ಬೆಂಗಳೂರು: ದಾವಣಗೆರೆ ಬೈಎಲೆಕ್ಷನ್ ದಂಗಲ್ ಬಳಿಕ ಅಸಮಾಧಾನಗೊಂಡಿರುವ ಮುಸ್ಲಿಂ ಸಮುದಾಯವನ್ನು ಸಮಾಧಾನಪಡಿಸುವ ಪ್ರಯತ್ನವಾಗಿ ಸಚಿವ ಸಂಪುಟ ಸಭೆ ಮಹತ್ವದ ತೀರ್ಮಾನ ಕೈಗೊಂಡಿದೆ. ಇದಕ್ಕಾಗಿ 600 ಕೋಟಿ ರೂ. ಯೋಜನೆಗೆ ನಿರ್ಧರಿಸಿದೆ. ರಾಜ್ಯದ ನಾನಾ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಅಲ್ಪಸಂಖ್ಯಾತರು ವಾಸಿಸುತ್ತಿರುವ ಕಾಲೋನಿಗಳನ್ನು 600 ಕೋಟಿ ರೂ.
ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ನಿರ್ಧರಿಸಿದೆ. ಈ ಸಂಬಂಧ ಕ್ರಿಯಾ ಯೋಜನೆ ರೂಪಿಸಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಸಂಪುಟ ಸಭೆ ತೀರ್ಮಾನಿಸಿತು.
ಕೆಎಸ್ಟಿಡಿಸಿಗೆ ಕರ್ನಾಟಕ ಛತ್ರ ನಿರ್ವಹಣೆ ಹೊಣೆ
ಆಂಧ್ರ ಪ್ರದೇಶದ ತಿರುಮಲದಲ್ಲಿರುವ ಕರ್ನಾಟಕ ಛತ್ರದ ಕೊಠಡಿಗಳ ಕಾರ್ಯಾಚರಣೆ ಮತ್ತು ನಿರ್ವಹಣೆ ಯನ್ನು ರಾಜ್ಯ ಪ್ರವಾಸೋದ್ಯಮ ನಿಗಮಕ್ಕೆ ವಹಿಸುವ ತೀರ್ಮಾನ ವನ್ನು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿಕೈಗೊಳ್ಳಲಾಗಿದೆ. ಸದ್ಯ ತಿರುಮಲದಲ್ಲಿರುವ ಕರ್ನಾಟಕ ಛತ್ರದಲ್ಲಿನ ಕೊಠಡಿಗಳ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಮುಜರಾಯಿ ಇಲಾಖೆ ಮಾಡುತ್ತಿದೆ. ಇನ್ನು ಮುಂದೆ ಮುಜರಾಯಿ ಇಲಾಖೆ ಬದಲಿಗೆ ಕೆಎಸ್ಟಿಡಿಸಿಗೆ ಕಾರ್ಯಾಚರಣೆ- ನಿರ್ವಹಣೆ ವಹಿಸುವ ಪ್ರಸ್ತಾವಕ್ಕೆ ಸಂಪುಟ ಸಭೆ ಅನುಮೋದನೆ ನೀಡಿದೆ.ಇಲಾಖಾ ವಿಚಾರಣೆಗೆ ನಿರ್ಧಾರ
ಪುತ್ತೂರು ತಾಲೂಕಿನ ಆಡಳಿತ ವೈದ್ಯಾಧಿಕಾರಿ ಡಾ.ಅಶೋಕ್ ಕುಮಾರ್ ರೈ ಅವರ ವಿರುದ್ಧ 1984ರ ಕರ್ನಾಟಕ ಲೋಕಾಯುಕ್ತ ಕಾಯಿದೆಯ ಕಲಂ 12(3)ರಡಿ ಲೋಕಾಯುಕ್ತರು ಮಾಡಿರುವ ಶಿಫಾರಸನ್ನು ತಿರಸ್ಕರಿಸಿ ಆಡಳಿತ ಇಲಾಖೆಯಿಂದಲೇ ಇಲಾಖಾ ವಿಚಾರಣೆ ನಡೆಸಲು ಸಂಪುಟ ಸಭೆ ನಿರ್ಧರಿಸಿದೆ.ಎಸ್ಸಿ ಒಳಮೀಸಲಾತಿಯನ್ನು ಈ ಮೊದಲಿನಿಂತೆ ಶೇ.15 ರಷ್ಟು ಕಲ್ಪಿಸಲು ತೀರ್ಮಾನಿಸಿರುವ ರಾಜ್ಯ ಸರ್ಕಾರವು ರೋಸ್ಟರ್ ಬಿಂದುವನ್ನು 100 ರಿಂದ 400ಕ್ಕೆ ಹೆಚ್ಚಳ ಮಾಡಲು ತೀರ್ಮಾನಿಸಿದೆ. ರೋಸ್ಟರ್ ಬಿಂದು 100 ಇದ್ದ ಕಾರಣ ನೇಮಕಾತಿ ಪ್ರಕ್ರಿಯೆಯಲ್ಲಿ ಎಲ್ಲಾ ಸಮುದಾಯಗಳಿಗೂ ನ್ಯಾಯ ಒದಗಿಸಲು ಕಷ್ಟಕರವಾಗಿತ್ತು. ಹೀಗಾಗಿಯೇ, ಇದನ್ನು ಹೆಚ್ಚಿಸುವ ಅನಿವಾರ್ಯತೆ ಸರ್ಕಾರಕ್ಕೆ ಇತ್ತು. ಈ ಹಿನ್ನೆಲೆಯಲ್ಲಿ 100ರಷ್ಟು ಇದ್ದ ರೋಸ್ಟರ್ ಬಿಂದುವನ್ನು 400 ಕ್ಕೆ ಹೆಚ್ಚಳ ಮಾಡಿದೆ.
ಯಾಕೆ ದೊಡ್ಡದಾಗಿ ಬಿಂಬಿಸುತ್ತೀರಿ?
ಸಚಿವ ಸಂಪುಟ ಸಭೆಯಲ್ಲಿ ಅಲ್ಪಸಂಖ್ಯಾತರ ಪ್ರದೇಶ ಅಭಿವೃದ್ಧಿಗೆ 600 ಕೋಟಿ ಅನುದಾನ ಬಿಡುಗಡೆ ಬಗ್ಗೆ ಕೇಳಿದಾಗ, "ಅದನ್ನು ಮಾತ್ರ ಯಾಕೆ ದೊಡ್ಡದಾಗಿ ಬಿಂಬಿಸುತ್ತೀರಿ? ನಿನ್ನೆ ಸಚಿವ ಸಂಪುಟ ಸಭೆಯಲ್ಲಿ 18 ಸಾವಿರ ಕೋಟಿ ವೆಚ್ಚದಲ್ಲಿ ಬಿಡದಿ ಬಳಿ ಸ್ಯಾಟಲೈಟ್ ಟೌನ್ ಶಿಪ್ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. ಈ ವಿಚಾರ ಬಿಟ್ಟು ಅಲ್ಪಸಂಖ್ಯಾತರಿಗೆ ಕೊಟ್ಟಿರುವ ಅನುದಾನ ಬಗ್ಗೆ ಮಾತ್ರ ಮಾತನಾಡುವುದೇಕೆ?" ಎಂದು ಹೇಳಿದರು.
