Dailyhunt Logo
  • Light mode
    Follow system
    Dark mode
    • Play Story
    • App Story
ಕೆಕೆಆರ್​ ಮಾಡು ಇಲ್ಲವೇ ಮಡಿ ಕದನ; ಈಡನ್​ನಲ್ಲಿ ಮುಂಬೈ ಇಂಡಿಯನ್ಸ್​ ಸವಾಲು

ಕೆಕೆಆರ್​ ಮಾಡು ಇಲ್ಲವೇ ಮಡಿ ಕದನ; ಈಡನ್​ನಲ್ಲಿ ಮುಂಬೈ ಇಂಡಿಯನ್ಸ್​ ಸವಾಲು

ಕೋಲ್ಕತ: ಕೊನೇ 6 ಪಂದ್ಯಗಳಲ್ಲಿ 5ರಲ್ಲಿ ಗೆದ್ದು ಪ್ಲೇಆಫ್​​ ರೇಸ್​ಗೆ ಮರುಜೀವ ತುಂಬಿಸಿಕೊಂಡಿರುವ ಕೋಲ್ಕತ ನೈಟ್​ರೈಡರ್ಸ್​ ಮತ್ತು ಈಗಾಗಲೆ ಪ್ಲೇಆಫ್​ ರೇಸ್​ನಿಂದ ಹೊರಬಿದ್ದಿರುವ ಮುಂಬೈ ಇಂಡಿಯನ್ಸ್​ ತಂಡಗಳು ಐಪಿಎಲ್​-19ರಲ್ಲಿ (IPL) ಬುಧವಾರ ಮುಖಾಮುಖಿ ಆಗಲಿವೆ.
ಈಡನ್​ ಗಾರ್ಡನ್ಸ್​ನಲ್ಲಿ ನಡೆಯಲಿರುವ ಈ ಪಂದ್ಯ ಆತಿಥೇಯ ಕೆಕೆಆರ್​ ಪಾಲಿಗೆ ಮಾಡು ಇಲ್ಲವೇ ಮಡಿ ಕಾದಾಟವೆನಿಸಿದೆ.

2024ರಲ್ಲಿ ಚಾಂಪಿಯನ್​ ಆಗಿದ್ದ ಕೆಕೆಆರ್​, ಕಳೆದ ವರ್ಷ 8ನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಈ ಬಾರಿ ಮೊದಲ 6 ಪಂದ್ಯಗಳಲ್ಲಿ ಗೆಲುವು ಕಾಣದಿದ್ದರೂ, ನಂತರ ತೋರಿದ ಚೇತೋಹಾರಿ ನಿರ್ವಹಣೆಯಿಂದ ಈವರೆಗೂ ಪ್ಲೇಆಫ್​ ರೇಸ್​ನಲ್ಲಿ ಉಳಿದುಕೊಂಡಿದೆ. ಆದರೆ ಇನ್ನೊಂದು ಪಂದ್ಯ ಸೋತರೆ ರೇಸ್​ನಿಂದ ಹೊರಬೀಳಲಿದೆ. ಜತೆಗೆ ಕೊನೇ 2 ಪಂದ್ಯ ಗೆದ್ದರೂ, ಇತರ ಪಂದ್ಯಗಳ ಫಲಿತಾಂಶವನ್ನೂ ಅವಲಂಬಿಸಬೇಕಾಗಿದೆ. ಆರ್​ಆರ್​ ಕೊನೇ ಪಂದ್ಯದಲ್ಲೂ ಗೆದ್ದರೆ ಅಥವಾ ಪಂಜಾಬ್​ ಕೊನೇ ಪಂದ್ಯ ಗೆದ್ದು ರನ್​ರೇಟ್​ ಮೇಲುಗೈ ಉಳಿಸಿಕೊಂಡರೆ, ಕೆಕೆಆರ್​ ತನ್ನ ಎರಡೂ ಪಂದ್ಯ ಗೆದ್ದರೂ ಪ್ರಯೋಜನವಾಗುವುದಿಲ್ಲ.
ಕೋಚ್​ ಅಭಿಷೇಕ್​ ನಾಯರ್​ ಮತ್ತು ನಾಯಕ ಅಜಿಂಕ್ಯ ರಹಾನೆ ಕೊನೆಗೂ ಕೆಕೆಆರ್​ಗೆ ಗೆಲುವಿನ ತಂಡ ಸಂಯೋಜನೆ ರೂಪಿಸಿದ್ದು, ಫಿನ್​ ಅಲೆನ್​ ಫಾರ್ಮ್​ಗೆ ಮರಳಿರುವುದು ಹೆಚ್ಚಿನ ಬಲ ತುಂಬಿದೆ. ಜತೆಗೆ ಅಂಗಕ್ರಿಷ್​ ರುವಂಶಿ, ಕ್ಯಾಮರಾನ್​ ಗ್ರೀನ್​ ಮತ್ತು ರಿಂಕು ಸಿಂಗ್​ ಮಧ್ಯಮ ಕ್ರಮಾಂಕಕ್ಕೆ ಆಧಾರವಾಗಿದ್ದಾರೆ. ಬೌಲಿಂಗ್​ನಲ್ಲಿ ಸುನೀಲ್​ ನಾರಾಯಣ್​&ವರುಣ್​ ಚಕ್ರವರ್ತಿ ಅವರ ಸ್ಪಿನ್​ ಜೋಡಿ ಮೋಡಿ ಮಾಡುತ್ತಿದ್ದರೆ, ವೇಗದ ಬೌಲಿಂಗ್​ನಲ್ಲಿ ದೇಶೀಯ ವೇಗಿಗಳು ನೆರವಾಗಿದ್ದಾರೆ.

ಹಾರ್ದಿಕ್​ ಮರಳಿ ಕಣಕ್ಕೆ?ಬೆನ್ನು ನೋವಿನಿಂದಾಗಿ ಕಳೆದ 3 ಪಂದ್ಯಗಳನ್ನು ತಪ್ಪಿಸಿಕೊಂಡಿದ್ದ ನಾಯಕ ಹಾರ್ದಿಕ್​ ಪಾಂಡ್ಯ ಕೆಕೆಆರ್​ ಎದುರು ಮರಳಿ ಕಣಕ್ಕಿಳಿಯುವ ನಿರೀಕ್ಷೆ ಇದೆ. ಅವರು ಆಡಿದ ಮೊದಲ 8 ಪಂದ್ಯಗಳಲ್ಲಿ ಕೇವಲ 146 ರನ್​ ಮತ್ತು 4 ವಿಕೆಟ್​ ಗಳಿಸಿ ನಿರಾಸೆ ಮೂಡಿಸಿದ್ದರು. ಜತೆಗೆ ಸೂರ್ಯಕುಮಾರ್​ ಯಾದವ್​ ರನ್​ಬರ ಮತ್ತು ಜಸ್​ಪ್ರೀತ್​ ಬುಮ್ರಾರ ವಿಕೆಟ್​ ಕೊರತೆಯೂ ಮುಂಬೈಗೆ ಹಿನ್ನಡೆ ತಂದಿದೆ. ರೋಹಿತ್​ ಶರ್ಮ, ತಿಲಕ್​ ವರ್ಮ ಕೂಡ ಸ್ಥಿರ ನಿರ್ವಹಣೆ ತೋರಿಲ್ಲ.
ಮುಖಾಮುಖಿ: 36ಮುಂಬೈ: 25ಕೆಕೆಆರ್​: 11ಆರಂಭ: ಬುಧವಾರ ರಾತ್ರಿ 7.30ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​, ಜಿಯೋ ಹಾಟ್​ಸ್ಟಾರ್​
ಒಂದು ಸ್ಥಾನಕ್ಕೆ 5 ತಂಡಗಳ ಸ್ಪರ್ಧೆಐಪಿಎಲ್-19ರಲ್ಲಿ ಇನ್ನು 5 ಲೀಗ್​ ಪಂದ್ಯಗಳಷ್ಟೇ ಬಾಕಿ ಇರುವಾಗ ಪ್ಲೇಆಫ್​ ಹಂತಕ್ಕೇರುವ 3 ತಂಡಗಳು ಖಚಿತವಾಗಿವೆ. ಇನ್ನು ಉಳಿದ 1 ಸ್ಥಾನಕ್ಕೆ ಸದ್ಯ 5 ತಂಡಗಳು ಪೈಪೋಟಿಯಲ್ಲಿವೆ. ಈ ಪೈಕಿ ರಾಜಸ್ಥಾನ ತಂಡ ಕೊನೇ ಪಂದ್ಯದಲ್ಲೂ ಗೆದ್ದರೆ ಬೇರೆ ಯಾವ ತಂಡಕ್ಕೂ ಪ್ಲೇಆಫ್​ಗೇರುವ ಅವಕಾಶ ಇರುವುದಿಲ್ಲ. ಆದರೆ ರಾಜಸ್ಥಾನ ಕೊನೇ ಪಂದ್ಯ ಸೋತರೆ, ಪಂಜಾಬ್​ ಮತ್ತು ಕೆಕೆಆರ್​ಗೆ ಪ್ಲೇಆಫ್​ ಅವಕಾಶ ಹೆಚ್ಚಲಿದೆ.
ಸಿಎಸ್​ಕೆ, ಡೆಲ್ಲಿ ತಂಡಗಳು ಪ್ಲೇಆಫ್​ಗೇರಲು ತಮ್ಮ ಕೊನೇ ಪಂದ್ಯದಲ್ಲಿ ಗೆಲ್ಲುವ ಜತೆಗೆ ರೇಸ್​ನಲ್ಲಿರುವ ಇತರ ತಂಡಗಳು ಸೋಲಲಿ ಎಂದು ಪ್ರಾರ್ಥಿಸಬೇಕಾಗಿದೆ.
ಕೆಕೆಆರ್​ ಪ್ಲೇಆಫ್​ ಹಾದಿ*ಕೊನೇ 2 ಲೀಗ್​ ಪಂದ್ಯದಲ್ಲೂ ಗೆದ್ದು 15 ಅಂಕ ಗಳಿಸಬೇಕು.*ರಾಜಸ್ಥಾನ ತಂಡ ಮುಂಬೈ ವಿರುದ್ಧದ ಕೊನೇ ಪಂದ್ಯದಲ್ಲಿ ಸೋಲಬೇಕು.*ಪಂಜಾಬ್​ ಕೊನೇ ಪಂದ್ಯ ಸೋಲಬೇಕು; ಗೆದ್ದರೂ ರನ್​ರೇಟ್​ನಲ್ಲಿ ಕೆಕೆಆರ್​ಗಿಂತ ಹಿಂದೆ ಬೀಳಬೇಕು; ಅದಕ್ಕೆ ಕೆಕೆಆರ್​ ತನ್ನ ಕೊನೇ 2 ಪಂದ್ಯಗಳನ್ನು ಒಟ್ಟಾರೆ ಕನಿಷ್ಠ 72 ರನ್​ಗಳಿಂದ ಗೆಲ್ಲಬೇಕಾಗುತ್ತದೆ.
ಡಿಕಾಕ್​, ರಾಜ್​ ಬಾವಾ ಹೊರಕ್ಕೆಮುಂಬೈ ಇಂಡಿಯನ್ಸ್​ ತಂಡದ ಕೊನೇ 2 ಲೀಗ್​ ಪಂದ್ಯಗಳಿಗೆ ವಿಕೆಟ್​ ಕೀಪರ್​-ಆರಂಭಿಕ ಕ್ವಿಂಟನ್​ ಡಿಕಾಕ್​ ಮತ್ತು ವೇಗದ ಬೌಲಿಂಗ್​ ಆಲ್ರೌಂಡರ್​ ರಾಜ್​ ಅಂಗದ್​ ಬಾವಾ ಅಲಭ್ಯರಾಗಿದ್ದಾರೆ. ಇವರಿಬ್ಬರು ಗಾಯದಿಂದಾಗಿ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಡಿಕಾಕ್​ ಸನ್​ರೈಸರ್ಸ್​ ವಿರುದ್ಧದ ಪಂದ್ಯದ ವೇಳೆ ಎಡಗೈ ಮಣಿಕಟ್ಟಿನ ಗಾಯಕ್ಕೊಳಗಾಗಿದ್ದರೆ, ರಾಜ್​ ಬಾವಾ ಪಂಜಾಬ್​ ವಿರುದ್ಧದ ಪಂದ್ಯದ ವೇಳೆ ಬಲಗೈ ಹೆಬ್ಬೆರಳಿನ ಗಾಯಕ್ಕೊಳಗಾಗಿದ್ದಾರೆ. ಇಬ್ಬರೂ ಹಾಲಿ ಆವೃತ್ತಿಯಲ್ಲಿ ಮುಂಬೈ ಪರ ತಲಾ 3 ಪಂದ್ಯ ಆಡಿದ್ದರು.

ಇನ್ನಷ್ಟು ಓದಿ
Dailyhunt
Disclaimer: This content has not been generated, created or edited by Dailyhunt. Publisher: Vijayvani