ಚಿಕ್ಕಮಗಳೂರು: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಆರ್ಥಿಕತೆ ಪರಿಶೀಲಿಸಿ ಸುಧಾರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಿ.ಎಸ್ ಸುರೇಶ್ ಹೇಳಿದರು.
ಡಿಸಿಸಿ ಬ್ಯಾಂಕ್ ಕಚೇರಿ ಸಭಾಂಗಣದಲ್ಲಿ ಭಾನುವಾರ ಬ್ಯಾಂಕ್ ನೌಕರರ ಸಂಘದಿಂದ ಅಧ್ಯಕ್ಷರು ಹಾಗೂ ನಿರ್ದೇಶಕರಿಗೆ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ರಾಜ್ಯದಲ್ಲಿ ಎಲ್ಲ ಬ್ಯಾಂಕ್ಗಳಿಗಿಂತ ಜಿಲ್ಲಾ ಸಹಕಾರ ಬ್ಯಾಂಕ್ ಹಲವು ಸುಧಾರಣೆಗಳ ಮೂಲಕ ಮಾದರಿಯಾಗಬೇಕು. ಭ್ರಷ್ಟಾಚಾರ ಹಾಗೂ ನಿಯಮ ಬಾಹಿರ ಕಾರ್ಯಕ್ಕೆ ಆಸ್ಪದ ನೀಡದೆ ಬ್ಯಾಂಕನ್ನು ಆರ್ಥಿಕತೆಯತ್ತ ಕೊಂಡೊಯ್ಯಲಾಗುವುದು. ಇದಕ್ಕಾಗಿ ಎಲ್ಲ ನಿರ್ದೇಶಕರು ಶ್ರಮ ವಹಿಸಬೇಕು ಎಂದರು.
ಬ್ಯಾಂಕಿನಲ್ಲಿ ಷೇರು ಬಂಡವಾಳ ಹೆಚ್ಚುವಂತೆ ನೋಡಿಕೊಳ್ಳಬೇಕು.
ಇತ್ತೀಚಿನ ದಿನಗಳಲ್ಲಿ ಖಾಸಗಿ ಬ್ಯಾಂಕುಗಳ ಕಡೆಗೆ ಗ್ರಾಹಕರು ಹೆಚ್ಚು ಒಲವು ತೋರುತ್ತಿದ್ದು ಅವರನ್ನು ನಮ್ಮ ಬ್ಯಾಂಕಿನ ಕಡೆಗೆ ಗಮನಹರಿಸುವಂತೆ ಮನವೊಲಿಸಬೇಕು. ಡಿಸಿಸಿ ಬ್ಯಾಂಕ್ ಸೇರಿ ಯಾವುದೇ ಸಹಕಾರ ಬ್ಯಾಂಕುಗಳಲ್ಲಿ ಭ್ರಷ್ಟಾಚಾರ, ನಿಯಮಬಾಹಿರ ಕೆಲಸಗಳಿಗೆ ಅವಕಾಶ ನೀಡದೆ ಕಾರ್ಯನಿರ್ವಹಿಸಿ ರೈತ ಹಾಗೂ ಜನಸ್ನೇಹಿಯಾಗಿ ಸೇವೆ ಸಲ್ಲಿಸುವಂತೆ ತಿಳಿಸಿದರು.
ಉಪಾಧ್ಯಕ್ಷ ಎಲ್.ಟಿ.ರಮೇಶ್, ನಿರ್ದೇಶಕರಾದ ಹಳಸೆ ಶಿವಣ್ಣ, ಎಂ.ಎಸ್.ನಿರಂಜನ್, ಸತೀಶ್, ಪರಮೇಶ್, ಕೆ,ಆರ್.ಆನಂದಪ್ಪ, ಶಂಕರಪ್ಪ, ಬ್ಯಾಂಕ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಯೋಗೇಶ್, ಪದಾಧಿಕಾರಿಗಳಾದ ಬಾಲಕೃಷ್ಣ, ಪ್ರಸನ್ನ, ವಿಜಯ್ ಮತ್ತಿತರರಿದ್ದರು.

