ಹಳೆ ಪಿಬಿ ರಸ್ತೆ ದುರಸ್ತಿಗೆ ಆಗ್ರಹ
ವಿಜಯವಾಣಿ ಸುದ್ದಿಜಾಲ ಬೆಳಗಾವಿ:
ನಗರದ ಜೂನೇ(ಹಳೆ) ಬೆಳಗಾವಿ ನಾಕಾದಿಂದ ಅಲಾರವಾಡ ಅಂಡರ್ಬ್ರಿಡ್ಜ್ ವೃತ್ತದವರೆಗೆ ಹಾದು ಹೋಗುವ ಹಳೆ ಪಿಬಿ ರಸ್ತೆಯಲ್ಲಿ ನಿರ್ಮಾಣವಾಗಿರುವ ತಗ್ಗು -ಗುಂಡಿಗಳನ್ನು ಕೂಡಲೇ ಮುಚ್ಚುವಂತೆ ಹಲಗಾ,ಅಲಾರವಾಡ ಸೇರಿ ವಿವಿಧ ಗ್ರಾಮಸ್ಥರು ಮಂಗಳವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಹಲಗಾ, ಅಲಾರವಾಡ, ಬಸ್ತವಾಡ, ಕೊಂಡಸಕೊಪ್ಪ, ಮಾಸ್ತಮರಡಿ, ತಾರಿಹಾಳ, ಶಗಣಮಟ್ಟಿ, ಶಿಂಧೋಳಿ ಹಾಗೂ ಬಸರಿಕಟ್ಟಿ ಗ್ರಾಮಗಳ ಕಾರ್ಮಿಕರು, ರೈತರು, ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಪ್ರತಿನಿತ್ಯ ಜೂನೇ ಬೆಳಗಾವಿ, ವಡಗಾಂವ ಹಾಗೂ ಬೆಳಗಾವಿ ನಗರಕ್ಕೆ ತೆರಳಲು ಈ ರಸ್ತೆಯನ್ನೇ ಅವಲಂಬಿಸಿದ್ದಾರೆ.ಆದರೆ ಇತ್ತೀಚೆಗೆ ಸುರಿದ ಮಳೆಯಿಂದ ರಸ್ತೆ ಸಂಪೂರ್ಣ ಹಾಳಾಗಿದ್ದು, ರಸ್ತೆಯಲ್ಲಿ ಗುಂಡಿಗಳು ಕಾಣಸಿಗುತ್ತಿವೆ. ಗುಂಡಿಗಳನ್ನು ತಪ್ಪಿಸಿ ವಾಹನ ಸವಾರರು ನಿಯಂತ್ರಣ ಕಳೆದುಕೊಂಡು ಅಪಘಾತಕ್ಕಿಡಾಗುತ್ತಿದ್ದಾರೆ.
ಹಳೇ ಪಿಬಿ ರಸ್ತೆ ಯಡ್ಡಿಯೂರಪ್ಪ ಮಾರ್ಗದಲ್ಲಿರುವ ಗುಂಡಿಗಳನ್ನು ತಕ್ಷಣ ಮುಚ್ಚಿ, ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡಬೇಕು. ಪಾಲಿಕೆ, ಲೋಕೋಪಯೋಗಿ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತುರ್ತು ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದರು.ಒಂದು ವೇಳೆ ಮನವಿಗೆ ಸ್ಪಂದಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದರು .
ಅಣ್ಣಾಸಾಹೇಬ ಘೋರ್ಪಡೆ, ಸಾಗರ ಕಮನಾಚೆ, ಕಿಶೋರ್ ಚೌಗಲೆ, ಮಹೇಂದ್ರ ಕಾಂಬಳೆ, ಮಹೇಶ ಕಡೋಲ್ಕರ್ ಇತರರು ಇದ್ದರು.

