
ಬೆಂಗಳೂರು: ರಾಜ್ಯಕ್ಕೆ ಅಗತ್ಯವಿರುವಷ್ಟು ಲಸಿಕೆ ಇನ್ನೂ ಬಂದಿಲ್ಲವಾದ ಕಾರಣ 18ರಿಂದ 44 ವಯೋಮಿತಿಯವರಿಗೆ ಲಸಿಕೆ ಅಭಿಯಾನವನ್ನು ಮೇ 14ರಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈಗಾಗಲೇ ಲಸಿಕೆಗಾಗಿ ಸಮಯ ನಿಗದಿ ಪಡಿಸಿಕೊಂಡವರೂ ಸೇರಿ 18-44ರ ವಯೋಮಾನದವರಿಗೆ ಲಸಿಕೆ ಹಾಕುವುದನ್ನು ಮೇ 14 ರಿಂದ ಮುಂದಿನ ಆದೇಶದವರೆಗೆ ನಿಲ್ಲಿಸಲು ತೀರ್ಮಾನಿಸಲಾಗಿದೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಸಂಜೆ ನಡೆದ ಹಿರಿಯ ಸಚಿವರ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಲಸಿಕೆಯ ಲಭ್ಯತೆ, ಬೇಡಿಕೆ ಹಾಗೂ ಬಳಕೆ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸಲಾಯಿತು. ಕೇಂದ್ರ ಸರ್ಕಾರ ಹಂಚಿಕೆ ಮಾಡಿದ ಲಸಿಕೆಯನ್ನು 2ನೇ ಡೋಸ್ ಬಾಕಿಯಿರುವ ಫಲಾನುಭವಿಗಳಿಗೆ ಬಳಸಲಾಗುತ್ತದೆ.
ರಾಜ್ಯ ಸರ್ಕಾರ ಖರೀದಿಸಿದ ಲಸಿಕೆ ದಾಸ್ತಾನು ಕೂಡ 2ನೇ ಡೋಸ್ ಬಾಕಿ ಇರುವವರಿಗೆ ವಿನಿಯೋಗಿಸಲು ನಿರ್ಧರಿಸಲಾಗಿದೆ.
ವ್ಯಾಕ್ಸಿನ್ ಕುರಿತ ಗೊಂದಲ ನಿವಾರಣೆ, ಜಿಲ್ಲೆಗಳಲ್ಲಿ ಆಕ್ಸಿಜನ್ ಪೂರೈಕೆ ವ್ಯತ್ಯಯ ಆಗದಂತೆ ನೋಡಿಕೊಳ್ಳುವುದು, ಆಕ್ಸಿಜನ್ ಮತ್ತು ಐಸಿಯು ಬೆಡ್ಗಳತ್ತ ಗಮನ ಹರಿಸಬೇಕು ಎಂದು ಅಧಿಕಾರಿಗಳಿಗೆ ಸಭೆಯಲ್ಲಿ ಮುಖ್ಯಮಂತ್ರಿ ಸೂಚಿಸಿದ್ದಾರೆ. ಲಸಿಕೆ ಪೂರೈಸುವ ಕಂಪನಿಗಳ ಜತೆಗೆ ನಿರಂತರ ಸಂಪರ್ಕ ಇಟ್ಟುಕೊಳ್ಳಬೇಕು ಎಂದು ತಾಕೀತು ಮಾಡಿದ್ದಾರೆ.