ಹೊಸದಿಲ್ಲಿ: ದೇಶದ ಆಹಾರ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಕೇಂದ್ರ ಬಿಜೆಪಿ ಸರ್ಕಾರ ಐತಿಹಾಸಿಕ ನಿರ್ಧಾರ ಕೈಗೊಂಡಿದೆ. ದೇಶಾದ್ಯಂತ 80 ಕೋಟಿಗೂ ಹೆಚ್ಚು ಅರ್ಹ ಫಲಾನುಭವಿಗಳಿಗೆ ಶ್ರೇಷ್ಠ ಗುಣಮಟ್ಟದ ಆಹಾರ ಧಾನ್ಯ ವಿತರಿಸುವ ನಿಟ್ಟಿನಲ್ಲಿ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಅವರು ಮಹತ್ತರ ಬದಲಾವಣೆಗೆ ನಾಂದಿ ಹಾಡಿದ್ದು, ಇದೀಗ ಕೇಂದ್ರ ಸಚಿವ ಸಂಪುಟ ಗೌರವಯುತ ಆಹಾರ ಪೂರೈಕೆಗೆ ಅನುಮೋದನೆ ನೀಡಿದೆ.
ಪಡಿತರದಾರರಿಗೆ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಅಕ್ಕಿ ವಿತರಣೆಯಲ್ಲಿ ಈ ಮೊದಲಿನಷ್ಟೇ ಆಹಾರ ಪ್ರಮಾಣವನ್ನು ಕಾಯ್ದುಕೊಳ್ಳುವುದರ ಜತೆಗೆ ಅಕ್ಕಿಯ ಗುಣಮಟ್ಟವನ್ನು ಶ್ರೇಷ್ಠಗೊಳಿಸುವಲ್ಲಿ ಸಚಿವ ಜೋಶಿ ಆದ್ಯತೆ ನೀಡಿದ್ದಾರೆ. ನುಚ್ಚಿನ ಪ್ರಮಾಣವನ್ನು ಗರಿಷ್ಠ ಪ್ರಮಾಣದಲ್ಲಿ ಕಡಿತಗೊಳಿಸಿದ್ದಾರೆ.
ಅತ್ಯಂತ ಶ್ರೇಷ್ಠ ಗುಣಮಟ್ಟದ ಹಾಗೂ ಗಟ್ಟಿತನದ ಅಕ್ಕಿ ಪೂರೈಕೆ
RAW RICE ನಲ್ಲಿ ಈ ಮೊದಲು ಇದ್ದ ಶೇ.25ರಷ್ಟು ನುಚ್ವಿನ ಪ್ರಮಾಣವನ್ನು ಶೇ.10ಕ್ಕೆ ಇಳಿಸಿದ್ದು, ಶೇ.15ರಷ್ಟು ನುಚ್ಚಿನ ಪ್ರಮಾಣ ಕಡಿತಗೊಳಿಸಲಾಗಿದೆ. ಅಲ್ಲದೇ ಬೇಯಿಸಿದ (PARBOILED RICE) ಅಕ್ಕಿಯಲ್ಲಿ ಈ ಮೊದಲಿದ್ದ ಶೇ.16ರಷ್ಟು ನುಚ್ವಿನ ಪ್ರಮಾಣವನ್ನ ಇದೀಗ ಶೇ.5ಕ್ಕೆ ಇಳಿಸಲು ಕ್ರಮ ವಹಿಸಲಾಗಿದೆ. ಈ ಮೂಲಕ ಅತ್ಯಂತ ಶ್ರೇಷ್ಠ ಗುಣಮಟ್ಟದ ಹಾಗೂ ಗಟ್ಟಿತನದ ಅಕ್ಕಿ ಪೂರೈಕೆಗೆ ಕೇಂದ್ರ ಆಹಾರ ಮತ್ರು ನಾಗರಿಕ ಪೂರೈಕೆ ಸಚಿವ ಪ್ರಲ್ಹಾದ ಜೋಶಿ ಮುಂದಾಗಿದ್ದಾರೆ.ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ನಾಯಕತ್ವದಲ್ಲಿ ಕಳೆದ ಮೂರು ದಶಕಗಳಲ್ಲಿ ಇದೇ ಮೊದಲ ಬಾರಿ "ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ" ಅಕ್ಕಿ ವಿತರಣೆಯಲ್ಲಿ ಶ್ರೇಷ್ಠ ಗುಣಮಟ್ಟ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಮಾನದಂಡಗಳನ್ನು ರೂಪಿಸಲಾಗಿದೆ. ಈ ಮೂಲಕ ದೇಶದ 80 ಕೋಟಿಗೂ ಅಧಿಕ ಫಲಾನುಭವಿಗಳಿಗೆ ಗೌರವಯುತವಾಗಿ ಉತ್ತಮ ಗುಣಮಟ್ಟ ಮತ್ತು ಪೌಷ್ಟಿಕಯುತ ಆಹಾರ ದೊರೆಯುವಂತೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ತೆಗೆದುಕೊಂಡಿದೆ.
ಅಕ್ಕಿ ಪ್ರಮಾಣದಲ್ಲಿಲ್ಲ ಕಡಿತ; ಪಾರದರ್ಶಕತೆಗೆ ಕ್ಯೂಆರ್ ಕೋಡ್
ಪ್ರತಿಯೊಂದು ಅರ್ಹ ಕುಟುಂಬವೂ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಲ್ಲಿ ಮೊದಲಿನಷ್ಟೇ ಪ್ರಮಾಣದ ಆಹಾರ ಧಾನ್ಯ ಪಡೆಯಲಿದೆ. ಇದರಲ್ಲಿ ಯಾವುದೇ ರೀತಿ ಕಡಿತ ಮಾಡಲಾಗಿಲ್ಲ. ಆದರೆ, ಗುಣಮಟ್ಟದಲ್ಲಿ ಮಾತ್ರ ಪರಿವರ್ತನೆ ತೋರಲಾಗಿದೆ. ಅದರಂತೆ ಇನ್ನು ಮುಂದೆ ಶೇ.90ರಿಂದ 95ರಷ್ಟು ಉತ್ಕೃಷ್ಟ ಗುಣಮಟ್ಟದ ಅಕ್ಕಿ ಪಡಿತರದಾರರ ಕೈ ಸೇರಲಿದೆ.ಕೇಂದ್ರ ಸರ್ಕಾರ, ಪಡಿತರ ಧಾನ್ಯದ ಶ್ರೇಷ್ಠ ಗುಣಮಟ್ಟ ಮಾತ್ರವಲ್ಲ, ಪಾರದರ್ಶಕತೆಗೂ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಉತ್ತಮ ಗುಣಮಟ್ಟದ ಆಹಾರವನ್ನು ತಲುಪಿಸುವ, ಪ್ರತಿ ಧಾನ್ಯದ ಗರಿಷ್ಠ ಬಳಕೆ ಖಚಿತಪಡಿಸಿಕೊಳ್ಳುವಲ್ಲಿ ಹಾಗೂ ಕ್ಯೂಆರ್ (QR) ಆಧಾರಿತವಾಗಿ ಅಕ್ರಮ ಪತ್ತೆ ಹಚ್ಚುವಿಕೆಯಲ್ಲಿ ಮಹತ್ವದ ಹೆಜ್ಜೆಯಿಸಿದೆ. trace ability ಮೂಲಕ ಪಾರದರ್ಶಕತೆ ಹೆಚ್ಚಿಸುವ ಮತ್ತು ವ್ಯವಸ್ಥಿತ ವೆಚ್ಚ ನಿರ್ವಹಣೆ ಮೂಲಕ ದಕ್ಷತೆಯನ್ನು ಸುಧಾರಿಸುವಲ್ಲಿ ಇದು ಮಹತ್ವದ ಪಾತ್ರ ವಹಿಸಲಿದೆ.
ಸರ್ಕಾರಕ್ಕೆ ವಾರ್ಷಿಕ ₹2,161 ಕೋಟಿ ವೆಚ್ಚ ಉಳಿತಾಯದತ್ತ ಮಹತ್ತರ ಹೆಜ್ಜೆ
ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಅವರ ಈ ಮಹತ್ವಾಕಾಂಕ್ಷೆ ಕೇವಲ ಅಕ್ಕಿಯ ಗುಣಮಟ್ಟದ ಸುಧಾರಣೆಯಷ್ಟೇ ಅಲ್ಲ, ಬದಲಿಗೆ ಸಾರ್ವಜನಿಕ ವಿತರಣಾ ವ್ಯವಸ್ಥೆಯ (PDS) ಸಂಪೂರ್ಣ ರೂಪಾಂತರಕ್ಕೆ ಸಾಕ್ಷಿಯಾಗಲಿದೆ. ಹೆಚ್ಚಿನ ಪಾರದರ್ಶಕತೆ ಮತ್ತು ದಾಸ್ತಾನು ನಿರ್ವಹಣೆ, ಕಡಿಮೆಯಾದ ಲಾಜಿಸ್ಟಿಕ್ಸ್ ಮತ್ತು ಆಡಳಿತಾತ್ಮಕ ವೆಚ್ಚಗಳ ಮೂಲಕ ವಾರ್ಷಿಕ ಸುಮಾರು ₹2,161 ಕೋಟಿ ವೆಚ್ಚ ಉಳಿತಾಯವಾಗಲಿದೆ.ಪ್ರತಿ ಧಾನ್ಯದ ಸದ್ಬಳಕೆ, ಪ್ರತಿಯೊಂದು ಕುಟುಂಬಕ್ಕೂ ಆಹಾರ ಭದ್ರತೆ ನೀಡುವುದರ ಜತೆಗೆ ಪ್ರತಿ ಫಲಾನುಭವಿಗೂ ಅತ್ಯುನ್ನತ ಗುಣಮಟ್ಟದ ಆಹಾರ ಧಾನ್ಯ ಸಿಗುವಂತೆಈ ಮೂಲಕ ಖಾತ್ರಿಪಡಿಸಲಾಗುತ್ತಿದೆ.
ನುಚ್ಚು ಪಶು ಆಹಾರಕ್ಕೆ ಬಳಕೆ
ಪಡಿತರ ಧಾನ್ಯದಲ್ಲಿ ಶೇ.90ರಿಂದ ಶೇ.95ರಷ್ಟು ಗುಣಮಟ್ಟ ಕಾಪಾಡಿಕೊಂಡು ಬಳಿಕ ಉಳಿದ ನುಚ್ಚಕ್ಕಿಯನ್ನು ಆಹಾರ ಸಂಸ್ಕರಣೆ ಮತ್ತು ಪಶು ಆಹಾರಕ್ಕಾಗಿ ಸದ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ ಜೋಶಿ ಅವರ ಮಹತ್ವಾಕಾಂಕ್ಷೆಯಂತೆ ಹೀಗೆ ಶೂನ್ಯ ಪೋಲು, ಸಂಪನ್ಮೂಲಗಳ ಗರಿಷ್ಠ ಬಳಕೆ, ಬಡವರ ಗೌರವಯುತ ಬದುಕಿಗೆ ಗುಣಮಟ್ಟದ ಆಹಾರ ಭದ್ರತೆ ಒದಗಿಸುವಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆಯಿಟ್ಟಿದೆ.
