ಪ್ರತಾಪ್ಗಢ್: ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದ ಹಣ ದುರುಪಯೋಗ ಪ್ರಕರಣ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ತಿರುಗಿದ್ದು, ಈ ವಿಷಯದಲ್ಲಿ ಬಿಜೆಪಿ ಮತ್ತು ಆರ್ಎಸ್ಎಸ್ ಅನ್ನು ತೀವ್ರವಾಗಿ ಟೀಕಿಸುತ್ತಿರುವ ವಿರೋಧ ಪಕ್ಷಗಳ ವಿರುದ್ಧ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ರಾಮ ಮಂದಿರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಚಂಪತ್ ರಾಯ್ ರಾಜೀನಾಮೆ ಅಂಗೀಕಾರ ಆದ ಬೆನ್ನಲ್ಲೇ, ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳು ಬಿಜೆಪಿ ಮತ್ತು ಆರ್ಎಸ್ಎಸ್ ವಿರುದ್ಧ ಕಿಡಿಕಾರಿದ್ದವು. ಇದಕ್ಕೆ ತಿರುಗೇಟು ನೀಡುತ್ತಾ, "ಪ್ರತಿಪಕ್ಷಗಳು ಹಿಂದೂ ನಂಬಿಕೆಯನ್ನು ಅಪಹಾಸ್ಯ ಮಾಡುತ್ತಿವೆ" ಎಂದು ಯೋಗಿ ಆದಿತ್ಯನಾಥ್ ಆರೋಪಿಸಿದ್ದಾರೆ.
"ವಿರೋಧ ಪಕ್ಷಗಳು ಬಿಜೆಪಿ ವಿರುದ್ಧ ಮಾತನಾಡುವುದನ್ನು ಸಹಿಸಬಹುದು. ಆದರೆ ದೇಣಿಗೆ ಲೂಟಿ ಪ್ರಕರಣವನ್ನು ನೆಪ ಮಾಡಿಕೊಂಡು ಹಿಂದೂ ನಂಬಿಕೆಗೆ ಅಪಹಾಸ್ಯ ಮಾಡಿದರೆ ಅದನ್ನು ಸಹಿಸಲು ನಮ್ಮಿಂದ ಸಾಧ್ಯತವಿಲ್ಲ" ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳಿಗೆ ಎಚ್ಚರಿಕೆ ನೀಡಿದರು.
"ದೇಶಾದ್ಯಂತ ಹೆಕ್ಟೇರ್ಗಟ್ಟಲೆ ಭೂಮಿಯನ್ನು ವಕ್ಫ್ ಹೆಸರಿನಲ್ಲಿ ಮಾರಾಟ ಮಾಡಿದಾಗ, ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳು ಮೌನವಾಗಿದ್ದವು. ಈ ಭೂಮಿ ಈ ದೇಶದ ಬಡವರಿಗೆ ಸೇರಿದ್ದು, ಬಡವರ ಭೂಮಿ ಲೂಟಿ ಹೊಡೆಯುತ್ತಿದ್ದಾಗ ವಿಪಕ್ಷಗಳು ಸುಮ್ಮನೆ ನೋಡುತ್ತಾ ಕುಳಿತಿದ್ದವು. ಈಗ ರಾಮ ಮಂದಿರ ದೇಣಿಗೆ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಾ ನಾಟಕವಾಡುತ್ತಿವೆ" ಎಂದು ಯೋಗಿ ಆದಿತ್ಯನಾಥ್ ತರಾಟೆಗೆ ತೆಗೆದುಕೊಂಡರು.
"ಅಯೋಧ್ಯೆಯಲ್ಲಿ ನಡೆದ ಕಳ್ಳತನಕ್ಕೆ ಸಂಬಂಧಿಸಿದಂತೆ, ನೀವು ಹಿಂದೂ ನಂಬಿಕೆಯನ್ನು ಅಣಕಿಸುತ್ತಿದ್ದೀರಿ, ಹೇಳಿ, ರಾಜ್ಯದೊಳಗೆ ಮತ್ತು ದೇಶಾದ್ಯಂತ ಸಾವಿರಾರು ಹೆಕ್ಟೇರ್ ಭೂಮಿಯನ್ನು ವಕ್ಫ್ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತಿದ್ದಾಗ ನೀವು ಒಮ್ಮೆಯಾದರೂ ಮಾತನಾಡಿದ್ದೀರಾ? ಈ ಭೂಮಿ ಬಡವರು ಮತ್ತು ಸಮಾಜದ ದುರ್ಬಲ ವರ್ಗಗಳಿಗೆ ಸೇರಿತ್ತು" ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಹರಿಹಾಯ್ದರು.

