರ ಪರ ಬ್ಯಾಟ್‌ ಬೀಸುವ ಉತ್ಸಾಹದಲ್ಲಿ ನೀಡುತ್ತಿರುವ ಹೇಳಿಕೆಗಳಿಂದ ಸ್ವಪಕ್ಷದಲ್ಲಿಯೇ ಅಪಸ್ವರಗಳು ಕೇಳಿಬರುತ್ತಿರುವುದು ಒಂದು ಕಡೆಯಾದರೆ, ಮತ್ತೊಂದೆಡೆ ರಾಜ್ಯ ಮಟ್ಟದಲ್ಲಿ ದೊಡ್ಡ ಮಟ್ಟದ ಟ್ರೋಲ್‌ಗೂ ಆಹಾರವಾಗುವಂತಾಗಿದೆ.


ಠುಸ್‌ ಪಟಾಕಿಯಾಗಿತ್ತು ಜ.6ರ ಡೇಟ್‌:

ಹಿಂದಿನಿಂದಲೂ ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಮಾತನಾಡುತ್ತಲೇ ಬರುತ್ತಿದ್ದ ಇಕ್ಬಾಲ್‌ ಹುಸೇನ್‌, ಡಿಸೆಂಬರ್‌ನಲ್ಲಿ ಮೊಟ್ಟಮೊದಲ ಬಾರಿಗೆ ಸಿಎಂ ಬದಲಾವಣೆಯ ಬಗ್ಗೆ ಭಾರೀ ಭವಿಷ್ಯವನ್ನೇ ನುಡಿದಿದ್ದರು. ಭಗವಂತನ ಆಶೀರ್ವಾದದಿಂದ ಜ. 6 ಅಥವಾ ಜ. 9ಕ್ಕೆ ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿ ಆಗುವುದು 200 ಪ್ರತಿಶತ ಖಚಿತ ಎಂದು ಭವಿಷ್ಯ ನುಡಿದಿದ್ದರು.

ಅಷ್ಟೇ ಅಲ್ಲ, ಇದು ನನ್ನ ಬಾಯಿಂದ ಬಂದ ವಿಚಾರವಲ್ಲ. ನಾವು ನಂಬುವ ಶರಣರು, ಶಕ್ತಿ ಪಡೆದವರು ಹೇಳಿರುವ ವಿಚಾರ ಎನ್ನುವ ಹೇಳಿಕೆಯ ಮೂಲಕ ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನ ಮೂಡುವಂತೆ ಮಾಡಿದ್ದರು. ಆದರೆ ಜ.9 ಕಳೆದರೂ ರಾಜ್ಯದಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ.

ಸಂಕ್ರಾಂತಿ ಮುಹೂರ್ತ ನೀಡಿದ್ದ ಇಕ್ಬಾಲ್‌:

ತಾವು ಕೊಟ್ಟ ಮೊದಲೆರಡು ದಿನಾಂಕ ಠುಸ್‌ ಪಟಾಕಿ ಆದ ಬೆನ್ನಲ್ಲೇ ಶಾಸಕ ಇಕ್ಬಾಲ್‌ ಹುಸೇನ್‌ ಅವರು ಮೂರನೇಯ ದಿನಾಂಕವನ್ನು ನೀಡಿದ್ದರು. ಜ. 6 ಫೇಲ್‌ ಆದ್ರೂ ಜ. 9 ಫೇಲ್‌ ಆಗುವುದಿಲ್ಲ ಎಂದುಕೊಂಡಿದ್ದೆ. ಆದರೆ ಈಗ ಸಂಕ್ರಾಂತಿ ಆದ ಮೇಲೆ ಡಿಕೆಶಿ ಸಿಎಂ ಆಗೇ ಆಗ್ತಾರೆ ಎಂಬ ಹೇಳಿಕೆ ನೀಡಿದ್ದರು. ಆದರೆ ಸಂಕ್ರಾಂತಿ ಹಬ್ಬದ ನಂತರವೂ ರಾಜ್ಯ ರಾಜಕೀಯದಲ್ಲಿ ಸಂಕ್ರಮಣವಾಗಿರಲಿಲ್ಲ.

ಗುರುಗಳು ಜಪಕ್ಕೆ ಕುಳಿತಿದ್ದಾರೆ:

ಪದೇ ಪದೆ ತಮ್ಮ ಭವಿಷ್ಯ ಸುಳ್ಳಾಗುತ್ತಿದ್ದರೂ, ರಾಜ್ಯ ಮಟ್ಟದಲ್ಲಿಅವಮಾನವಾಗುತ್ತಿದ್ದರೂ ಇಕ್ಬಾಲ್‌ ಹುಸೇನ್‌ ಮಾತ್ರ ತಮ್ಮ ವರಸೆ ಬದಲಿಸಿರಲಿಲ್ಲ. ಮತ್ತೆ ಫೆ.17ರಂದು ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಶಾಸಕ, ನಮ್ಮೆನ್ನೆಲ್ಲಾ ಆಶೀರ್ವದಿಸುವ ಗುರುಗಳು ಜಪದಲ್ಲಿ ಕೂತಿದ್ದಾರೆ. ಅವರು ನಮಗೆ ದಿನಾಂಕವನ್ನು ನೀಡುತ್ತಾರೆ. ನಾವು ಶೀಘ್ರದಲ್ಲೇ ಮೂರನೇ ಡೇಟ್‌ ಕೊಡುತ್ತೇವೆ. ಡಿಕೆ ಶಿವಕುಮಾರ್‌ ಅವರು ಮುಖ್ಯಮಂತ್ರಿ ಆಗುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದಿದ್ದರು.

ಒಟ್ಟಾರೆ ತಮ್ಮ ನಾಯಕನ ಮೇಲಿರುವ ಅತೀವ ಅಭಿಮಾನ ಹಾಗೂ ನಿಷ್ಠೆಯನ್ನು ಪ್ರದರ್ಶಿಸಲು ಇಕ್ಬಾಲ್‌ ಹುಸೇನ್‌ ಇಂತಹ ಹೇಳಿಕೆ ನೀಡುತ್ತಿರಬಹುದು. ಆದರೆ, ಅಧಿಕೃತವಾಗಿ ಹೈಕಮಾಂಡ್‌ನಿಂದ ಯಾವುದೇ ಸೂಚನೆ ಇಲ್ಲದಿದ್ದರೂ, ಜವಾಬ್ದಾರಿಯುತ ಸ್ಥಾನದಲ್ಲಿರುವ ಶಾಸಕರು ಹೀಗೆ ಪದೇ ಪದೆ ಭವಿಷ್ಯ ನುಡಿದು ಅದು ಸುಳ್ಳಾಗುತ್ತಿರುವುದು ಅವರ ರಾಜಕೀಯ ವರ್ಚಸ್ಸಿಗೆ ಧಕ್ಕೆ ತರುತ್ತಿದೆ ಎಂಬುದು ಸಾರ್ವಜನಿಕ ವಲಯದ ಅಭಿಪ್ರಾಯ. ಮೇ 15ರ ಹೊಸ ದಿನಾಂಕವಾದರೂ ನಿಜವಾಗುತ್ತದೆಯೇ ಅಥವಾ ಇದು ಕೂಡ ಹಳೆಯ ಭವಿಷ್ಯಗಳ ಪಟ್ಟಿಗೆ ಸೇರುತ್ತದೆಯೇ ಎನ್ನುವುದು ಸದ್ಯಕ್ಕಿರುವ ಕುತೂಹಲ.


ಮೇ 15ರ ಡೇಟ್‌ ಕೊಟ್ಟ ಇಕ್ಬಾಲ್‌ ಹುಸೇನ್‌

ತಾವು ಕೊಟ್ಟ ಎಲ್ಲಾ ಡೇಟ್‌ ಗಳು ನಪಾಸು ಆದರೂ ಇಕ್ಬಾಲ್‌ ಹುಸೇನ್‌ ಇದೀಗ ಮತ್ತೊಂದು ಭವಿಷ್ಯವಾಣಿ ನುಡಿದಿದ್ದಾರೆ. ಡಿಕೆ ಶಿವಕುಮಾರ್‌ ಮೇ 15ರೊಳಗೆ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎನ್ನುವ ಮೂಲಕ ಮತ್ತೊಂದು ಡೇಟ್‌ ನೀಡಿದ್ದಾರೆ. ಇತ್ತೀಚಿನ ಕೆಲ ಬೆಳವಣಿಗೆಗಳನ್ನು ನೋಡಿದರೆ ಸದ್ಯಕ್ಕೆ ರಾಜ್ಯ ರಾಜಕೀಯದಲ್ಲಿ ಯಾವುದೇ ಬದಲಾವಣೆಯಾಗುವಂತೆ ಕಾಣಿಸುತ್ತಿಲ್ಲ. ಆದರೂ ಇಕ್ಬಾಲ್‌ ಹುಸೇನ್‌ ಇದೀಗ ನಾಲ್ಕನೇ ಬಾರಿ ಭವಿಷ್ಯ ನುಡಿದಿದ್ದು, ಈ ಭವಿಷ್ಯ ಎಷ್ಟರ ಮಟ್ಟಿಗೆ ನಿಜವಾಗಲಿದೆ ಎನ್ನುವುದನ್ನು ಕಾದುನೋಡಬೇಕು.

ಸೀರಿಯಸ್‌ ಆಗಿ ತೆಗೆದುಕೊಳ್ಳಬೇಡಿ

ರಾಮನಗರ ಶಾಸಕ ಇಕ್ಬಾಲ್‌ ಹುಸೇನ್‌ ಅವರು ಪದೇಪದೆ ನೀಡುತ್ತಿರುವ ಹೇಳಿಕೆಗಳ ಬಗ್ಗೆ ಖುದ್ದು ಡಿಕೆ ಶಿವಕುಮಾರ್‌ ಅವರೇ ಅಸಮಾಧಾನ ವ್ಯಕ್ತಪಡಿಸಿದ್ದರು. ಇಕ್ಬಾಲ್‌ ಹೇಳಿಕೆ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ಡಿಕೆಶಿ ಇಕ್ಬಾಲ್‌ ಹುಸೇನ್‌ ಏನೇನೋ ಮಾತಾಡ್ತಾರೆ. ಅವರ ಹೇಳಿಕೆಗಳನ್ನು ಸೀರಿಯಸ್‌ ಆಗಿ ತೆಗೆದುಕೊಳ್ಳಬೇಡಿ ಎಂದಿದ್ದರು.

ನಗೆಪಾಟಲಿಗೀಡಾಗುತ್ತಿರುವ ಶಾಸಕರು

ಶಾಸಕರ ಈ ವರ್ತನೆಯ ಬಗ್ಗೆ ಸ್ವಪಕ್ಷದಲ್ಲೇ ಅಪಸ್ವರ ಕೇಳಿಬರುತ್ತಿದೆ. ಸಿಎಂ ಸಿದ್ದರಾಮಯ್ಯ ಬೆಂಬಲಿಗರು ಸೇರಿದಂತೆ ಹಲವರು ಇಕ್ಬಾಲ್‌ ಹುಸೇನ್‌ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌ ನಾಯಕರು ಇಕ್ಬಾಲ್‌ ಹುಸೇನ್‌ ಅವರು ಶಾಸಕರೋ ಅಥವಾ ಜ್ಯೋತಿಷಿಯೋ? ಎಂದು ಲೇವಡಿ ಮಾಡುತ್ತಿದ್ದಾರೆ.
Dailyhunt
Disclaimer: This content has not been generated, created or edited by Dailyhunt. Publisher: Vijay Karnataka