1993ರಲ್ಲಿ ತೆರೆಗೆ ಬಂದ ಕನ್ನಡದ ಆಕ್ಷನ್ ಥ್ರಿಲ್ಲರ್ ಸಿನಿಮಾ 'ಆಕಸ್ಮಿಕ'. ಟಿ ಎಸ್ ನಾಗಾಭರಣ ನಿರ್ದೇಶನದ 'ಆಕಸ್ಮಿಕ' ಸಿನಿಮಾದಲ್ಲಿ ಡಾ ರಾಜ್ಕುಮಾರ್ ಪೊಲೀಸ್ ಅಧಿಕಾರಿಯಾಗಿ ಅಭಿನಯಿಸಿದ್ದಾರೆ. ಈ ಚಿತ್ರದ ನಟನೆಗಾಗಿ ತಮ್ಮ 64ನೇ ವಯಸ್ಸಿನಲ್ಲಿ ಡಾ ರಾಜ್ಕುಮಾರ್ 'ಅತ್ಯುತ್ತಮ ನಟ' 8ನೇ ಫಿಲ್ಮ್ ಫೇರ್ ಪ್ರಶಸ್ತಿಯನ್ನ ಮುಡಿಗೇರಿಸಿಕೊಂಡರು.
ಇದೇ ಸಿನಿಮಾದ 'ಹುಟ್ಟಿದರೆ.. ಕನ್ನಡ ನಾಡಲ್ಲಿ ಹುಟ್ಟಬೇಕು..' ಹಾಡು ಇಂದಿಗೂ ಜನಜನಿತ. ಅಸಲಿಗೆ, 'ಆಕಸ್ಮಿಕ' ಚಿತ್ರಕ್ಕೆ ಶಿವಣ್ಣ ಸೂಕ್ತ ಅಂತ ಹ್ಯಾಟ್ರಿಕ್ ಹೀರೋಗೆ ಕಥೆ ಹೇಳೋಕೆ ನಿರ್ದೇಶಕ ಟಿ ಎಸ್ ನಾಗಾಭರಣ ಹೊರಟಿದ್ದರು. ಆದರೆ, 'ಆಕಸ್ಮಿಕ' ಸಿನಿಮಾ ಕಥೆ ಕೇಳಿ, 'ನಾನು ಮಾಡಿದರೆ ಹೇಗೆ?' ಎಂದುಬಿಟ್ಟರು ಅಣ್ಣಾವ್ರು.
ಇನ್ನೂ, ಇದೇ ಸಮಯದಲ್ಲಿ 'ಜನುಮದ ಜೋಡಿ' ಚಿತ್ರದ ಕಥೆ ಟಿ ಎಸ್ ನಾಗಾಭರಣ ಕೈಯಲ್ಲೇ ಇತ್ತು. ಆ ಕಥೆಯನ್ನ ಕೇಳುವಾಗ ಡಾ ರಾಜ್ಕುಮಾರ್ ಎಷ್ಟು ಇನ್ವಾಲ್ವ್ ಆಗಿದ್ರು ಗೊತ್ತೇ? ಇಂತಹ ಸ್ವಾರಸ್ಯಕರ ಸಂಗತಿಗಳನ್ನ ವಿಜಯ ಕರ್ನಾಟಕ ವೆಬ್ ಆರಂಭಿಸಿರುವ 'ಶಿವಣ್ಣ @ 40' ವಿಶೇಷ ವಿಡಿಯೋ ಸಂದರ್ಶನ ಸರಣಿಯಲ್ಲಿ ಟಿ ಎಸ್ ನಾಗಾಭರಣ ಬಿಚ್ಚಿಟ್ಟಿದ್ದಾರೆ.
'ಆಕಸ್ಮಿಕ'ವಾಗಿ 'ಆಕಸ್ಮಿಕ' ಡೈರೆಕ್ಟರ್ ಆದೆ!
''ನಾನು ಯಾವಾಗಲೂ ಕಾದಂಬರಿಗಳ ಜೊತೆ ಇರುತ್ತಿದ್ದೆ. ಈ ಪಾತ್ರಕ್ಕೆ ಅವನು (ಶಿವಣ್ಣ) ಸೂಟ್ ಆಗ್ತಾನೆ ಅನ್ನೋ ತರಹದಲ್ಲಿ ನನ್ನ ಯೋಚನೆ ಇತ್ತು. ನಾನು ಅವನಿಗೋಸ್ಕರ ಈ ಕಾದಂಬರಿಯನ್ನು ಸೆಲೆಕ್ಟ್ ಮಾಡಿದ್ದಲ್ಲ. ನನ್ನ ಎಲ್ಲ ಸಿನಿಮಾಗಳಲ್ಲೂ ಕಥೆ ಏನನ್ನು ಡಿಮ್ಯಾಂಡ್ ಮಾಡುತ್ತೋ, ಅದಕ್ಕೆ ತಕ್ಕ ಹಾಗೆ ನಟರನ್ನು ಹೊಂದಿಸಿಕೊಂಡು ಬಂದಿದ್ದೇನೆ. 'ಆಕಸ್ಮಿಕ'ದಲ್ಲೂ ಹಾಗೆ ಆಗಿತ್ತು. 'ಆಕಸ್ಮಿಕ'ದ ಇಡೀ ಕಥೆ ಮುಗಿಯುವಷ್ಟರಲ್ಲಿ ಅಣ್ಣಾವ್ರು ಹೇಳಿದ್ದು... ಪಾರ್ವತಮ್ಮನವರ ಕೈಯಲ್ಲಿ ಹೇಳಿ ಕಳಿಸಿದ್ದು... ''ಇದನ್ನು ನಾನು ಮಾಡಿದರೆ ಹೇಗೆ?" ಅಂತ''
''ನಾನು ಕಥೆ ಹೇಳೋಕೆ ಹೋಗಿದ್ದು ಶಿವರಾಜ್ಕುಮಾರ್ಗೆ. ಆದರೆ ಅಣ್ಣಾವ್ರು ಹೇಳಿದ್ದು, "ಇಲ್ಲ, ನಾನು ಮಾಡಿದರೆ ಹೇಗೆ?" ಅಂತ. ನಮಗೆ ನಿಧಿ ಸಿಕ್ಕಂಗೆ ಆಗ್ಬಿಟ್ಟಿತ್ತು. ಅದಕ್ಕೋಸ್ಕರ ಸುಮಾರು ಕಷ್ಟಪಟ್ಟೆ. ಕಥೆಯ ಸ್ವರೂಪವನ್ನು, ಪಾತ್ರದ ಸ್ವರೂಪವನ್ನು ಬದಲಾಯಿಸಬೇಕಾಗಿ ಬಂತು. ಆದರೆ ಬದಲಾವಣೆ ಒಳ್ಳೆಯದಕ್ಕಾಗಿ ಆಯ್ತು. ಅದು 'ಆಕಸ್ಮಿಕ'ದ್ದು. ಅದನ್ನು ಮಾಡುತ್ತಿದ್ದಾಗಲೇ ನಾನು ಅಣ್ಣಾವ್ರಿಗೆ ಮತ್ತು ವರದಣ್ಣ ಅವರಿಗೆ ಬೇರೆ ಬೇರೆ ಕಥೆಗಳನ್ನು ಹೇಳ್ತಾನೆ ಇದ್ದೆ. ಅದರಲ್ಲಿ ಒಂದು 'ಜನುಮದ ಜೋಡಿ'. ಇನ್ನೊಂದು 'ಚಿಗುರದ ಕನಸು'. ವರದಣ್ಣ ಅವರಿಗೆ ನನ್ನ ಹತ್ತಿರ ಒಂದಷ್ಟು ಕಥೆಗಳ ಗುಚ್ಚ ಇದೆ ಅಂತ ಗೊತ್ತಿತ್ತು'' ಎಂದು ವಿಜಯ ಕರ್ನಾಟಕ ವೆಬ್ ಜೊತೆ ಮಾತನಾಡುವಾಗ ನಿರ್ದೇಶಕ ಟಿ ಎಸ್ ನಾಗಾಭರಣ ಹಳೇ ನೆನಪುಗಳಿಗೆ ಜಾರಿದರು.
'ಜನುಮದ ಜೋಡಿ' ಸಿನಿಮಾ ಶುರುವಾಗಿದ್ದು ಹೇಗೆ?
''ಜನುಮದ ಜೋಡಿ' ಕಥೆ ಕೇಳಿದ ಮೇಲೆ.. ಕೊನೆಯಲ್ಲಿ ಅಣ್ಣಾವ್ರು ಹೇಳಿದ್ದು ಏನಪ್ಪಾ ಅಂದ್ರೆ, "ಅಬ್ಬಾ.. ಸದ್ಯ ಅವರಿಬ್ಬರು ಸೇರಿಕೊಂಡ್ರಲ್ಲಪ್ಪ.. ಅಯ್ಯೋ, ನಿನ್ನ ಮನೆ ಕಾಯಿ ಹೋಗ..'' ಅಂತ. ಅಂದ್ರೆ, ಪಾಪ... ಅವರಿಬ್ಬರು ಪ್ರೀತಿ ಮಾಡಿದವರು.. ಬೇರೆಯಾಗಿಬಿಟ್ರೆ ಏನಪ್ಪಾ ಗತಿ ಅಂತ ಅವರಿಗೆ ಒದ್ದಾಟ ಆಗ್ತಾ ಇತ್ತು. ಅವಾಗ ಕೊನೆಯಲ್ಲಿ ಆ ಜಾತ್ರೆಯಲ್ಲಿ ಬಂದು ಅವಳನ್ನ ಅವನು ಎತ್ಕೊತಾನೆ ಅಂದ ಕೂಡಲೇ ಅವರಿಗೆ 'ಸದ್ಯ ಒಳ್ಳೆ ಕೆಲಸ ಆಯ್ತು. ಬದುಕಿಸಿದೆ ನನ್ನ' ಅಂತ ಅಂದ್ರು ಅಣ್ಣಾವ್ರು. ಅಷ್ಟರಮಟ್ಟಿಗೆ ಅವರು ಇನ್ವಾಲ್ವ್ ಆಗಿದ್ದರು. ಯಾವಾಗ 'ಜನುಮದ ಜೋಡಿ' ಕಥೆಯನ್ನ ಅಣ್ಣಾವ್ರು ಈ ರೀತಿ ಆಸ್ವಾದಿಸಿದರೋ.. ತಕ್ಷಣ ನನಗೆ ಅನಿಸ್ತು, 'ಈ ಕಥೆ ಸೂಪರ್ ಹಿಟ್' ಆಗುತ್ತೆ ಅಂತ'' ಎಂದು 'ಮೇಕಿಂಗ್ ಆಫ್ ಜನುಮದ ಜೋಡಿ' ಸಿನಿಮಾದ ಬಗ್ಗೆ ಟಿ ಎಸ್ ನಾಗಾಭರಣ ವಿವರಿಸಿದರು.

