ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ದೇಶದಲ್ಲಿ ಕರೊನಾ ಎರಡನೇ ಅಲೆ ವ್ಯಾಪಕವಾಗಿ ಆವರಿಸಿ ಆರೋಗ್ಯ ತುರ್ತು ಪರಿಸ್ಥಿತಿಗೆ ಕಾರಣವಾಗಿದೆ. ಈ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿರುವ ದೆಹಲಿ ಹೈಕೋರ್ಟ್ ಇದು ಅಲೆಯಲ್ಲ, ಸುನಾಮಿ. ಕರೊನಾ ರೋಗಿಗಳಿಗೆ ಅವಶ್ಯವಾಗಿ ಬೇಕಾಗಿರುವ ಆಮ್ಲಜನಕದ ಪೂರೈಕೆಯಲ್ಲಿ ಯಾರಾದರೂ ತಡೆ ಒಡ್ಡಿದರೇ ಅಂತವರನ್ನು ನೇಣಿಗೇರಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದೆ.
ದೆಹಲಿಯಲ್ಲಿ ಆಕ್ಸಿಜನ್ ಕೊರತೆ ಬಗ್ಗೆ ಕೇಂದ್ರ ಮತ್ತು ಕೇಜ್ರಿವಾಲ್ ಸರ್ಕಾರದಿಂದ ಸ್ಪಷ್ಟನೆ ಪಡೆಯಬೇಕು ಎಂದು ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಈ ಅಭಿಪ್ರಾಯಪಟ್ಟಿದೆ.
ದೆಹಲಿಯಲ್ಲಿ ಕೋವಿಡ್ ಹರಡುತ್ತಿರುವುದನ್ನು ಗಮನಿಸಿದರೆ ಇದು ಅಲೆಯಲ್ಲ ಸುನಾಮಿಯೇ ಸರಿ. ದೆಹಲಿಯಲ್ಲಿ ಕರೊನಾ ಎದುರಿಸಲು ಆಸ್ಪತ್ರೆಗಳೆಷ್ಟಿವೆ?
ನ್ಯಾಯಮೂರ್ತಿಗಳಾದ ವಿಪಿನ್ ಸಾಂಘಿ ಮತ್ತು ರೇಖಾ ಪಳ್ಳಿ ಅವರ ನೇತೃತ್ವದ ಪೀಠ ಈ ಅಭಿಪ್ರಾಯಪಟ್ಟಿದೆ. ಶನಿವಾರ ದೆಹಲಿಯಲ್ಲಿ 25331 ಕರೊನಾ ಸೋಂಕಿನ ಹೊಸ ಪ್ರಕರಣಗಳು ದಾಖಲಾಗಿವೆ. 348 ಜನ ಮೃತಪಟ್ಟಿದ್ದಾರೆ.

