ಕೊಲಂಬೊ: ಶನಿವಾರದಿಂದ ನಡೆಯಲಿರುವ ಭಾರತ ವಿರುದ್ಧದ ಟೆಸ್ಟ್ ಸರಣಿಗೆ (Test Series) ಮುನ್ನ ಆತಿಥೇಯ ಶ್ರೀಲಂಕಾ ತಂಡಕ್ಕೆ ಗಾಯದ ಹೊಡೆತ ಎದುರಾಗಿದೆ. ಪ್ರಮುಖ ಬ್ಯಾಟರ್ಗಳಾದ ಕುಸಲ್ ಮೆಂಡಿಸ್ ಮತ್ತು ಪಥುಮ್ ನಿಸ್ಸಂಕ ಗಾಯದಿಂದಾಗಿ ಭಾರತ ವಿರುದ್ಧದ ಟೆಸ್ಟ್ ಸರಣಿಗೆ ಅಲಭ್ಯರಾಗಿದ್ದಾರೆ.
ಕುಸಲ್ ಮೆಂಡಿಸ್ ಮತ್ತು ಪಥುಮ್ ನಿಸ್ಸಂಕ ಇಬ್ಬರೂ ಟೆಸ್ಟ್ ಕ್ರಿಕೆಟ್ನ ಕಾರ್ಯದೊತ್ತಡ ಎದುರಿಸಲು ಇನ್ನೂ ಫಿಟ್ ಆಗಿಲ್ಲ ಎನ್ನಲಾಗಿದೆ. ಅವರಿಬ್ಬರ ಗೈರಿನಲ್ಲಿ ಲಂಕಾ ಆಯ್ಕೆಗಾರರು, ಅನುಭವಿ ವಿಕೆಟ್ ಕೀಪರ್-ಬ್ಯಾಟರ್ ನಿರೋಶನ್ ಡಿಕ್ವೆಲ್ಲಾಗೆ ಅವಕಾಶ ಕಲ್ಪಿಸಲು ಬಯಸಿದ್ದಾರೆ. ತಾನಾಡಿರುವ 54 ಟೆಸ್ಟ್ಗಳ ಪೈಕಿ 2023ರಲ್ಲಿ ಕೊನೇ ಪಂದ್ಯ ಆಡಿರುವ ಡಿಕ್ವೆಲ್ಲಾ 3 ವರ್ಷಗಳ ಬಳಿಕ ಲಂಕಾ ತಂಡಕ್ಕೆ ಮರಳುವ ನಿರೀೆಯಲ್ಲಿದ್ದಾರೆ. ಮೊದಲ ಆಯ್ಕೆಯ ವಿಕೆಟ್ ಕೀಪರ್ ಕೂಡ ಆಗಿದ್ದ ಕುಸಲ್ ಮೆಂಡಿಸ್ ಗೈರಿನಲ್ಲಿ ಆಯ್ಕೆಗಾರರು, 22 ವರ್ಷದ ಅಂಜಲ ಬಂಡಾರಗಿಂತ ಡಿಕ್ವೆಲ್ಲಾಗೆ ಆದ್ಯತೆ ನೀಡಲಿದ್ದಾರೆ ಎನ್ನಲಾಗಿದೆ.
ಅಸಿತ ಫೆರ್ನಾಂಡೊ ವೇಗದ ಬೌಲಿಂಗ್ ಮತ್ತು ಪ್ರಭಾತ್ ಜಯಸೂರ್ಯ ಸ್ಪಿನ್ ಬೌಲಿಂಗ್ ವಿಭಾಗವನ್ನು ಮುನ್ನಡೆಸಲಿದ್ದಾರೆ. ನಾಯಕ ಧನಂಜಯ ಡಿಸಿಲ್ವ, ಕಮಿಂಡು ಮೆಂಡಿಸ್, ದಿನೇಶ್ ಚಾಂಡಿಮಲ್, ಲಹಿರು ಉದರ ಲಂಕಾ ಬ್ಯಾಟಿಂಗ್ ವಿಭಾಗದ ಪ್ರಮುಖರು. ನಿಸ್ಸಂಕ ಗೈರಿನಲ್ಲಿ ನಿಶಾನ್ ಮಧುಷ್ಕ ಅಗ್ರ ಕ್ರಮಾಂಕದಲ್ಲಿ ಸ್ಥಾನ ಉಳಿಸಿಕೊಳ್ಳುವ ನಿರೀಕ್ಷೆ ಇದೆ. ಮಧುಷ್ಕ ಭಾರತ ತಂಡದ ಅಭ್ಯಾಸ ಪಂದ್ಯದಲ್ಲಿ ಲಂಕಾ ಇಲೆವೆನ್ ಪರ ಅವಳಿ ಅರ್ಧಶತಕ ಸಿಡಿಸಿ ಮಿಂಚಿದ್ದರು.
ಗಾಲೆಗೆ ತೆರಳಿದ ಭಾರತ ತಂಡಮೊದಲ ಟೆಸ್ಟ್ ಪಂದ್ಯ ನಡೆಯಲಿರುವ ಗಾಲೆಗೆ ಭಾರತ ತಂಡದ ಆಟಗಾರರು ಮಂಗಳವಾರ ತೆರಳಿದರು. ಕೊಲಂಬೊದಲ್ಲಿ ಅಭ್ಯಾಸ ಪಂದ್ಯ ಆಡಿದ ಬಳಿಕ ನೆಟ್ಸ್ನಲ್ಲೂ ಅಭ್ಯಾಸ ನಡೆಸಿದ್ದ ಆಟಗಾರರು, ಬುಧವಾರ ಗಾಲೆಯಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ. ಗುರುವಾರದಿಂದ ಟೆಸ್ಟ್ ಸರಣಿಗೆ ಮತ್ತೆ ಅಭ್ಯಾಸ ನಡೆಸಲಿದ್ದಾರೆ ಎನ್ನಲಾಗಿದೆ. ಈ ನಡುವೆ ರಾಷ್ಟ್ರೀಯ ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್ ಅಗರ್ಕರ್ ಮಂಗಳವಾರ ಗಾಲೆಯಲ್ಲಿ ಭಾರತ ತಂಡವನ್ನು ಕೂಡಿಕೊಂಡಿದ್ದಾರೆ.

