ಲಖನೌ: 'ಶಕ್ತಿ ಕೇಂದ್ರ ಸಂಯೋಜಕ ಸಮ್ಮೇಳನ'ದಲ್ಲಿ ಮಾತನಾಡುತ್ತಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರು, ಅಯೋಧ್ಯೆಯ ಶ್ರೀರಾಮ ಮಂದಿರ ದೇವಸ್ಥಾನದ ದೇಣಿಗೆ ಲೂಟಿ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿರೋಧಿಗಳಿಗೆ ಖಡಕ್ ತಿರುಗೇಡು ನೀಡಿದ್ದಾರೆ.
"ಈ ಹಿಂದೆ
ಪ್ರಭು ಶ್ರೀರಾಮನ ಅಸ್ತಿತ್ವ ಪ್ರಶ್ನಿಸಿದವರೇ ಇಂದು ದೇಣಿಗೆ ಕಳ್ಳತನ ಪ್ರಕರಣವನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ" ಎಂದು ನಿತಿನ್ ನಬಿನ್ ಹರಿಹಾಯ್ದಿದ್ದಾರೆ.
"ಅಯೋಧ್ಯೆಯ ಶ್ರೀರಾಮ ಮಂದಿರದ ಕುರಿತಾದ ಚರ್ಚೆಗಳ ಬಗ್ಗೆ ಇಂದು ಕೆಲವರು ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಇವರು ಈ ಹಿಂದೆ ಶ್ರೀರಾಮನ ಅಸ್ತಿತ್ವವನ್ನೇ ಪ್ರಶ್ನಿಸಿದ್ದರು. ರಾಮ ಸೇತುವಿನ ಅಸ್ತಿತ್ವವನ್ನೂ ಇವರು ಪ್ರಶ್ನೆ ಮಾಡಿದ್ದರು. ಕರ ಸೇವಕರ ಮೇಲೆ ಗುಂಡಿನ ದಾಳಿ ನಡೆಸಿ ರಕ್ತದ ಹೊಳೆಯನ್ನೇ ಹರಿಸಿದವರು ಇವರೇ. ಆದರೀಗ ಮೊಸಳೆ ಕಣ್ಣೀರು ಸುರಿಸುತ್ತಾ ಹಿಂದೂಗಳ ನಂಬಿಕೆಯ ಪರವಾಗಿ ಮಾತನಾಡುತ್ತಿರುವುದು ಹಾಸ್ಯಾಸ್ಪದ" ಎಂದು ನಿತಿನ್ ನಬಿನ್ ತರಾಟೆಗೆ ತೆಗೆದುಕೊಂಡದ್ದಾರೆ.
"ಶ್ರೀರಾಮ ಮಂದಿರಕ್ಕೆ ಸಂಬಂಧಿಸಿದ ನಂಬಿಕೆಯೊಂದಿಗೆ ಯಾರೂ ಆಟವಾಡದಂತೆ ತಡೆಯಲು, ನಾವು ನಮ್ಮ ರಕ್ತವನ್ನು ಕೂಡ ಚೆಲ್ಲಲು ಸಿದ್ಧ. ಪ್ರಭು ಶ್ರೀರಾಮನ ಗೌರವ ಕಾಪಾಡಲು ಅಗತ್ಯವಿರುವ ಯಾವುದೇ ತ್ಯಾಗಕ್ಕೂ ನಾವು ಸಿದ್ಧರಿದ್ದೇವೆ" ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಅತ್ಯಂತ ಭಾವುಕರಾಗಿ ಹೇಳಿದರು. ಇತ್ತೀಚಿಗೆ ಆರ್ಎಸ್ಎಸ್ ರಾಮ ಮಂದಿರ ದೇಣಿಗೆ ಲೂಟಿ ದುರದೃಷ್ಟಕರ ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
"ಅಯೋಧ್ಯೆ ದೇಣಿಗೆ ಲೂಟಿ ಪ್ರಕರಣವನ್ನು ಹಿಂದೂ ವಿರೋಧಿ ಶಕ್ತಿಗಳು ತಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರೆ. ರಾಹುಲ್ ಗಾಂಧಿ, ಅಖಿಲೇಶ್ ಯಾದವ್ ಮತ್ತು ಅರವಿಂದ್ ಕೇಜ್ರಿವಾಲ್ ಅವರಿಗೆ ನಾನು ಸ್ಪಷ್ಟವಾಗಿ ಹೇಳಬಯಸುತ್ತೇನೆ. ನಿಮ್ಮ ತಂತ್ರಗಳಿಗೆ ನಾವು ಬಲಿಯಾಗುತ್ತೇವೆ ಅಥವಾ ನಿಮ್ಮ ವಂಚನೆಗಳಿಂದ ದಾರಿ ತಪ್ಪುತ್ತೇವೆ ಎಂದು ಭಾವಿಸಿ, ಹಿಂದೂ ಧರ್ಮವನ್ನು ಕಡಿಮೆ ಅಂದಾಜು ಮಾಡಬೇಡಿ" ಎಂದು ನಿತಿನ್ ನಬಿನ್ ಎಚ್ಚರಿಸಿದರು.
"ದೇಣಿಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ನಿಷ್ಪಕ್ಷಪಾತ ತನಿಖೆ ನಡೆಸುತ್ತಿದೆ. ಈ ಪ್ರಕರಣದಲ್ಲಿ ತಪ್ಪಿತಸ್ಥರು ಎಂದು ಸಾಬೀತಾದವರೆಲ್ಲರೂ ಕಾನೂನಿನಡಿ ಶಿಕ್ಷೆಗೆ ಗುರಿಯಾಗುವುದು ಖಚಿತ. ಆದರೆ ಇದನ್ನೇ ನೆಪ ಮಾಡಿಕೊಂಡು ಹಿಂದೂ ವಿರೋಧಿಗಳು ಪ್ರಭು ಶ್ರೀರಾಮನಿಗೆ ಅಪಮಾನ ಮಾಡಿದರೆ ಸಹಿಸುವುದಿಲ್ಲ" ಎಂದು ನಿತಿನ್ ನಬಿನ್ ಗುಡುಗಿದ್ದಾರೆ.
ರಾಮ ಮಂದಿರ ದೇಣಿಗೆ ವಿವಾದಕ್ಕೆ ಪ್ರತಿಕ್ರಿಯೆ ನೀಡುತ್ತಾ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು, "ದೇಣಿಗೆ ಲೂಟಿ ನೆಪದಲ್ಲಿ ರಾಷ್ಟ್ರ ವಿರೋಧಿಗಳಿಂದ ಹಿಂದೂ ಧರ್ಮಕ್ಕೆ ಅವಹೇಳನ ಮಾಡುವ ಪ್ರಯತ್ನ ನಡೆದಿದೆ" ಎಂದು ಆರೋಪಿಸಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.
ಒಟ್ಟಿನಲ್ಲಿ ರಾಮ ಮಂದಿರ ದೇಣಿಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಕೀಯ ವಾಕ್ಸಮರ ಹೆಚ್ಚಿದ್ದು, ಪ್ರಕರಣದ ತನಿಖೆ ಮುಗಿದ ಬಳಿಕ ಯಾರೆಲ್ಲಾ ತಪ್ಪಿತಸ್ಥರು ಎಂಬ ಸತ್ಯ ಹೊರಬರಲಿದೆ.

