ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆ ತೀವ್ರಗೊಂಡಿದ್ದು, ಮಂಗಳವಾರ ಅತೀ ಹೆಚ್ಚು 21,794 ಸೋಂಕು ಪ್ರಕರಣಗಳು ವರದಿಯಾಗಿದ್ದು, ದಿನ ಸೋಂಕು ಪ್ರಮಾಣ ದರ ಶೇ. 14.77ಕ್ಕೆ ಏರಿಕೆಯಾಗಿದೆ.
ಇದರೊಂದಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 1.59 ಲಕ್ಷ ಮೀರಿದೆ. ಇನ್ನು ಸೋಂಕು ಹೆಚ್ಚಳದೊಂದಿಗೆ ಮರಣ ಪ್ರಮಾಣವೂ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ ಬೆಂಗಳೂರಿನಲ್ಲಿ 92 ಮಂದಿ ಸೇರಿದಂತೆ ರಾಜ್ಯದಲ್ಲಿ 149 ಸಾವನ್ನಪ್ಪಿದ್ದಾರೆ.
ಇದರೊಂದಿಗೆ ದಿನದ ಮರಣ ಪ್ರಮಾಣ ದರ ಶೇ 0.68 ತಲುಪಿದೆ. ಸೋಂಕಿತರಲ್ಲಿ ಗಂಭೀರ ಸಮಸ್ಯೆಯಿಂದಾಗಿ ತುರ್ತು ನಿಗಾ ಘಟಕಕ್ಕೆ (ಐಸಿಯು) ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 751 ತಲುಪಿದೆ. ಈ ಪೈಕಿ ಬೆಂಗಳೂರು ಒಂದರಲ್ಲೇ 181 ಮಂದಿ ಐಸಿಯುನಲ್ಲಿ ದಾಖಲಾಗಿದ್ದಾರೆ. ಇದರಿಂದ ಬೆಂಗಳೂರು ಸೇರಿದಂತೆ ಕೆಲವೆಡೆ ಐಸಿಯು ಹಾಸಿಗೆ ಸಮಸ್ಯೆಯೊಂದಿಗೆ ಆಮ್ಲಜನಕದ ಕೊರತೆಯೂ ಹೆಚ್ಚಾಗಿದೆ.
ಬೆಂಗಳೂರಿನಲ್ಲಿ 13,782, ತುಮಕೂರು 1,055,ಕಲಬುರಗಿ 818,ಮೈಸೂರು 699, ಬೆಂಗಳೂರು ಗ್ರಾಮಾಂತರ 513, ದಕ್ಷಿಣ ಕನ್ನಡ 482, ಮಂಡ್ಯ 413, ಹಾಸನ 410, ಬಳ್ಳಾರಿ 406 ಸೇರಿದಂತೆ ಒಂದೇ ದಿನ 21, 794 ಸೋಂಕು ಪ್ರಕರಣಗಳು ವರದಿಯಾಗಿವೆ.

