ಚೆನ್ನೈ : ತಮಿಳುನಾಡು ಬಿಜೆಪಿ ಘಟಕದ ಜನಪ್ರಿಯ ನಾಯಕ, ಕೆ ಅಣ್ಣಾಮಲೈ ಅವರ ಹೆಸರನ್ನು ಹೊರಗಿಟ್ಟು ಬಿಜೆಪಿಯ ಕೇಂದ್ರೀಯ ಆಯ್ಕೆ ಸಮಿತಿ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ನಿರೀಕ್ಷೆಯಂತೆ, ಅಣ್ಣಾಮಲೈ ಹೆಸರು ಪಟ್ಟಿಯಲ್ಲಿ ಇಲ್ಲ. ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಅಣ್ಣಾಮಲೈ ಹೇಳಿದ್ದರು.
ಟಿಕೆಟ್ ಘೋಷಣೆಯ ಬೆನ್ನಲ್ಲೇ, ಅಣ್ಣಾಮಲೈ ಮಾಡಿರುವ ಟ್ವೀಟ್, ಭಾರೀ ಚರ್ಚೆಗೆ ಗ್ರಾಸವಾಗಿದೆ.
ಮುಂಬರುವ ಚುನಾವಣೆಯಲ್ಲಿ ಎಐಎಡಿಎಂಕೆ ನೇತೃತ್ವದ ಎನ್ಡಿಎ ಮೈತ್ರಿಕೂಟದ ಭಾಗವಾಗಿರುವ ಬಿಜೆಪಿ, 27 ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದೆ. ಎಲ್ಲಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ. ಬಿಜೆಪಿಯು, ಐವರು ಮಹಿಳೆಯರಿಗೆ ಟಿಕೆಟ್ ಅನ್ನು ನೀಡಿದೆ. ಎಡಪ್ಪಾಡಿ ಪಳನಿಸ್ವಾಮಿ ಜೊತೆಗಿನ ಮನಸ್ತಾಪ ಮತ್ತು ಟಿಕೆಟ್ ಹಂಚಿಕೆಯ ವಿಚಾರದಲ್ಲಿ ಅಸಮಾಧಾನವನ್ನು ವ್ಯಕ್ತ ಪಡಿಸಿ ಅಣ್ಣಾಮಲೈ, ಚುನಾವಣಾ ಕಣದಿಂದ ದೂರ ಸರಿಯುವುದಾಗಿ ಹೇಳಿದ್ದರು.
ಅಣ್ಣಾಮಲೈ ಸ್ಪರ್ಧಿಸಲು ಬಯಸಿದ್ದ ಕ್ಷೇತ್ರದಲ್ಲಿ ವಾನತಿ ಶ್ರೀನಿವಾಸನ್'ಗೆ ಟಿಕೆಟ್
ಬಿಜೆಪಿ ಪ್ರಕಟಿಸಿರುವ ಅಭ್ಯರ್ಥಿಗಳ ಪೈಕಿ ಪ್ರಮುಖವಾಗಿ, ಮೈಲಾಪುರದಿಂದ ತಮಿಳುಸೈ ಸೌಂದರರಾಜನ್, ಅವನಾಶಿಯಿಂದ ಎಲ್.ಮುರುಗನ್, ಕೊಯಂಬತ್ತೂರು ಉತ್ತರದಿಂದ ವಾನತಿ ಶ್ರೀನಿವಾಸನ್, ಸತ್ತೂರು ನಿಂದ ನೈನಾರ್ ರಾಜೇಂದ್ರನ್, ತಿರುಚೆಂಡೂರ್'ನಿಂದ KRM ರಾಧಾಕೃಷ್ಣನ್ ಅವರಿಈ ಟಿಕೆಟ್ ನೀಡಲಾಗಿದೆ. ಎಲ್ಲವೂ ತಮ್ಮ ಯೋಜನೆಯಂತೆ ನಡೆದಿದ್ದರೆ, ಅಣ್ಣಾಮಲೈ, ಕೊಯಂಬತ್ತೂರು ಉತ್ತರದಿಂದ ಸ್ಪರ್ಧಿಸಲು ಬಯಸಿದ್ದರು. ಅಭ್ಯರ್ಥಿಗಳ ಆಯ್ಕೆ ಘೋಷಣೆ ಬೆನ್ನಲ್ಲೇ, ಅಣ್ಣಾಮಲೈ ಟ್ವೀಟ್ ಮಾಡಿದ್ದಾರೆ.ಎಲ್ಲಾ ಅಭ್ಯರ್ಥಿಗಳಿಗೆ ಅಭಿನಂದನೆಗಳು ಎಂದ ಅಣ್ಣಾಮಲೈ
ಅಣ್ಣಾಮಲೈ ಮಾಡಿರುವ ಟ್ವೀಟ್ ಹೀಗಿದೆ, 'ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಘೋಷಣೆಯಾದ ಎಲ್ಲಾ ಬಿಜೆಪಿ ಅಭ್ಯರ್ಥಿಗಳಿಗೆ ನನ್ನ ಅಭಿನಂದನೆಗಳು. ಡಿಎಂಕೆಯ ದ್ರೋಹದಿಂದ ಬೇಸತ್ತಿರುವ ತಮಿಳುನಾಡಿನ ಪ್ರತಿಯೊಬ್ಬ ಸಹೋದರ, ಸಹೋದರಿಯರು ನಮ್ಮ ಅಭ್ಯರ್ಥಿಗಳನ್ನು ಬೆಂಬಲಿಸಲು ಕೋರುತ್ತಿದ್ದೇನೆ' ಎಂದು ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್'ನಲ್ಲಿ ಬರೆದುಕೊಂಡಿದ್ದಾರೆ.ಅಭ್ಯರ್ಥಿಗಳ ಬೆನ್ನಿಗೆ ನಿಂತು ಕೆಲಸ ಮಾಡುತ್ತೇನೆ
ನಮ್ಮ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಯವರ ದೂರದರ್ಶಿ ನಾಯಕತ್ವದಲ್ಲಿ ದೇಶ ಶಕ್ತಿಯುತವಾಗಿ ಮುನ್ನಡೆಯುತ್ತಿದೆ. ಆದರೆ, ತಮಿಳುನಾಡು ಮಾತ್ರ ಡಿಎಂಕೆ ಸರ್ಕಾರದ ಅಹಂಕಾರದ ಧೋರಣೆಯಿಂದ ಹಿಂದುಳಿದಿದೆ. ಒಬ್ಬ ಕಾರ್ಯಕರ್ತನಾಗಿ, ಹೆಗಲಿಗೆ ಹೆಗಲು ಕೊಟ್ಟು ನಿಂತು, ಮುಂಬರುವ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟಕ್ಕೆ 210 ಸ್ಥಾನವನ್ನು ಗೆಲ್ಲುವ ಗುರಿಯನ್ನು ಇಟ್ಟುಕೊಂಡು, ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತೇನೆ ಎಂದು ಕೆ.ಅಣ್ಣಾಮಲೈ ಟ್ವೀಟ್ (ಎಕ್ಸ್) ಮಾಡಿದ್ದಾರೆ.ನಿಮಗೆ ಟಿಕೆಟ್ ಸಿಗದೇ ಇದ್ದಿದ್ದಕ್ಕೆ ನಮಗೆ ನೋವಿದೆ
ಅಣ್ಣಾಮಲೈ ಅವರ ಟ್ವೀಟಿಗೆ ನೂರಾರು ಕಾಮೆಂಟುಗಳು ಬಂದಿವೆ. 'ನೀವು ತಮಿಳುನಾಡಿನ ಮುಂದಿನ ಭವಿಷ್ಯ, ನಿಮ್ಮ ಬೆಂಬಲದೊಂದಿಗೆ ಬಿಜೆಪಿ ಉತ್ತಮ ಸಾಧನೆಯನ್ನು ಮಾಡಲಿ', 'ಬಿಜೆಪಿ ಎಲ್ಲಾ ರಾಜ್ಯಗಳಲ್ಲಿ ತನ್ನ ಅಸ್ತಿತ್ವವನ್ನು ವೃದ್ದಿಸಿಕೊಳ್ಳುತ್ತದೆ, ಆದರೆ, ತಮಿಳುನಾಡಿನಲ್ಲಿ ಹಿಂದೆ ಎಲ್ಲಿ ಇತ್ತೋ, ಅಲ್ಲಿಗೇ ಮತ್ತೆ ಹೋಗುತ್ತಿದೆ', ನಿಮ್ಮ ಬಗ್ಗೆ ನಮಗೆ ಹೆಮ್ಮೆಯಿದೆ, ನಿಮ್ಮ ಮೆಂಟರ್ ನರೇಂದ್ರ ಮೋದಿಗೂ ನಿಮ್ಮ ಮೇಲೆ ಹೆಮ್ಮೆಯಿರಬಹುದು. ಆದರೂ, ಕೊಯಂಬತ್ತೂರಿನಲ್ಲಿ ನಿಮಗೆ ಟಿಕೆಟ್ ಸಿಗದೇ ಇರುವುದಕ್ಕೆ ನಮಗೆ ನೋವಿದೆ' ಈ ರೀತಿಯ ಪ್ರತಿಕ್ರಿಯೆಗಳು, ಅಣ್ಣಾಮಲೈ ಟ್ವೀಟ್'ಗೆ ಬಂದಿದೆ.
