ವಿಜಯನಗರ: ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಟಿ.ಸಿ. ಬರೆಯೋಕೆ, ನಾನಾ ಪ್ರಮಾಣ ಪತ್ರಗಳನ್ನು ಬರೆಯೋಕೆ ಶಿಕ್ಷಕರೇ ಕಷ್ಟ ಪಡುತ್ತಿದ್ದಾರೆ. ಪಾಠ ಮಾಡುತ್ತಿರುವಾಗ ಅಡ್ಮಿಷನ್ಗಾಗಿ, ಟಿ.ಸಿ.ಗಾಗಿ ಪೋಷಕರು ಬಂದರೆ, ಅರ್ಧದಲ್ಲೇ ಪಾಠ ಬಿಟ್ಟು ತರಗತಿಗಳಿಂದ ಹೋಗಿ ಆ ಕೆಲಸ ಮಾಡಬೇಕಾಗುತ್ತದೆ.
ಖಾಸಗಿ ಶಾಲೆಗಳಲ್ಲಿ ಪ್ರತ್ಯೇಕವಾಗಿ ಕ್ಲರ್ಕ್ಗಳು ಇರ್ತಾರೆ. ಆದರೆ ಸರ್ಕಾರಿ ಶಾಲೆಗಳಲ್ಲಿ ಮಾತ್ರ ನಮ್ಮ ಶಿಕ್ಷಕರೇ ಎಲ್ಲವೂ ಮಾಡಬೇಕಾಗಿದೆ ಎಂದು ವಿದ್ಯಾರ್ಥಿನಿಯೊಬ್ಬಳು ಸಿಎಂ ಬಸವರಾಜ ಬೊಮ್ಮಾಯಿ ಅವರೊಂದಿಗೆ ಕಾಳಜಿ ಹಂಚಿಕೊಂಡಿದ್ದಾಳೆ.
ವಿಜಯನಗರ ಜಿಲ್ಲೆಯ ಹೊಸಪೇಟೆಯ ಸರ್ಕಾರಿ ಶಾಲೆ ವಿದ್ಯಾರ್ಥಿನಿಯಾದ ಬಿ.ಎಚ್.ಶಾರದಾ ದಿಗ್ವಿಜಯ ನ್ಯೂಸ್ ಮೂಲಕ ವಿಡಿಯೋ ಸಂದೇಶದಲ್ಲಿ ಸರ್ಕಾರಿ ಶಾಲೆಗಳ ಈ ಸಮಸ್ಯೆಯ ಬಗ್ಗೆ ಬೆಳಕು ಚೆಲ್ಲಿದ್ದು, ದಿಟ್ಟದನಿಯಲ್ಲಿ ಸರ್ಕಾರಿ ಶಾಲೆಗಳಿಗೆ ಎಫ್ಡಿಎ, ಎಸ್ಡಿಎ ಕ್ಲರ್ಕ್ಗಳ ನೇಮಕ ಮಾಡುವಂತೆ ಸಿಎಂಗೆ ಮನವಿ ಮಾಡಿದ್ದಾಳೆ. ದೆಹಲಿ ಮಾದರಿಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಖಾಸಗಿ ಶಾಲೆಗಳಿಗಿಂತ ಹೆಚ್ಚು ಸೌಲಭ್ಯಗಳನ್ನು ಒದಗಿಸಿ ಹೆಚ್ಚು ಮಕ್ಕಳ ಸರ್ಕಾರಿ ಶಾಲೆಯಲ್ಲಿ ಕಲಿಯುವಂತೆ ಅಭಿವೃದ್ಧಿ ಪಡಿಸಬೇಕೆಂದು ಮನವಿ ಮಾಡಿದ್ದಾಳೆ.
ಮಂಡ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆ ಜಾಲ ಸಕ್ರಿಯ! ಡಿಎಚ್ಒ ನೇತೃತ್ವದ ತಂಡ ದಾಳಿ, ಗರ್ಭಿಣಿಯರಿಬ್ಬರ ರಕ್ಷಣೆ
ತೊಗಲು ಗೊಂಬೆ ಖ್ಯಾತಿಯ ನಾಡೋಜ ಬೆಳಗಲ್ ವೀರಣ್ಣ ಅವರ ಮೊಮ್ಮಗಳಾದ ಶಾರದಾ, ಕನ್ನಡ ಮಾಧ್ಯಮದಲ್ಲಿ ಮತ್ತು ಸರ್ಕಾರಿ ಶಾಲೆಯಲ್ಲಿ ಕಲಿಯಬೇಕೆಂಬ ಅಭಿಮಾನಕ್ಕೆ ನನ್ನ ಅಪ್ಪ-ಅಮ್ಮ ನನ್ನನ್ನು ಸರ್ಕಾರಿ ಶಾಲೆಗೆ ಸೇರಿಸಿದ್ದಾರೆ. ನಾನು ಇಲ್ಲಿ ಚೆನ್ನಾಗಿ ಕಲಿಯುತ್ತಿದ್ದೇನೆ ಎಂದು ಹೆಮ್ಮೆಯಿಂದ ಹೇಳಿಕೊಂಡಿರುವ ಅವಳು, 'ಸಿಎಂ ಅಂದ್ರೆ ಕಾಮನ್ ಮ್ಯಾನ್ ಅಂತ ಹೇಳಿಕೊಂಡಿರುವ ನಮ್ಮ ಮುಖ್ಯಮಂತ್ರಿಗಳು ಮಕ್ಕಳನ್ನು ಹೆಚ್ಚು ಪ್ರೀತಿಸ್ತಾರೆ ಅಂತ ಕೇಳಿದ್ದೆ. ಅದಕ್ಕೆ ಸರ್ಕಾರಿ ಶಾಲೆಗಳ ಎಲ್ಲಾ ಮಕ್ಕಳ ಪರವಾಗಿ ನಾನು ಧೈರ್ಯವಾಗಿ ಈ ಮನವಿ ಮಾಡುತ್ತಿದ್ದೇನೆ' ಎಂದು ಹೇಳಿದ್ದಾಳೆ. (ದಿಗ್ವಿಜಯ ನ್ಯೂಸ್)

