Dailyhunt
ಶಾಲೆಯಲ್ಲಿ ಹುಟ್ಟುಹಬ್ಬ ಆಚರಿಸಿದ್ದೇ ತಪ್ಪಾಗೋಯ್ತು: ಅಪ್ಪ-ಮಗನನ್ನು ಆತ್ಮಹತ್ಯೆಗೆ ತಳ್ಳಿದ ಬರ್ತ್‌ಡೇ ಸಂಭ್ರಮ!

ಶಾಲೆಯಲ್ಲಿ ಹುಟ್ಟುಹಬ್ಬ ಆಚರಿಸಿದ್ದೇ ತಪ್ಪಾಗೋಯ್ತು: ಅಪ್ಪ-ಮಗನನ್ನು ಆತ್ಮಹತ್ಯೆಗೆ ತಳ್ಳಿದ ಬರ್ತ್‌ಡೇ ಸಂಭ್ರಮ!

ಖಮ್ಮಂ (ತೆಲಂಗಾಣ): ಶಾಲೆಯಲ್ಲಿ ಮಗ ಹುಟ್ಟುಹಬ್ಬ ಆಚರಿಸಿ ಸಂಭ್ರಮಿಸಿದ್ದ ಕಾರಣದಿಂದಾಗಿ ಆತನ ಜತೆ ಅಪ್ಪನೂ ಶವವಾಗಬೇಕಾಗಿ ಬಂದ ಹೃದಯವಿದ್ರಾವಕ ಘಟನೆ ತೆಲಂಗಾಣದ ಖಮ್ಮಂನಲ್ಲಿ ನಡೆದಿದೆ.

ಸಾಯಿ ಭಾನುಪ್ರಕಾಶ್​​ ಎಂಬ ವಿದ್ಯಾರ್ಥಿ ತನ್ನ ಜನ್ಮದಿನವನ್ನು ಸ್ನೇಹಿತರ ಜತೆಗೆ ಆಚರಿಸಿಬೇಕು ಎಂದುಕೊಂಡ.

ಆದರೆ ಆತ ಕಾರ್ಯಕ್ರಮವನ್ನು ತನ್ನ ಮನೆಯಲ್ಲಿ ಅಥವಾ ಇನ್ನಾವುದೇ ಹಾಲ್‌ಗಳಲ್ಲಿ ಇಟ್ಟುಕೊಂಡಿದ್ದರೆ ಇಂಥದ್ದೊಂದು ಅನಾಹುತ ನಡೆಯುತ್ತಲೇ ಇರಲಿಲ್ಲ. ಆದರೆ ವಿಧಿಯಾಟವೇ ಬೇರೆಯಾಗೋಯ್ತು. ಸ್ನೇಹಿತರ ಜತೆ ಶಾಲೆಯಲ್ಲಿಯೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವ ನಿರ್ಧಾರ ಮಾಡಿದ. ಆತನ ಸ್ನೇಹಿತರು ಕೂಡ ಅಲ್ಲಿಯೇ ಆಚರಿಸಿಕೊಳ್ಳುವಂತೆ ಹೇಳಿದರು.

ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾನುಪ್ರಕಾಶ್‌ ವಿರುದ್ಧ ಆತನ ಶಿಕ್ಷಕರು ಕೆಂಡಾಮಂಡಲವಾದರು. ಶಾಲೆಯಲ್ಲಿ ಹುಟ್ಟುಹಬ್ಬ ಆಚರಿಸಿದ್ದ ಕಾರಣ, ಆತನ ಜತೆ ಆತನ ತಂದೆಯನ್ನೂ ಮನಬಂದಂತೆ ಹೀಯಾಳಿಸಿದರು ಈ ಶಿಕ್ಷಕ. ಸಾಲದು ಎಂಬುದಕ್ಕೆ ಆತನನ್ನು ಶಾಲೆಯಿಂದ ವಾರದ ಮಟ್ಟಿಗೆ ಅಮಾನತು ಮಾಡಲಾಯಿತು. ತಂದೆ ಚಲ್ಲಾ ರಾಮ್‌ಬಾಬು ಅವರನ್ನೂ ಕರೆಯಿಸಿ ಅವಮಾನ ಮಾಡಲಾಯಿತು.

ಇದರಿಂದ ತೀವ್ರವಾಗಿ ಮನನೊಂದುಕೊಂಡ ಬಾಲಕ ಭಾನುಪ್ರಕಾಶ್‌, ಮನೆಗೆ ಬಂದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆತ ಬದುಕಲಿಲ್ಲ. ಆಸ್ಪತ್ರೆಯಲ್ಲಿ ಅಸುನೀಗಿದ. ಮಗನ ಸಾವಿನ ದುಃಖ ತಾಳಲಾರದೇ ಅಪ್ಪ ಚಲ್ಲಾ ರಾಮ್‌ಬಾಬು ಅವರು ನೇಣಿಗೆ ಶರಣಾದರು.

ಶಾಲೆಯಲ್ಲಿ ಮಾಡಿಕೊಂಡ ಒಂದು ಹುಟ್ಟುಹಬ್ಬ ಎರಡು ಜೀವವನ್ನು ಬಲಿಪಡೆಯಿತು. ಶಿಕ್ಷಕರ ತಪ್ಪಿನಿಂದ ಅಮಾಯಕ ಎರಡು ಜೀವಗಳು ಹೋದುದ್ದಕ್ಕೆ ಯಾರು ಹೊಣೆ ಎಂದು ಇದೀಗ ಶಾಲೆಯ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಪೊಲೀಸರು ಈ ಕುರಿತಂತೆ ದೂರು ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Vijayvani