ನನಗೆ ಮದುವೆ ಆಗಿ ನಾಲ್ಕು ವರ್ಷ ಆಗಿದೆ. ಈಗ ಎರಡು ವರ್ಷಗಳ ಹಿಂದೆ ಯಾವುದೋ ಸಣ್ಣ ದೂರು ನನ್ನ ಮೇಲೆ ಹೇಳಿ ನನ್ನನ್ನು ನನ್ನ ತವರಿಗೆ ನಮ್ಮ ಯಜಮಾನರು ಬಿಟ್ಟು ಹೋದವರು ಮತ್ತೆ ನನ್ನನ್ನು ಕರೆದುಕೊಳ್ಳುವ ಯೋಚನೆಯೇ ಮಾಡುತ್ತಿಲ್ಲ. ಅವರ ತಪ್ಪುಗಳು ನೂರಾರು ಇವೆ.
ಆದರೆ ನನಗೆ ನನ್ನ ಮದುವೆಯನ್ನು ಉಳಿಸಿಕೊಳ್ಳಬೇಕು ಎಂದಿದೆ. ಹೀಗಾಗಿ ಕೇಸು ಹಾಕಿ, ಅವರ ಮೇಲೆ ದೂರು ಹೇಳಿ ಆಮೇಲೆ ನನ್ನನ್ನು ಕರೆದುಕೊಂಡು ಹೋಗಿ ಎಂದು ಕೇಳಿದರೆ ಅವರು ಕೆರಳಿ ಬಿಡುತ್ತಾರೇನೋ ಎಂದು ಹೆದರಿಕೆ.
ಸಂಬಂಧಿಕರನ್ನು ಕಳಿಸಿದರೆ , ಸಬೂಬು ಹೇಳಿ ಅವರನ್ನು ಕಳಿಸಿಬಿಡುತ್ತಿದ್ದಾರೆ. ನಾನು ಏನು ಮಾಡಬೇಕು ಎಂದು ತಿಳಿಸಿ ಮೇಡಂ.
ಉತ್ತರ: ನಿಮ್ಮ ವಿವಾಹ ಜೀವನವನ್ನು ಉಳಿಸಿಕೊಳ್ಳಬೇಕೆನ್ನುವ ನಿಮ್ಮ ಯೋಚನೆ ಒಳ್ಳೆಯದಿದೆ. ಕೇಸು ಹಾಕುವಾಗ ಏನಾದರೂ ಆಪಾದನೆ ಮಾಡಿದರೆ ಕೆಲವರು ತಮ್ಮ ತಪ್ಪನ್ನು ತಿದ್ದಿಕೊಳ್ಳುತ್ತಾರೆ.
ಕೆಲವರು ಕೆರಳುವ ಸಾಧ್ಯತೆಯೂ ಇದೆ. ಹೀಗಾಗಿ ಮೊದಲಿಗೆ ನೀವು ನಿಮ್ಮ ಊರಿನ ನ್ಯಾಯಾಲಯದಲ್ಲಿ ಇರುವ ಮಧ್ಯಸ್ಥಿಕೆ ಕೇಂದ್ರವನ್ನು ಸಂಪರ್ಕಿಸಿ. ಅಲ್ಲಿ ನೀವು ಮಧ್ಯಸ್ಥಿಕೆ ಕೇಂದ್ರದ ಕಾರ್ಯದರ್ಶಿಗಳಿಗೆ , ನಿಮ್ಮ ಮತ್ತು ನಿಮ್ಮ ಪತಿಯ ನಡುವೆ ವ್ಯಾಜ್ಯ ಪೂರ್ವ ಮಧ್ಯಸ್ಥಿಕೆ ಮಾಡಿ ಎಂದು ಕೇಳಿಕೊಳ್ಳಿ. ಅವರು ಇಬ್ಬರನ್ನೂ ಕರೆಯಿಸಿ ಮಧ್ಯಸ್ಥಿಕೆಗಾರರ ಮೂಲಕ ಮಾತಾಡಿಸುತ್ತಾರೆ. ಆ ನಂತರವೂ ಸಮಸ್ಯೆ ಬಗೆಹರಿಯದೇ ಹೋದರೆ ಮಾತ್ರ ಪ್ರಕರಣ ದಾಖಲಿಸಿ.
ಅರ್ಜಿಯಲ್ಲಿ ' ನಾನು. ವಿಳಾಸ .., ಮೊಬೈಲ್.ನಂಬರ್ ..,ಮೈಲ್ ಐಡಿ. ತಿಳಿಸಿ) ತಾರೀಖು ..ರಂದು ಶ್ರೀ..ರವರನ್ನು ಮದುವೆ ಆಗಿದ್ದೇನೆ. ನಮ್ಮ ದಾಂಪತ್ಯದಲ್ಲಿ ಸಾಮರಸ್ಯ ಉಂಟಾಗಲು ನಮ್ಮಿಬ್ಬರ ನಡುವೆ ಮಧ್ಯಸ್ಥಿಕೆ ನಡೆಸಿಕೊಡಬೇಕಾಗಿ ಪ್ರಾರ್ಥನೆ. ನನ್ನ ಪತಿಯ ವಿಳಾಸ .., ಮೊಬೈಲ್.ನಂಬರ್ ..,ಮೈಲ್ ಐಡಿ..ಇದೆ' ಎಂದು ಅರ್ಜಿ ಕೊಟ್ಟರೆ ಸಾಕು. ಕೇಂದ್ರದವರೇ ಇಬ್ಬರನ್ನೂ ಕರೆಯಿಸಿ ಮಧ್ಯಸ್ಥಿಕೆಗಾರರ ಸಹಾಯವನ್ನು ಒದಗಿಸುತ್ತಾರೆ. ಇದಕ್ಕೆ ಒಂದು ರೂಪಾಯಿಯ ಖರ್ಚೂ ಆಗುವುದಿಲ್ಲ.
ಕಾನೂನಿಗೆ ಸಂಬಂಧಿಸಿದ ಇತರ ಪ್ರಶ್ನೋತ್ತರಗಳಿಗಾಗಿ ಈ ಲಿಂಕ್ ಕ್ಲಿಕ್ಕಿಸಿ https://www.vijayavani.net/category/%e0%b2%a8%e0%b3%8d%e0%b2%af%e0%b2%be%e0%b2%af%e0%b2%a6%e0%b3%87%e0%b2%b5%e0%b2%a4%e0%b3%86/

