ಬೆಂಗಳೂರು: ಶುಭ ಗಳಿಗೆ ಶುಭ ಮುಹೂರ್ತ ಬಂದಾಗ ಯಾರೂ ತಡೆಯಲು ಸಾಧ್ಯವಿಲ್ಲ. ಪ್ರಯತ್ನ ವಿಫಲವಾದರೂ ಪ್ರಾರ್ಥನೆ ಫಲಿಸಲಿದೆ. ಶಂಭುವಿಗಿಂತ ದೊಡ್ಡ ದೇವರಿಲ್ಲ, ಶಿವಭಕ್ತರಿಗಿಂತ ಬೇರೆ ಭಕ್ತರಿಲ್ಲ. ಹೀಗೆ ಕಳೆದೊಂದು ವರ್ಷದಿಂದಲೂ ಅರ್ಥಗರ್ಭಿತ ಮಾತುಗಳನ್ನು ಆಡುತ್ತ ಬಂದವರು ದೊಡ್ಡಾಲದಹಳ್ಳಿ ಕೆಂಪೇಗೌಡ ಶಿವಕುಮಾರ್ ಅರ್ಥಾತ್ ರಾಜ್ಯದ ನೂತನ ಮುಖ್ಯಮಂತ್ರಿ ಡಿ.ಕೆ.
ಶಿವಕುಮಾರ್!
'ಅರ್ಚಕಸ್ಯ ಪ್ರಭಾವೇನ ಶಿಲಾಭವತಿ ಶಂಕರ' ಎನ್ನುವ ಡಿಕೆಶಿ ಉಡುಪಿಯ ಕಡೆಗೋಲು ಕೃಷ್ಣನ ಅಡಿದಾವರೆಗೆ ವಂದಿಸಿ ಶ್ಲೋಕ ಪಠಿಸಿ ಪರ್ಯಾಯ ಪೀಠಾಧಿಪತಿಗಳ ಪೂರ್ಣಾನುಗ್ರಹಕ್ಕೆ ಪಾತ್ರರಾಗಬಲ್ಲರು. ಲೌಕಿಕ ವ್ಯವಹಾರವನ್ನು ಮರೆತು ನೊಣವಿನಕೆರೆಯ ಅಜ್ಜಯ್ಯನ ಗದ್ದುಗೆಯ ಮುಂದೆ ಗಂಟೆಗಟ್ಟಲೆ ಕುಳಿತು ಪ್ರಾರ್ಥಿಸಬಲ್ಲರು. ಪಂಥಗಳ ಭೇದವಿಲ್ಲದೆ ಎಲ್ಲ ದೇವರುಗಳನ್ನು ಸದ್ಭಕ್ತನಾಗಿ ಪೂಜಿಸಬಲ್ಲರು.
ಡಿಕೆಶಿ ಅಪಾರ ದೈವಭಕ್ತರು. ಕರ್ನಾಟಕವಷ್ಟೇ ಅಲ್ಲ. ಇಡೀ ಭಾರತದಲ್ಲಿ ಯಾವೆಲ್ಲ ದೇಗುಲಗಳಿವೆ ಮತ್ತು ಅಂಥ ಮಂದಿರಗಳ ಮಹತ್ವವೇನು ಎಂದು ಅರಿತವರು. ಯಾವ ದೇವರನ್ನು ಪೂಜಿಸಿದರೆ, ಯಾವ ಫಲ ಸಿಗುತ್ತೆ? ಯಾವ ದೇವರಿಗೆ ಹರಕೆ ಹೊತ್ತುಕೊಂಡರೆ ಇಷ್ಟಾರ್ಥ ಈಡೇರುತ್ತೆ? ಯಾವೆಲ್ಲ ದೇವಾನುದೇವತೆಗಳನ್ನು ಆರಾಧಿಸಿದರೆ ವರ ಲಭಿಸುತ್ತೆ ಎಂಬಿತ್ಯಾದಿ ದೇವರಹಸ್ಯವನ್ನು ಬಲ್ಲವವರು ಡಿಕೆಶಿ. ಇನ್ನೂ ಸರಳವಾಗಿ ಹೇಳುವುದಿದ್ದರೆ ಈ ವಿಚಾರದಲ್ಲಿ ಡಿಕೆಶಿ ಅವರಿಗೆ ಡಿಕೆಶಿಯೇ ಸಾಟಿ. ಈ ಸಂಬಂಧದಲ್ಲಿ ಅವರು ಒಂದಲ್ಲ ಹತ್ತಾರು ಪಿಎಚ್ಡಿಗಳನ್ನು ಮಾಡಿದ್ದಾರೆ ಎಂದು ಧಾರಾಳವಾಗಿ ಹೇಳಬಹುದು.
2023ರ ವಿಧಾನಸಭೆ ಚುನಾವಣೆಯಲ್ಲಿ ಪ್ರದೇಶ ಕಾಂಗ್ರೆಸ್ ಸಾರಥಿಯಾಗಿ ಪಕ್ಷವನ್ನು ಮುನ್ನಡೆಸಿದ್ದ ಶಿವಕುಮಾರ್ ಸಹಜವಾಗಿ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದರು. ಮತ್ತೊಂದೆಡೆ, ಮಾಸ್ ಲೀಡರ್ ಸಿದ್ದರಾಮಯ್ಯನವರು ಪಕ್ಷದ ವೋಟ್ ಬ್ಯಾಂಕ್ ಪ್ರಭಾವಿಸಿದ್ದರು. ಹಾಗಾಗಿ ಸಂದಿಗ್ಧಕ್ಕೆ ಸಿಲುಕಿದ ಕಾಂಗ್ರೆಸ್ ಹೈಕಮಾಂಡ್ ಇಬ್ಬರ ನಡುವೆಯೂ ರಾಜೀ ಪಂಚಾಯ್ತಿ ಮಾಡಿ ಸರಕಾರ ರಚನೆಗೆ ದಾರಿ ಮಾಡಿಕೊಟ್ಟಿತ್ತು.
ಅದರಂತೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾದರೆ, ಡಿಕೆಶಿ ಕೆಪಿಸಿಸಿ ಪಟ್ಟ ಉಳಿಸಿಕೊಂಡು ಡಿಸಿಎಂ ಆದರು. ಹೈಕಮಾಂಡ್ ಮಟ್ಟದಲ್ಲಿ ನಡೆದಿತ್ತು ಎನ್ನಲಾದ ಮಾತುಕತೆಯಂತೆ ಎರಡೂವರೆ ವರ್ಷ ಅಥವಾ ಮೂರು ವರ್ಷದ ಬಳಿಕ ಅಧಿಕಾರ ಹಸ್ತಾಂತರ. ಕಾರಣ 2024ರ ಸಂಸತ್ ಚುನಾವಣೆಗೆ ತೆರೆ ಬೀಳುತ್ತಿದ್ದಂತೆ ಶಿವಕುಮಾರ್ ತಮ್ಮ ಸರದಿಗಾಗಿ ಕಾಯತೊಡಗಿದ್ದರು. ಅದಕ್ಕಾಗಿ ಅವರು ಆಗಾಗ್ಗೆ ಹೈಕಮಾಂಡ್ ಕದವನ್ನು ತಟ್ಟಿದ್ದರು.
ಆದರೆ, ತಮಗೆ ಮುಖ್ಯಮಂತ್ರಿ ಸ್ಥಾನ ದೊರಕುವುದು ಸುಲಭವಲ್ಲ ಎಂಬುದು ಡಿಕೆಶಿಗೆ ಗೊತ್ತಾಗಲು ಹೆಚ್ಚು ಸಮಯ ಹಿಡಿಯಲಿಲ್ಲ. ವಿಶೇಷವಾಗಿ ಸೋನಿಯಾ ಗಾಂಧಿಯವರು ತಮಗೆ ಆಶೀರ್ವಾದ ಮಾಡುತ್ತಾರೆ ಎಂಬ ವಿಶ್ವಾಸ ಡಿಕೆಶಿಗಿತ್ತು. ಇಷ್ಟಾದರೂ ರಾಜಕೀಯ ಸನ್ನಿವೇಶ ಎಲ್ಲದಕ್ಕೂ ದಿಗ್ಬಂಧನ ಹಾಕಿದಂತಿತ್ತು. ಸಿದ್ದರಾಮಯ್ಯನವರ ಬೆಂಬಲಿಗರು ತಮ್ಮ ನಾಯಕನೇ ಪೂರ್ಣಾವಧಿಗೆ ಮುಖ್ಯಮಂತ್ರಿ ಎಂದು ಹೇಳತೊಡಗಿದ್ದರು. 'ಪವರ್ ಶೇರಿಂಗ್' ಒಪ್ಪಂದವೇ ಆಗಿಲ್ಲವೆಂದೂ ತಳ್ಳಿ ಹಾಕುತ್ತಿದ್ದರು. ಈ ಮೂಲಕ ಅಡಿಗಡಿಯೂ ಡಿಕೆಶಿ ಅವರನ್ನು ಕೆಣಕುವ ಕೆಲಸವನ್ನು ಕೆಲವರು ಮಾಡಿದ್ದರು. ಇದರಿಂದ ವಿಚಲಿತರಾಗಿ ಸ್ಥಿಮಿತ ಕಳೆದುಕೊಂಡಿದ್ದರೆ ಡಿಕೆಶಿ ಸಹನೆಯ ಕಟ್ಟೆಯೊಡೆದು ಹೋಗಬೇಕಿತ್ತು. ಜತೆಗೆ ಎಡವಟ್ಟುಗಳೂ ಆಗುತ್ತಿದ್ದವು. ಅಂಥ ಪ್ರಮಾದಕ್ಕೆ ಆಸ್ಪದ ನೀಡದೇ ಮೌನ ವಹಿಸಬೇಕಾದಾಗ ಮೌನ, ಜಾಣ ನಡೆ ಅನುಸರಿಸಬೇಕಾದಾಗ ಜಾಣ ನಡೆ, ಏನೋ ಒಂದು ಒಗಟಿನ ಮಾತನ್ನಾಡಿ ಬಿಗಿಯಾದ ವಾತಾವರಣವನ್ನು ತಿಳಿಗೊಳಿಸಿಕೊಳ್ಳುವುದು. ಇಂಥದ್ದೆಲ್ಲ ರಕ್ಷಣಾತ್ಮಕ ಕ್ರಮಗಳನ್ನು ಅಳವಡಿಸಿಕೊಂಡು ಸಾಗುತ್ತಾ ಬಂದ ಡಿಕೆಶಿ ಅವರೀಗ ಮುಖ್ಯಮಂತ್ರಿ ಆಗುವುದರಲ್ಲಿದ್ದಾರೆ.
ಅಧಿಕಾರದಾಟದ ಸ್ಪರ್ಧಾಂಗಣದಲ್ಲಿ ಎಲ್ಲ ಬಾಣಗಳೂ ತಮ್ಮತ್ತಲೇ ತೂರಿ ಬರುತ್ತಿರುವಾಗ, ರಾಜಕೀಯ ವಿರೋಧಿಗಳ ಕೂರಂಬುಧಿಗಳು ಅಟ್ಟಿಸಿಕೊಂಡು ಬಂದಾಗ ಸಹನಾ ಶಕ್ತಿಯಿಂದಲೇ ಎಲ್ಲವನ್ನೂ ನಿಭಾಯಿಸಿದವರು ಡಿಕೆಶಿ. ಅದಕ್ಕೆ ಅವರು ತಮ್ಮ ಸ್ವಭಾವಕ್ಕೆ ವಿರುದ್ಧವಾದ ತಾಳ್ಮೆಯನ್ನು ಮೈಗೂಡಿಸಿಕೊಂಡರು. ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಎಂಬಂತೆ ಪಕ್ಷದಲ್ಲೇ ತಮ್ಮ ವಿರೋಧಿಗಳು ಕೆಣಕಿದಾಗ ತಕ್ಷಣಕ್ಕೆ ಪ್ರತ್ಯುತ್ತರ ನೀಡಲು ಹೋಗಲಿಲ್ಲ. ತಮ್ಮದೇ ಶೈಲಿಯಲ್ಲಿ''ಹೌದಾ. ಹಾಗೆ ಹೇಳಿದ್ದಾರಾ? ಹಾಗಿದ್ದರೆ ಅವರೇ ನಮ್ಮ ಹೈಕಮಾಂಡ್,'' ಎನ್ನುತ್ತ ಇಂಥ ಸಂದರ್ಭ ದಾಟಿಕೊಂಡು ಬಂದರು.
1) ನೊಣವಿನಕೆರೆ to ಕುಂಭಮೇಳ ಅಂತೂ ಫಲಿಸಿತು ಪ್ರಾರ್ಥನೆ
ಉನ್ನತ ಪದವಿಯ ಅಭೀಷ್ಟ ಸಿದ್ಧಿಗಾಗಿ ಕಳೆದ ಒಂದು ಒಂದೂವರೆ ವರ್ಷದಲ್ಲಿ ಡಿಕೆಶಿ ಹೋಗದಿರುವ ಗುಡಿಗುಂಡಾರಗಳಿಲ್ಲ. ಅದು ಭಾರತದ ಶಿರೋಭೂಷಣವಾದ ಕಾಶ್ಮೀರದಲ್ಲಿರುವ ದೇಗುಲಗಳಿರಬಹುದು; ಭಾರತ ಮಾತೆಯ ಪದತಲದಲ್ಲಿರುವ ಕನ್ಯಾಕುಮಾರಿಯ ದೇವತಾ ಸ್ಥಾನವಿರಬಹುದು. ಇಂಥ ಅನೇಕಾನೇಕ ದೇವಸ್ಥಾನಗಳಿಗೆ ಡಿಕೆಶಿ ಭೇಟಿ ಕೊಟ್ಟಿದ್ದಾರೆ. ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸಿದ್ದಾರೆ. ಈ ಎಲ್ಲ ಪ್ರಾರ್ಥನೆಗಳು ಫಲಿಸಿವೆಯೇ ಎಂಬಂತೆ ಡಿಕೆಶಿ ಕರ್ನಾಟಕದ ಮುಖ್ಯಮಂತ್ರಿ ಆಗುವುದರಲ್ಲಿದ್ದಾರೆ. ಅವರ ಪಾಲಿಗೆ ಈಗ ಮಂಗಳಕರವಾದ ಅಮೃತ ಗಳಿಗೆ ಕೂಡಿ ಬಂದಿದೆ.2025ರ ಜುಲೈನಲ್ಲಿಆಷಾಢ ಶುಕ್ರವಾರದ ಪ್ರಯುಕ್ತ ಮೈಸೂರಿಗೆ ತೆರಳಿ ನಾಡದೇವತೆ ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ್ದ ಡಿಕೆಶಿ, ''ಪ್ರಯತ್ನ ವಿಫಲವಾದರೂ ಪ್ರಾರ್ಥನೆ ಫಲಿಸುತ್ತೆ,'' ಎಂದಿದ್ದರು. ಚಾಮುಂಡೇಶ್ವರಿಯ ಸನ್ನಿಧಿಯಲ್ಲಿ ನಿಂತು ಹೇಳುವಾಗ ಡಿಕೆಶಿ ಮುಖದಲ್ಲಿ ತೀವ್ರತರವಾದ ನಿರಾಶೆಯ ಭಾವ ಕಾಣುತ್ತಿತ್ತು. ಏಕೆಂದರೆ, ಸಿಎಂ ಸ್ಥಾನಕ್ಕಾಗಿ ಅವರು ನಡೆಸುತ್ತಿದ್ದ ಪ್ರಯತ್ನಗಳೆಲ್ಲ ವಿಫಲವಾಗುತ್ತಿದ್ದವು. ಹೈಕಮಾಂಡ್ ಕೃಪೆಯ ಭರವಸೆಯಿದ್ದರೂ ಅದು ಮೂರ್ತ ರೂಪ ಪಡೆಯುವುದು ಯಾವಾಗ ಎಂಬುದರ ಖಚಿತತೆ ಇರಲಿಲ್ಲ. ಹಾಗಾಗಿ ನಿರಾಶೆ, ಹತಾಶೆ, ಅಸಹಾಯಕತೆ ಪ್ರತಿರೂಪದಂತೆ ತೋರುತ್ತಿದ್ದ ಡಿಕೆಶಿ ಚಾಮುಂಡಿ ಬೆಟ್ಟದಲ್ಲಿ ಇಂಥದೊಂದು ಮಾತನ್ನಾಡಿದ್ದರು. ಈ ಬಗ್ಗೆ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಯೂ ನಡೆದಿತ್ತು. ಅಲ್ಲಿಂದ ಮುಂದೆ ಹಲವು ಬಾರಿ ಪ್ರಯತ್ನ ವಿಫಲವಾದರೂ ಪ್ರಾರ್ಥನೆ ಫಲಿಸಲಿದೆ ಎಂಬುದನ್ನು ಪುನರುಚ್ಚರಿಸ ತೊಡಗಿದ್ದರು. ಅದಕ್ಕೆ ಅವರ ರಾಜಕೀಯ ವಿರೋಧಿಗಳು ಒಳಗೊಳಗೇ ನಕ್ಕಿದ್ದರು. ಸಮಾಜದ ಮುಖ್ಯವಾಹಿನಿಯಲ್ಲಿ ತಮಾಷೆ ಮಾಡಿದವರೆಷ್ಟೋ ಮಂದಿ. ಡಿಕೆಶಿ ಮಾತ್ರ ಇದ್ಯಾವುದೂ ತಮ್ಮ ಕಿವಿಗೆ ಕೇಳಿಸಿಯೇ ಇಲ್ಲವೆಂಬಂತೆ ತಮ್ಮ ಪಾಡಿಗೆ ತಾವಿದ್ದರು. ಜತೆಗೆ ಮನಸ್ಸಿನ ನೆಮ್ಮದಿ, ಶಾಂತಿಗಾಗಿ ಮತ್ತು ತಮ್ಮ ಗುರಿ ತಲುಪುವುದಕ್ಕಾಗಿ ದೇಗುಲಗಳ ಭೇಟಿ, ಪೂಜೆ ಪುನಸ್ಕಾರವನ್ನು ಮುಂದುವರಿಸಿದ್ದರು.
ಕುಂಭಮೇಳಕ್ಕೂ ತೆರಳಿದ್ದ ಡಿಕೆಶಿ ಪುಣ್ಯಸ್ನಾನ ಮಾಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದರು. ಇತ್ತೀಚೆಗೆ ತಿರುಪತಿಗೂ ಭೇಟಿ ನೀಡಿದ್ದರು. ಅದೆಷ್ಟು ಬಾರಿ ಹೋಮ ಹವನ, ಯಜ್ಞ ಯಾಗಾದಿಗಳನ್ನು ಮಾಡಿಸಿದ್ದಾರೋ ಲೆಕ್ಕವಿಲ್ಲ. ಜಾತಕ ಪರಾಮರ್ಶೆ, ಜ್ಯೋತಿಷ್ಯವನ್ನು ಕೇಳದೆ ಯಾವುದೇ ಕಾರ್ಯ ಮಾಡುವವರಲ್ಲ ಡಿಕೆಶಿ. ನೊಣವಿನಕೆರೆಯ ಅಜ್ಜಯ್ಯನ ಮಠ ಮತ್ತು ಗದ್ದುಗೆ ದರ್ಶನ ಪಡೆದೇ ಎಲ್ಲ ಕೆಲಸಕ್ಕೂ ಮುಂದಡಿ ಇಡುವುದು ಡಿಕೆಶಿ ಕಾರ್ಯಶೈಲಿ.
2) ಗವಾಸ್ಕರ್, ದ್ರಾವಿಡ್ ಆವಾಹನೆ
3) ವಿಷಕಂಠನಿಗೆ ಹೋಲಿಸಿಕೊಂಡರು
ಹಾಲ್ಗಡಲನ್ನು ಕಡೆದಾಗ ಮೊದಲು ಸಿಕ್ಕಿದ್ದು ಹಾಲಾಹಲ. ಅಂಥ ಕಾರ್ಕೋಟಕ ವಿಷ ಕುಡಿದು ವಿಷಕಂಠನಾದವರ ಮಹಾದೇವ ಶಿವ. ಹಾಗೆಯೇ ಸಾಕಷ್ಟು ಸವಾಲುಗಳನ್ನು ಎದುರಿಸಿದ ತಮ್ಮನ್ನು ವಿಷಕಂಠನಿಗೆ ಡಿಕೆಶಿ ಹೋಲಿಸಿಕೊಂಡರು. ನೋವು ನುಂಗಿ ನಲಿವನ್ನು ಪ್ರಕಟ ಪಡಿಸುವುದು ಸುಲಭವಲ್ಲ. ಅಂತರಂಗದಲ್ಲಿ ಉರಿಯುವ ಅಗ್ನಿಯೇ ಇದ್ದರೂ ಬಹಿರಂಗದಲ್ಲಿ ಅದನ್ನು ತೋರಗೊಡದೇ ಒಳ್ಳೆಯ ದಿನಗಳಿಗಾಗಿ ಕಾಯತೊಡಗಿದ್ದೇನೆ ಎಂಬರ್ಥದಲ್ಲಿ ಅನೇಕ ಬಾರಿ ಡಿಕೆಶಿ ತಮ್ಮನ್ನು ವಿಷಕಂಠನೆಂದು ಹೇಳಿಕೊಂಡಿದ್ದುಂಟು.
4) ಸೋನಿಯಾ ಮೇಲೆ ಅಚಲ ವಿಶ್ವಾಸ
5) ಸಿದ್ದರಾಮಯ್ಯ ಜತೆಗೂ ಬಾಂಧವ್ಯ
ಬಯಸಿದ್ದು ಸಿಕ್ಕಿಲ್ಲ ಎಂಬ ಕಾರಣಕ್ಕೆ ಅಲ್ಲೊಮ್ಮೆ ಇಲ್ಲೊಮ್ಮೆ ಬೇಸರದ ಮಾತುಗಳನ್ನಾಡಿರಬಹುದು. ಸಿದ್ದರಾಮಯ್ಯ ಅವರಿಗೆ ಪರೋಕ್ಷ ಟಾಂಗ್ ಕೊಟ್ಟಿರಬಹುದು. ಇಷ್ಟರ ಹೊರತಾಗಿಯೂ ಸಿದ್ದರಾಮಯ್ಯ ಅವರ ಹಿರಿತನ ಮತ್ತು ಅನುಭವಕ್ಕೆ ಗೌರವ ಕೊಟ್ಟವರು ಡಿಕೆಶಿ. ಹೈಕಮಾಂಡ್ನ ಆಣತಿಯಂತೆ ಸಿದ್ದರಾಮಯ್ಯ ಅವರೊಂದಿಗೆ ಹೊಂದಿ ಕೊಂಡು ಹೆಜ್ಜೆ ಹಾಕಿದರು. ಅಧಿಕಾರ ಹಸ್ತಾಂತರಕ್ಕೆ ಮುಹೂರ್ತ ಕೂಡಿ ಬರಲು ಸಿದ್ದರಾಮಯ್ಯ ಅವರೊಂದಿಗೆ ಶಿವಕುಮಾರ್ ಗೌರವದಿಂದ ನಡೆದುಕೊಂಡಿದ್ದರ ಪಾತ್ರವೂ ಇದೆ.
6) ಎಸ್.ಎಂ. ಕೃಷ್ಣಶೈಲಿಯ ಪ್ರಭಾವ
7)ನಾಲಿಗೆಯಲ್ಲಿ ನಲಿಯುವ ಶ್ಲೋಕಗಳು
ಅಂತಿಮವಾಗಿ ಎಲ್ಲರೂ ಕಾಂಗ್ರೆಸ್ ಎಂಬ ಸಾಗರಕ್ಕೆ ಸೇರಿದವರು ಎನ್ನುತ್ತಾರೆ. ಅದಕ್ಕಾಗಿ "ಆಕಾಶಾತ್ ಪತಿತಂ ತೋಯಂ ಯಥಾಗಚ್ಛತಿ ಸಾಗರಃ'' ಎಂಬ ಸಂಸ್ಕೃತೋಕ್ತಿಯನ್ನು ಪ್ರಸ್ತಾಪಿಸುತ್ತಾರೆ. ಸಾರ್ವಜನಿಕ ವೇದಿಕೆ, ಪತ್ರಿಕಾ ಸಂದರ್ಶನಗಳಲ್ಲೂ ಇದನ್ನು ಅವರು ಹೇಳಿದ್ದಾರೆ. ಆಕಾಶದಿಂದ ಸುರಿಯುವ ಮಳೆ ಹನಿಗಳೆಲ್ಲವೂ ಸಾಗರವನ್ನು ಸೇರಲೇಬೇಕು ಎಂಬುದು ಈ ಸಂಸ್ಕೃತದ ಸಾಲುಗಳ ಅರ್ಥ. ಶ್ಲೋಕಗಳನ್ನು ಬಳಸಿಕೊಂಡು ವರ್ತಮಾನಕ್ಕೆ ಹೊಂದಿಸಿ ಅರ್ಥವತ್ತಾದ ಸಂದೇಶ ಕೊಡುವ ಕಲೆ ಡಿಕೆಶಿಗೆ ಸಿದ್ದಿಸಿದೆ ಎಂಬುದಕ್ಕೆ ಇದೊಂದು ಸ್ಯಾಂಪಲ್.
ಇನ್ನು ದೇವಸ್ಥಾನಗಳಲ್ಲಿ ತಾವು ಅರ್ಚನೆ ಮಾಡಿಸುವಾಗ ಪೂಜಾ ವಿಧಿ ವಿಧಾನದ ಬಗ್ಗೆಯೂ ಡಿಕೆಶಿ ಕಣ್ಣಿಟ್ಟಿರುತ್ತಾರೆ. ಇದರಲ್ಲಿ ವ್ಯತ್ಯಾಸವಾದರೆ ಅಥವಾ ಸಮಯದ ಅಭಾವದಿಂದ ಕ್ರಮ ತಪ್ಪಿದರೆ ಎಚ್ಚರಿಸುವಷ್ಟು ತಿಳಿವಳಿಕೆ ಅವರಿಗಿದೆ. ಒಟ್ಟಾರೆ ಅವರಿಗೆ ಪೂಜೆ ಸರಿಯಾಗಿ ಆಗಬೇಕು. ಮಂತ್ರೋಚ್ಚಾರಣೆ ಸಮರ್ಪಕ ವಾಗಿ ಇರಬೇಕು. ಅದರಿಂದ ಒಂದು ದೈವಿಕ ವಾತಾವರಣ ಮೂಡಬೇಕು. ಅಲ್ಲದಿದ್ದರೆ ಹೀಗೆ ಮಾಡಿ ಎಂದು ನಿರ್ದೇಶಿಸುವ ಮಟ್ಟಿಗೆ ಅವರು ತಿಳಿದಿದ್ದಾರೆ. ಹಾಗಾಗಿ ಅವರಿಗೆ ಖಾಸಗಿಯಾಗಿ ಆಪ್ತೇಷ್ಟರು ನೀವು ವಿದ್ವಾನ್ ಡಿಕೆ ಶಿವಕುಮಾರ್ ಎಂದು ಮೆಚ್ಚುಗೆ ವ್ಯಕ್ತಪಡಿಸುವುದೂ ಇದೆ.

