ಬೆಂಗಳೂರು: ಸಚಿವ ಸ್ಥಾನ ಸಿಕ್ಕಿಲ್ಲ ಎಂದು ಅಸಮಾಧಾನಗೊಂಡಿದ್ದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ರಾಜೀನಾಮೆ ನೀಡಿದ್ದರು. ಆದರೆ ಇದೀಗ ಅವರು ತಮ್ಮ ನಿರ್ಧಾರದಿಂದ ವಾಪಸ್ ಆಗಿದ್ದಾರೆ. ರಾಜೀನಾಮೆಯನ್ನು ವಾಪಸ್ ಪಡೆಯುವುದಾಗಿ ಪತ್ರದ ಮೂಲಕ ತಿಳಿಸಿದ್ದಾರೆ.
ಸಂಪುಟ ವಿಸ್ತರಣೆಯಲ್ಲಿ 19 ಮಂದಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದರು. ಯಶವಂತರಾಯಗೌಡ ಪಾಟೀಲ್ ಅವರು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು. ಅದರೆ ಅವರಿಗೆ ಸಂಪುಟದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಇದರಿಂದ ಬೇಸೆತ್ತ ಅವರು, ಸ್ಪೀಕರ್ ಅವರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದ್ದರು.
ಈ ನಡುವೆ ಶಾಸಕ ಯಶವಂತರಾಯಗೌಡ ಪಾಟೀಲ್ ಗೆ ಕರೆ ಮಾಡಿ ಸಿಎಂ ಡಿಕೆ ಶಿವಕುಮಾರ್ ಅವರು ಮಾತನಾಡಿದ್ದರು. ರಾಜೀನಾಮೆ ವಾಪಸ್ ಪಡೆಯುವಂತೆ ಮಾತುಕತೆ ನಡೆಸಿದ್ದರು. ಇದೀಗ ಸಿಎಂ ಮಾತುಕತೆ ಹಿನ್ನಲೆಯಲ್ಲಿ ಯಶವಂತರಾಯಗೌಡ ಪಾಟೀಲ್ ರಾಜೀನಾಮೆ ವಾಪಸ್ ಪಡೆಯುತ್ತಿದ್ದೇನೆಂದು ಕರ್ನಾಟಕ ವಿಧಾನಸಭಾ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
ದುಡುಕಿನ ನಿರ್ಧಾರ ಏನು ಮಾಡಬೇಡಿ ಎಂದಿದ್ದಾರೆ!
ಸಚಿವ ಸ್ಥಾನ ಸಿಗದೆ ಇರುವ ಕಾರಣಕ್ಕಾಗಿ ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ಅಸಮಾಧಾನಗೊಂಡಿದ್ದರು.ಅವರು ರಾಜೀನಾಮೆ ಕೊಡುವ ಎಚ್ಚರಿಕೆ ನೀಡಿದ್ದರು. ಇದೀಗ ಬುಧವಾರ ಅವರು ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.ಕೆಪಿಸಿಸಿ ಅಧ್ಯಕ್ಷರ ಭೇಟಿ ಬಳಿಕ ಬಂಗಾರಪೇಟೆ ನಾರಾಯಣಸ್ವಾಮಿ ಮಾತನಾಡಿ, "ಕೆಪಿಸಿಸಿ ಅಧ್ಯಕ್ಷರು ನನಗೆ ಬರಲು ಹೇಳಿದ್ರು ಬಂದು ಭೇಟಿ ಮಾಡಿದ್ದೇನೆ. ಅವರ ಜೊತೆಗೆ ಏನೆಲ್ಲಾ ಚರ್ಚೆ ಮಾಡಲಾಗಿದೆ ಎಂಬ ವಿಚಾರಗಳನ್ನು ಹೇಳಲು ಸಾಧ್ಯವಿಲ್ಲ. ಆದರೆ ನಮ್ಮ ಅಹವಾಲನ್ನು ಬಿಕೆ ಹರಿಪ್ರಸಾದ್ ಅವರು ಕೇಳಿದ್ದಾರೆ. ದುಡುಕಿನ ನಿರ್ಧಾರ ಏನು ಮಾಡಬೇಡಿ ಎಂದು ಸಲಹೆ ಕೊಟ್ಟಿದ್ದಾರೆ" ಎಂದರು.
ಶಾಸಕರ ಅಸಮಾಧಾನ ವಿಚಾರವಾಗಿ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, "ಕೆಲ ಹಿರಿಯರಿಗೆ ಸಚಿವ ಸ್ಥಾನ ಸಿಕ್ಕಿಲ್ಲ, ಸಮಾಧಾನಪಡಿಸುವ ಯತ್ನ ನಡೆಯುತ್ತಿದೆ. ಎಲ್ಲರಿಗೂ ಸಚಿವ ಸ್ಥಾನ ನೀಡಲು ಸಾಧ್ಯವಿಲ್ಲ. ಆದರೆ ಗೌರವ ನೀಡುವ ಕೆಲಸ ಆಗಬೇಕಾಗಿದೆ" ಎಂದರು.
ಬಿ.ನಾಗೇಂದ್ರ ಸಚಿವ ಸ್ಥಾನ ಕೊಟ್ಟಿದ್ದಕ್ಕೆ ವಿರೋಧ ವಿಚಾರವಾಗಿ ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, "ಹೈಕಮಾಂಡ್ ಚರ್ಚೆ ಮಾಡಿ ಸಚಿವ ಸ್ಥಾನ ಕೊಟ್ಟಿದೆ" ಎಂದು ಹೇಳುತ್ತಾ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.
ಇನ್ನು ಬಾಗಲಕೋಟೆ ನಾಯಕರ ಅಡಿಯೋ ವೈರಲ್ ವಿಚಾರವಾಗಿ ಮಾತನಾಡಿ, ಆಡಿಯೋದಲ್ಲಿ ಮಾತನಾಡಿರಬಹುದು ಅಥವಾ ಊಹಾಪೋಹವೂ ಇರಬಹುದು. ಅಡಿಯೋ ಸಾಬೀತು ಮಾಡಲು ಆಗುವುದಿಲ್ಲ ಎಂದು ಉತ್ತರಿಸಿದರು.
ಮಹಿಳೆಯರಿಗೆ ಸಚಿವ ಸ್ಥಾನ ವಿಚಾರವಾಗಿ, "ಒಂದು ಸ್ಥಾನ ಖಾಲಿ ಇದೆ, ಅದನ್ನು ಮಹಿಳೆಯರಿಗೆ ಕೊಡುತ್ತಾರೆ. ಇನ್ನೆರಡು ದಿನಗಳಲ್ಲಿ ರಣದೀಪ್ ಸಿಂಗ್ ಸುರ್ಜೇವಾಲಾ ಬರ್ತಾ ಇದ್ದಾರೆ. ಎಲ್ಲರ ಜೊತೆಗೂ ಅವರು ಚರ್ಚೆ ನಡೆಸಲಿದ್ದಾರೆ" ಎಂದರು.

