Dailyhunt Logo
  • Light mode
    Follow system
    Dark mode
    • Play Story
    • App Story
ಆರೋಗ್ಯ ಕ್ಷೇತ್ರಕ್ಕೆ ಶ್ರೀಮಠ ಕೊಡುಗೆ ಹಿರಿದು (srigeri)

ಆರೋಗ್ಯ ಕ್ಷೇತ್ರಕ್ಕೆ ಶ್ರೀಮಠ ಕೊಡುಗೆ ಹಿರಿದು (srigeri)

ಶೃಂಗೇರಿ: ರಕ್ತದಾನವು ಅತ್ಯಂತ ಶ್ರೇಷ್ಠ ಹಾಗೂ ಜೀವನ್ಮರಣ ಪರಿಸ್ಥಿತಿಯಲ್ಲಿ ಇರುವ ವ್ಯಕ್ತಿಗೆ ಮರುಜೀವ ನೀಡುವ ಮಹಾದಾನ ಎಂದು ಶ್ರೀಮಠದ ಹಿರಿಯ ಶ್ರೀಗಳ ಆಪ್ತ ಸಹಾಯಕ ಶಂ.ನಾ.ಕೃಷ್ಣಮೂರ್ತಿ ತಿಳಿಸಿದರು. ಶ್ರೀಶಾರದಾ ಮಠದ ಶಾರದಾ ಕೃಪಾದಲ್ಲಿ ರಕ್ತದಾನಿಗಳ ವಾಟ್ಸ್‌ಆಯಪ್ ಗ್ರೂಪ್, ಕಾರ್ಮಿಕ ಮಿತ್ರ ಬಳಗ ಇತರ ಸಂಸ್ಥೆ ಸಹಯೋಗದಲ್ಲಿ ಬುಧವಾರ ಏರ್ಪಡಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಸಂಘ-ಸಂಸ್ಥೆಗಳು ಇಂಥ ಮಹತ್ವದ ಕಾರ್ಯಗಳನ್ನು ಮಾಡಿದಾಗ ಸಂಸ್ಥೆಗಳು ಜನಮಾನಸದಲ್ಲಿ ಶಾಶ್ವತ ಸ್ಥಾನ ಗಳಿಸುತ್ತವೆ ಎಂದರು.ಜಗದ್ಗುರು ಶ್ರೀ ವಿಧುಶೇಖರಭಾರತೀ ಅವರ 34ನೇ ವರ್ಧಂತಿ ಮಹೋತ್ಸವ ಸಲುವಾಗಿ ರಕ್ತದಾನಿಗಳ ವಾಟ್ಸ್‌ಆಯಪ್ ಬಳಗ ಪ್ರತಿವರ್ಷ ರಕ್ತದಾನ ಮಾಡುವ ಮೂಲಕ ಸಮಾಜದಲ್ಲಿ ಉತ್ತಮ ಕಾರ್ಯನಿರ್ವಹಿಸುತ್ತದೆ. ನಾವು ಮಾಡುವ ಸತ್ಕಾರ್ಯಗಳಿಗೆ ಜಗದ್ಗುರುಗಳ ಅನುಗ್ರಹ ಸದಾ ಇರುತ್ತದೆ. ಶ್ರೀಮಠವು ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ, ಆರೋಗ್ಯ ಕ್ಷೇತ್ರಕ್ಕೆ ಉತ್ತಮ ಕೊಡುಗೆ ನೀಡಿದೆ ಎಂದು ಹೇಳಿದರು. ಶ್ರೀ ಅಭಿನವ ವಿದ್ಯಾತೀರ್ಥ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಮಕ್ಕಳತಜ್ಞ ಲಕ್ಷ್ಮೀನಾರಾಯಣ್ ಮಾತನಾಡಿ, ನಿಯಮಿತವಾಗಿ ರಕ್ತದಾನ ಮಾಡಿದರೆ ಹೊಸ ರಕ್ತ ಕಣಗಳು ಉತ್ಪತ್ತಿಯಾಗಿ ಜೀವಕ್ಕೆ ನವಚೈತನ್ಯ ಉಂಟಾಗುತ್ತದೆ. ಒಂದು ಯೂನಿಟ್ ರಕ್ತವು ನಾಲ್ಕು ಜನರ ಜೀವ ಉಳಿಸಲು ಸಹಕಾರಿ. ಆರೋಗ್ಯವಂತ ವ್ಯಕ್ತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು ಎಂದರು. ರಕ್ತದಾನಿಗಳನ್ನು ಎಎಸ್‌ಐ ಆರ್.ರಮೇಶ್ ಸನ್ಮಾನಿಸಿದರು. ರಕ್ತದಾನಿ ಬಳಗದ ಮುಖ್ಯಸ್ಥ ಪ್ರಶಾಂತ ಪೂಜಾರಿ, ಕಾರ್ಮಿಕ ಮಿತ್ರ ಬಳಗದ ಅಧ್ಯಕ್ಷ ಶ್ರೀಕಾಂತ್, ಮಾಜಿ ಅಧ್ಯಕ್ಷ ರಮೇಶ್ ಶೂನ್ಯ, ರೋಟರಿ ಮಾಜಿ ಅಧ್ಯಕ್ಷ ನಾಗೇಶ್ ಕಾಮತ್ ಇದ್ದರು.

Dailyhunt
Disclaimer: This content has not been generated, created or edited by Dailyhunt. Publisher: Vijayvani