ತಮಿಳು ನಟ ದಳಪತಿ ವಿಜಯ್ ಇದೀಗ ತಮಿಳುನಾಡಿನ ರಾಜಕೀಯ ಇತಿಹಾಸದಲ್ಲೇ ಹೊಸ ಅಧ್ಯಾಯ ಬರೆದಿದ್ದಾರೆ. ತಮ್ಮ ಅಪಾರ ಅಭಿಮಾನಿ ಬಳಗ ಮತ್ತು ಅಸಾಮಾನ್ಯ ಸ್ಟಾರ್ಡಮ್ ಅನ್ನು ರಾಜಕೀಯ ಶಕ್ತಿಯಾಗಿ ವಿಜಯ್ ಪರಿವರ್ತಿಸಿಕೊಂಡಿದ್ದಾರೆ. ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಟಿವಿಕೆ ಪಕ್ಷದ ನೇತಾರ ವಿಜಯ್ ಮುಖ್ಯಮಂತ್ರಿ ಪಟ್ಟಕ್ಕೇರಲು ಸಜ್ಜಾಗಿದ್ದಾರೆ.
ಆದರೆ ಇದೇ ಸಂಭ್ರಮದ ಕ್ಷಣದಲ್ಲಿ, ಅವರ ಸಿನಿ ಬದುಕಿನ ಪ್ರಮುಖ ಮಾರ್ಗದರ್ಶಕರಲ್ಲಿ ಒಬ್ಬರಾದ ಖ್ಯಾತ ನಿರ್ಮಾಪಕ ಆರ್ ಬಿ ಚೌಧರಿ ಅಗಲಿರುವುದು ವಿಜಯ್ ಅವರಿಗೆ ದೊಡ್ಡ ಆಘಾತ ತಂದಿದೆ.
ರಾಜಸ್ಥಾನದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಖ್ಯಾತ ನಿರ್ಮಾಪಕ ಆರ್ ಬಿ ಚೌಧರಿ ಮೃತಪಟ್ಟಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆಯೇ ರಾಜಕೀಯ ಕಾರ್ಯಕ್ರಮಗಳ ಬಿಜಿ ಶೆಡ್ಯೂಲ್ ಮಧ್ಯೆಯೂ ಸಮಯ ಮಾಡಿಕೊಂಡ ವಿಜಯ್, ಆರ್ ಬಿ ಚೌಧರಿ ಅವರ ಅಂತಿಮ ದರ್ಶನ ಪಡೆದರು. ತಮಗೆ ಹಲವು ಸೂಪರ್ ಹಿಟ್ ಸಿನಿಮಾಗಳನ್ನ ನಿರ್ಮಿಸಿದ ಆರ್ ಬಿ ಚೌಧರಿ ಅವರಿಗೆ ವಿಜಯ್ ಅಂತಿಮ ನಮನ ಸಲ್ಲಿಸಿದರು. ಇದೇ ವೇಳೆ ತಮ್ಮ ಆತ್ಮೀಯ ಗೆಳೆಯ ನಟ ಜೀವಾ (ಆರ್ ಬಿ ಚೌಧರಿ ಪುತ್ರ) ಅವರನ್ನು ಅಪ್ಪಿಕೊಂಡು ಸಾಂತ್ವನ ಹೇಳಿದರು. 'ನನ್ಬನ್' ಸಿನಿಮಾದಲ್ಲಿ ನಟ ವಿಜಯ್ ಹಾಗೂ ಜೀವಾ ಒಟ್ಟಿಗೆ ನಟಿಸಿದ್ದರು. ಅಂದಿನಿಂದ ಇಬ್ಬರ ಮಧ್ಯೆ ಸ್ನೇಹ ಬಾಂಧವ್ಯ ಗಟ್ಟಿಯಾಗಿದೆ.
ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ಚಿತ್ರಗಳನ್ನು ನಿರ್ಮಿಸಿದ ಆರ್ ಬಿ ಚೌಧರಿ ಕೇವಲ ನಿರ್ಮಾಪಕರಷ್ಟೇ ಅಲ್ಲ, ವಿಜಯ್ ಅವರ ಸಿನಿ ಪಯಣದ ಮಹತ್ವದ ಆಧಾರಸ್ತಂಭ.! ಸಿನಿಬದುಕಿಗೆ ಕಾಲಿಟ್ಟ ಆರಂಭದ ದಿನಗಳಲ್ಲಿ ದೊಡ್ಡ ಯಶಸ್ಸಿಗಾಗಿ ಹಾತೊರೆಯುತ್ತಿದ್ದ ವಿಜಯ್ಗೆ 1996ರಲ್ಲಿ 'ಪೂವೆ ಉನಕ್ಕಾಗ' ಚಿತ್ರದ ಮೂಲಕ ಭಾರಿ ಬ್ರೇಕ್ ನೀಡಿದ್ದು ಆರ್ ಬಿ ಚೌಧರಿಯವರೇ.! 'ಪೂವೆ ಉನಕ್ಕಾಗ' ಸಿನಿಮಾ ಸೂಪರ್ ಹಿಟ್ ಆಗಿ ವಿಜಯ್ ಅವರನ್ನು ಫ್ಯಾಮಿಲಿ ಆಡಿಯೆನ್ಸ್ ಬಿಗಿದಪ್ಪಿಕೊಂಡರು.
ಇದಲ್ಲದೆ, ವಿಜಯ್ ಅವರಿಗೆ ಮಾಸ್ ಹೀರೋ ಇಮೇಜ್ ತಂದುಕೊಟ್ಟ 'ತಿರುಪಾಚ್ಚಿ' ಸಿನಿಮಾವನ್ನೂ ಆರ್ ಬಿ ಚೌಧರಿ ಅವರೇ ನಿರ್ಮಿಸಿದ್ದರು. ನಂತರ 2014ರಲ್ಲಿ ಬಿಡುಗಡೆಯಾದ ಬ್ಲಾಕ್ ಬಸ್ಟರ್ 'ಜಿಲ್ಲಾ' ಸಿನಿಮಾದ ಮೂಲಕವೂ ಈ ಜೋಡಿ ಮತ್ತೆ ಗೆಲುವಿನ ಸವಿ ಕಂಡಿತ್ತು. ಸೂಪರ್ ಗುಡ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಆರ್ ಬಿ ಚೌಧರಿ ಅವರು 99 ಸಿನಿಮಾಗಳನ್ನು ನಿರ್ಮಿಸಿದ್ದು, ತಮ್ಮ 100ನೇ ಸಿನಿಮಾವನ್ನು ವಿಜಯ್ ಜೊತೆ ಮಾಡಬೇಕೆಂಬ ಕನಸು ಹೊಂದಿದ್ದರು. ಆದರೆ ಸಿನಿಮಾಗಳಿಗೆ ವಿಜಯ್ ವಿದಾಯ ಹೇಳಿ ರಾಜಕೀಯಕ್ಕೆ ಕಾಲಿಟ್ಟ ಬಳಿಕ ಆ ಕನಸು ಕನಸಾಗಿಯೇ ಉಳಿದುಬಿಟ್ಟಿತು. ಇದೀಗ ವಿಜಯ್ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸುವ ಮುನ್ನವೇ, ಅವರ ಸಿನಿ ಬದುಕಿಗೆ ದಿಕ್ಕು ತೋರಿದ ಆರ್ ಬಿ ಚೌಧರಿ ಇಹಲೋಕ ತ್ಯಜಿಸಿರುವುದು ಚಿತ್ರರಂಗ ಮತ್ತು ರಾಜಕೀಯ ವಲಯದಲ್ಲಿ ಭಾರೀ ವಿಷಾದ ಮೂಡಿಸಿದೆ.

