Dailyhunt Logo
  • Light mode
    Follow system
    Dark mode
    • Play Story
    • App Story
ಇಂಡೋನೇಷ್ಯಾದ 1,000 ವರ್ಷ ಹಳೆಯ ಹಿಂದೂ ದೇಗುಲಕ್ಕೆ ನರೇಂದ್ರ ಮೋದಿ ಭೇಟಿ; ಬ್ರಹ್ಮ, ವಿಷ್ಣು ಮಹೇಶ್ವರ ನೆಲೆಸಿರುವ ಪ್ರಂಬಾನನ್‌

ಇಂಡೋನೇಷ್ಯಾದ 1,000 ವರ್ಷ ಹಳೆಯ ಹಿಂದೂ ದೇಗುಲಕ್ಕೆ ನರೇಂದ್ರ ಮೋದಿ ಭೇಟಿ; ಬ್ರಹ್ಮ, ವಿಷ್ಣು ಮಹೇಶ್ವರ ನೆಲೆಸಿರುವ ಪ್ರಂಬಾನನ್‌

Vijay Karnataka 1 week ago

ಕಾರ್ತಾ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು (ಜುಲೈ 8-ಬುಧವಾರ) ಇಂಡೋನೇಷ್ಯಾದ ಐತಿಹಾಸಿಕ ಪ್ರಂಬಾನನ್ ದೇವಾಲಯ ಸಂಕೀರ್ಣಕ್ಕೆ ಭೇಟಿ ನೀಡಿದರು. ಅಧ್ಯಕ್ಷ ಪ್ರಬೊವೊ ಸುಬಿಯಾಂಟೊ ಅವರೊಂದಿಗೆ ದೇವಸ್ಥಾನಕ್ಕೆ ಆಗಮಿಸಿದ ಪ್ರಧಾನಿ ಮೋದಿ, ತ್ರಿಮೂರ್ತಿಗಳಾದ ಶಿವ, ವಿಷ್ಣು ಹಾಗೂ ಬ್ರಹ್ಮ ದೇವರಿಗೆ ಸಮರ್ಪಿತವಾದ ಸುಮಾರು 1,000 ವರ್ಷಗಳಷ್ಟು ಹಳೆಯದಾದ ಹಿಂದೂ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಈ ಕುರಿತು ತಮ್ಮ ಅಧಿಕೃತ ಎಕ್ಸ್‌ ಅಕೌಂಟ್‌ನಲ್ಲಿ ವಿಡಿಯೋ ಪೋಸ್ಟ್‌ ಮಾಡಿರುವ ಪ್ರಧಾನಿ ಮೋದಿ, "ಇತಿಹಾಸ ಪ್ರಸಿದ್ಧ ಪ್ರಂಬಾನನ್‌ ದೇಗುಲಕ್ಕೆ ಭೇಟಿ ನೀಡಿರುವುದು ತುಂಬಾ ಖುಷಿ ಕೊಟ್ಟಿದೆ" ಎಂದು ಹೇಳಿದ್ದಾರೆ. ಇದೇ ವೇಳೆ ತಮ್ಮ ಜೀವನದಲ್ಲಿ ಶಿವನ ಪ್ರಭಾವದ ಬಗ್ಗೆ
ಪ್ರಧಾನಿ ಮೋದಿ ಮಾತನಾಡಿದ್ದಾರೆ.

"ಭಗವಾನ್ ಶಿವನೊಂದಿಗೆ ಸಂಪರ್ಕ ಸಾಧಿಸುವ ಅವಕಾಶ ನನಗೆ ಸದಾ ಸಿಗುತ್ತಿರುವುದು ನನ್ನ ಸೌಭಾಗ್ಯ. ನಾನು ಹಟ್ಕೇಶ್ವರ ಮಹಾದೇವ ನೆಲೆಸಿರುವ ವಡ್‌ನಗರದಲ್ಲಿ ಜನಿಸಿದೆ. ಸೋಮನಾಥ ಜ್ಯೋತಿರ್ಲಿಂಗವು ಮೊದಲ ಜ್ಯೋತಿರ್ಲಿಂಗವಾಗಿದ್ದು, ಅದು ಗುಜರಾತ್‌ನಲ್ಲಿದೆ. ಅದರ ಅಭಿವೃದ್ಧಿಯ ನೇರ ಜವಾಬ್ದಾರಿ ನನ್ನ ಮೇಲಿದೆ. ನನ್ನ ರಾಜಕೀಯ ಕ್ಷೇತ್ರವಾದ ಕಾಶಿಯಲ್ಲಿ (ವಾರಣಾಸಿ) ಕಾಶಿ ವಿಶ್ವನಾಥ ಮಹಾದೇವನಿದ್ದು, ಆತ ನನಗೆ ನಿರಂತರವಾಗಿ ಆಶೀರ್ವದಿಸುತ್ತಿದ್ದಾನೆ" ಎಂದು ಪ್ರಧಾನಿ ಮೋದಿ ಭಕ್ತಿಯಿಂದ ಹೇಳಿದ್ದಾರೆ.


ಮುಂದುವರೆದು, " ಕೇದಾರನಾಥ ಅಥವಾ ಉಜ್ಜಯಿನಿಯ ಮಹಾಕಾಳ ದೇವಾಲಯದ ಪುನರಾಭಿವೃದ್ಧಿಯಾಗಿರಲಿ, ಅಥವಾ ಇಂಡೋನೇಷ್ಯದ ಪ್ರಂಬಾನನ್‌ ದೇಗುಲಕ್ಕೆ ಭೇಟಿ ನೀಡಿ ನವೀಕರಣ ಕಾರ್ಯಕ್ಕೆ ಚಾಲನೆ ನೀಡುವ ಅವಕಾಶವಾಗಿರಲಿ, ಇವೆಲ್ಲವನ್ನೂ ನಾನು ಜೀವನದಲ;್ಲಿ ಪಡೆದುಕೊಂಡ ಮಹಾನ್ ಸೌಭಾಗ್ಯವೆಂದು ಭಾವಿಸುತ್ತೇನೆ" ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಯೋಗಕರ್ತದಿಂದ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಪ್ರಂಬಾನನ್‌ ದೇವಸ್ಥಾನಕ್ಕೆ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸಿದ ಪ್ರಧಾನಿ ಮೋದಿ ಮತ್ತು ಇಂಡೋನೇಷ್ಯಾ ಅಧ್ಯಕ್ಷ ಅಧ್ಯಕ್ಷ ಪ್ರಬೊವೊ ಸುಬಿಯಾಂಟೊ, ದೇವಾಲಯ ಸಂಕೀರ್ಣದ ಅದ್ಭುತ ವೈಮಾನಿಕ ನೋಟವನ್ನು ಹಂಚಿಕೊಂಡರು. ಪ್ರಧಾನಿ ಮೋದಿ ಇಂಡೋನೇಷ್ಯಾದಲ್ಲಿ ಮಾತನಾಡುತ್ತಾ, "ಭಾರತ ವಿಸ್ತರಣಾವಾದದ ಬದಲಿಗೆ ಅಭಿವೃದ್ಧಿಯ ಪಥ ಆಯ್ಕೆ ಮಾಡಿಕೊಂಡಿದೆ" ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಪ್ರಂಬಾನನ್‌ ದೇಗುಲದ ಇತಿಹಾಸ:

ಜಾವಾ ದ್ವೀಪದಲ್ಲಿರುವ ಪ್ರಂಬಾನನ್, ಇಂಡೋನೇಷ್ಯಾದ ಅತಿದೊಡ್ಡ ಹಿಂದೂ ದೇವಾಲಯ ಸಂಕೀರ್ಣ ಮತ್ತು ಕಾಂಬೋಡಿಯಾದ ಅಂಕೋರ್ ವಾಟ್ ನಂತರ ಆಗ್ನೇಯ ಏಷ್ಯಾದ ಎರಡನೇ ಅತಿ ದೊಡ್ಡ ದೇವಾಲಯವಾಗಿದೆ. ಸುಮಾರು 40 ಹೆಕ್ಟೇರ್‌ಗಳಲ್ಲಿ ಹರಡಿರುವ ಈ ಸ್ಥಳವು ಮೂಲತಃ ಸುಮಾರು 240 ದೇವಾಲಯಗಳನ್ನು ಒಳಗೊಂಡಿತ್ತು. ಇದು ಇಂಡೋನೇಷ್ಯಾದ ಪ್ರಮುಖ ಸಾಂಸ್ಕೃತಿಕ ಹೆಗ್ಗುರುತುಗಳಲ್ಲಿ ಒಂದಾಗಿದೆ. ಇದು ಭಾರತೀಯ ಉಪಖಂಡ ಮತ್ತು ಆಗ್ನೇಯ ಏಷ್ಯಾದ ನಡುವಿನ ಶತಮಾನಗಳಷ್ಟು ಹಳೆಯ ಸಾಂಸ್ಕೃತಿ ಸಂಪರ್ಕಗಳನ್ನು ಪ್ರತಿಬಿಂಬಿಸುತ್ತದೆ.ʼ


9ನೇ ಶತಮಾನದಲ್ಲಿ ಹಿಂದೂ ಮತಾರಮ್ ಸಾಮ್ರಾಜ್ಯದ ರಾಜ ರಾಕೈ ಪಿಕಾಟನ್‌ ಕಾಲದಲ್ಲಿ, ಪ್ರಂಬಾನನ್‌ ದೇವಸ್ಥಾನ ಸಂಕೀರ್ಣದ ನಿರ್ಮಾಣ ಕಾಮಗಾರಿ ಆರಂಭವಾಯಿತು. ಆ ಬಳಿಕ ಅವರ ಉತ್ತರಾಧಿಕಾರಿಗಳಾದ ಲೋಕಪಾಲರು ಇದರ ನಿರ್ಮಾಣ ಕಾರ್ಯವನ್ನು
ಪೂರ್ಣಗೊಳಿಸಿದರು. ಇದರ ಮಧ್ಯಭಾಗದಲ್ಲಿ ಶಿವ, ವಿಷ್ಣು ಮತ್ತು ಬ್ರಹ್ಮ ದೇವರಿಗೆ ಸಮರ್ಪಿತವಾದ ಮೂರು ಭವ್ಯ ದೇವಾಲಯಗಳಿವೆ.
ಇವುಗಳಲ್ಲಿ 47 ಮೀಟರ್ ಎತ್ತರದ ಶಿವ ದೇವಾಲಯವು ಈ ಸಂಕೀರ್ಣದ ಅತ್ಯಂತ ಎತ್ತರದ ಮತ್ತು ಪ್ರಮುಖ ರಚನೆಯಾಗಿದೆ.

ದೇವಾಲಯದ ಗೋಡೆಗಳು ರಾಮಾಯಣ ಮತ್ತು ಇತರ ಹಿಂದೂ ಮಹಾಕಾವ್ಯಗಳ ದೃಶ್ಯಗಳನ್ನು ಚಿತ್ರಿಸುವ ಸಂಕೀರ್ಣವಾದ ಕೆತ್ತನೆಗಳಿಂದ ಅಲಂಕರಿಸಲ್ಪಟ್ಟಿವೆ. ಇದು ಪ್ರಾಚೀನ ಸಮುದ್ರ ವ್ಯಾಪಾರ ಮಾರ್ಗಗಳ ಮೂಲಕ, ಆಗ್ನೇಯ ಏಷ್ಯಾದಾದ್ಯಂತ ಪ್ರವರ್ಧಮಾನಕ್ಕೆ ಬಂದ ಸಾಂಸ್ಕೃತಿಕ ಮತ್ತು ಧಾರ್ಮಿಕ ವಿನಿಮಯವನ್ನು ಪ್ರದರ್ಶಿಸುತ್ತದೆ.

10 ನೇ ಶತಮಾನದಲ್ಲಿ ಪ್ರಂಬಾನನ್‌ ದೇಗುಲದ ಸಂಕೀರ್ಣ ನಿರ್ಮಾಣ ಕಾಮಗಾರಿಯನ್ನು ಕೈಬಿಡಲಾಯಿತು. ಜಾವಾದಲ್ಲಿನ ರಾಜಕೀಯ ಬದಲಾವಣೆಗಳು ಮತ್ತು ಹತ್ತಿರದ ಮೌಂಟ್ ಮೆರಾಪಿಯಿಂದ ಜ್ವಾಲಾಮುಖಿ ಚಟುವಟಿಕೆಗಳು ಅದರ ಅವನತಿಗೆ ಮುನ್ನುಡಿ ಬರೆದವು. ಆದರೆ ಮುಂದೆ 19ನೇ ಶತಮಾನದಲ್ಲಿ ಡಚ್ ವಸಾಹತುಶಾಹಿ ಆಳ್ವಿಕೆಯಲ್ಲಿ, ಈ ದೇವಸ್ಥಾನದ ಪುನಃಸ್ಥಾಪನೆ ಪ್ರಯತ್ನಗಳು ಪ್ರಾರಂಭವಾದವು.
1913 ಮತ್ತು 1953ರ ನಡುವೆ ದೊಡ್ಡ ಪ್ರಮಾಣದ ಪುನರ್‌ನಿರ್ಮಾಣ ಕಾರ್ಯದಿಂದಾಗಿ, ಮುಖ್ಯ ದೇವಾಲಯಗಳನ್ನು ಪುನಃಸ್ಥಾಪಿಸಲಾಯಿತು.


1991ರಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಗುರುತಿಸಲ್ಪಟ್ಟ ಪ್ರಂಬಾನನ್ ಈಗ ಇಂಡೋನೇಷ್ಯಾದ ಪ್ರಮುಖ ಸಾಂಸ್ಕೃತಿಕ ಆಕರ್ಷಣೆಗಳಲ್ಲಿ ಒಂದಾಗಿದೆ. ಭಾರತ ಬೆಂಬಲಿತ ಹೊಸ ಪುನಃಸ್ಥಾಪನೆ ಯೋಜನೆಯು, ನವದೆಹಲಿ ಮತ್ತು ಜಕಾರ್ತಾ ನಡುವಿನ ದೀರ್ಘಕಾಲದ ನಾಗರಿಕ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಮತ್ತು ಏಷ್ಯಾದ ಅತ್ಯಂತ ಮಹತ್ವದ ಹಿಂದೂ ಸ್ಮಾರಕಗಳಲ್ಲಿ ಒಂದನ್ನು ಸಂರಕ್ಷಿಸಲು ಸಹಾಯ ಮಾಡುವ ನಿರೀಕ್ಷೆಯಿದೆ.

ಭಾರತದ ಆಯಕ್ಟ್ ಈಸ್ಟ್ ನೀತಿ ಅಡಿಯಲ್ಲಿ ಸಾಂಸ್ಕೃತಿಕ ಸಂಬಂಧಗಳನ್ನು ಬಲಪಡಿಸುವ ಮೂಲಕ, ದೇವಾಲಯ ಸಂಕೀರ್ಣಕ್ಕಾಗಿ ಜಂಟಿ ಸಂರಕ್ಷಣೆ ಮತ್ತು ಪುನಃಸ್ಥಾಪನೆ ಯೋಜನೆಯನ್ನು ಪ್ರಾರಂಭಿಸಲು ಭಾರತ ಮತ್ತು ಇಂಡೋನೇಷ್ಯಾ ಒಪ್ಪಿಕೊಂಡಿವೆ. ನಿನ್ನೆ (ಜುಲೈ 7-ಮಂಗಳವಾರ) ನಡೆದ ದ್ವಿಪಕ್ಷೀಯ ಮಾತುಕತೆಯ ಸಂದರ್ಭದಲ್ಲಿ, ಪ್ರಧಾನಿ ಮೋದಿ ಮತ್ತು ಪ್ರಬೋವೊ ಸಂರಕ್ಷಣಾ ಉಪಕ್ರಮಕ್ಕಾಗಿ ಉದ್ದೇಶ ಪತ್ರವನ್ನು ವಿನಿಮಯ ಮಾಡಿಕೊಂಡರು. ಇಂಡೋ-ಪೆಸಿಫಿಕ್‌ಗಾಗಿ ಭಾರತ-ಇಂಡೋನೇಷ್ಯಾ ಸಮಗ್ರ ಕಾರ್ಯತಂತ್ರದ ಸಹಭಾಗಿತ್ವವನ್ನು ವಿಸ್ತರಿಸುವ ಬದ್ಧತೆಯನ್ನು ಉಭಯ ನಾಯಕರು ಪುನರುಚ್ಚರಿಸಿದ್ದಾರೆ.
Dailyhunt
Disclaimer: This content has not been generated, created or edited by Dailyhunt. Publisher: Vijay Karnataka