Dailyhunt
ಪಿಣರಾಯಿ ವಿಜಯನ್ ಈ ದೇಶದಲ್ಲೇ ಅತಿ ಭ್ರಷ್ಟ ಮುಖ್ಯಮಂತ್ರಿ; ಆರೋಪಿಸಿದ್ಯಾರು?

ಪಿಣರಾಯಿ ವಿಜಯನ್ ಈ ದೇಶದಲ್ಲೇ ಅತಿ ಭ್ರಷ್ಟ ಮುಖ್ಯಮಂತ್ರಿ; ಆರೋಪಿಸಿದ್ಯಾರು?

ತಿರುವನಂತಪುರಂ: ರಾಜಕೀಯ ಎಂದಮೇಲೆ ಆರೋಪ-ಪ್ರತ್ಯಾರೋಪಗಳು ಸಹಜ. ಟೀಕೆ-ಪ್ರತಿಟೀಕೆಗಳಿಂದಲೇ ರಾಜಕಾರಣಿಗಳು ಸದ್ದು ಮಾಡುವುದು ಕೂಡ ಅಷ್ಟೇ ಸಾಮಾನ್ಯ. ಈಗ ಒಬ್ಬ ರಾಜಕಾರಣಿಯನ್ನು ದೇಶದ ಅತಿಭ್ರಷ್ಟ ಮುಖ್ಯಮಂತ್ರಿ ಎಂದು ಒಂದು ಪಕ್ಷದ ಮುಖಂಡರೊಬ್ಬರು ಆರೋಪ ಮಾಡಿದ್ದಾರೆ.

ಅವರು ಅತಿಭ್ರಷ್ಟ ಮುಖ್ಯಮಂತ್ರಿ ಮಾತ್ರವಲ್ಲ, ದೇಶದ ವಿವಿಧ ತನಿಖಾ ಏಜೆನ್ಸಿಗಳು ಅವರ ಮನೆಯ ಬಾಗಿಲು ತಟ್ಟುತ್ತಿರುವುದರಿಂದ ಪುಕ್ಕಲರು ಕೂಡ ಆಗಿದ್ದಾರೆ. ಹೀಗೊಂದು ಆರೋಪಕ್ಕೆ ಈಡಾಗಿರುವುದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್​. ಈ ಆರೋಪವನ್ನು ಮಾಡಿರುವುದು ಕೇರಳದ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್. ಕಾಂಪ್ಟ್ರಾಲರ್ ಆಯಂಡ್​ ಆಡಿಟರ್ ಜನರಲ್ ಆಫ್​ ಇಂಡಿಯಾ (ಸಿಎಜಿ) ಬಗ್ಗೆ ವಿಜಯನ್ ಇತ್ತೀಚೆಗೆ ಮಾಡಿರುವ ಟೀಕೆ ಹಿನ್ನೆಲೆಯಲ್ಲಿ ಸುರೇಂದ್ರನ್​ ಈ ಆರೋಪ ಮಾಡಿದ್ದಾರೆ.

ಕಾಂಪ್ಟ್ರಾಲರ್ ಆಯಂಡ್​ ಆಡಿಟರ್ ಜನರಲ್ ಆಫ್​ ಇಂಡಿಯಾ (ಸಿಎಜಿ)ಯನ್ನು ಕೇಂದ್ರ ಸರ್ಕಾರ ರಾಜಕೀಯಕ್ಕೆ ಬಳಸುತ್ತಿದೆ ಎಂದು ಮುಖ್ಯಮಂತ್ರಿಯೊಬ್ಬರು ಟೀಕೆ ಮಾಡುತ್ತಿರುವುದು ಅಚ್ಚರಿ ಹಾಗೂ ವಿಚಿತ್ರ ಎನಿಸುತ್ತಿದೆ. ಇದುವರೆಗೂ ಯಾವುದೇ ವಿರೋಧ ಪಕ್ಷ ಕೂಡ ಇಂಥದ್ದೊಂದು ಆರೋಪ ಮಾಡಿರಲಿಲ್ಲ. ಡ್ರಾಫ್ಟ್​ನಲ್ಲಿ ಇರದ್ದನ್ನು ಸಿಎಜಿ ತನ್ನ ಅಂತಿಮ ವರದಿಯಲ್ಲಿ ಹೇಳಿದೆ ಎನ್ನುವುದನ್ನು ಯಾರೇ ಆಗಲಿ ಹಾಗೇ ಊಹೆ ಮೇಲೆ ಹೇಳಲು ಹೇಗೆ ಸಾಧ್ಯ? ಅಂದರೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ಆ ವರದಿ ಅಧಿವೇಶನದಲ್ಲಿ ಮಂಡನೆ ಆಗುವ ಮುನ್ನವೇ ಅದನ್ನು ನೋಡಿದ್ದಾರೆ ಎಂದರ್ಥ ಎಂದಿರುವ ಸುರೇಂದ್ರನ್​, ಈ ಮೂಲಕ ಪಿಣರಾಯಿ ವಿಜಯನ್ ಆಡಳಿತಕ್ಕೆ ಸಂಬಂಧಿಸಿದ ರಹಸ್ಯವನ್ನು ಕಾಪಾಡುವ ನಿಯಮ ಉಲ್ಲಂಘಿಸಿದ್ದಾರೆ ಎಂದು ಹೇಳಿದ್ದಾರೆ. (ಏಜೆನ್ಸೀಸ್​)

Dailyhunt
Disclaimer: This content has not been generated, created or edited by Dailyhunt. Publisher: Vijayvani