ಬೆಂಗಳೂರು: ಒಂದು ಪಕ್ಷದ ಶಾಸಕರಿಗೆ ಮತ್ತೊಂದು ಪಕ್ಷದವರು ಸ್ಥಾನಮಾನಗಳ ಆಮಿಷವೊಡ್ಡುವುದು ಹೊಸದಲ್ಲ. ಪ್ರತಿ ಚುನಾವಣೆ ಮುಗಿದ ಬಳಿಕ, ಪ್ರತಿ ಸರ್ಕಾರ ರಚನೆ ಆಗುವಾಗ, ಆದಮೇಲೂ ಇಂಥ ಆಮಿಷ ಒಡ್ಡುವಂಥ ಪ್ರಕರಣಗಳು ನಡೆಯುತ್ತಲೇ ಇರುತ್ತವೆ.
ಈಗ ಬಿಹಾರದಲ್ಲೂ ಇಂಥದ್ದೇ ಒಂದು ವಿದ್ಯಮಾನ ಕೇಳಿಬಂದಿದೆ. ನಾಲ್ಕನೇ ಬಾರಿಗೆ ಮುಖ್ಯಮಂತ್ರಿ ಆಗಿ ನಿತೀಶ್ ಕುಮಾರ್ ಅವರು ಆಯ್ಕೆ ಆಗಿರುವುದೇನೋ ನಿಜ. ಆದರೆ ಆ ಸರ್ಕಾರವನ್ನು ಬೀಳಿಸಿ ವಾಮಮಾರ್ಗದಲ್ಲಿ ಸರ್ಕಾರ ರಚಿಸುವ ಪ್ರಯತ್ನಗಳು ನಡೆಯುತ್ತಿವೆ ಎನ್ನಲಾಗುತ್ತಿದೆ.
ಇಂಥದ್ದೊಂದು ಮಾಹಿತಿಯನ್ನು ಬಿಹಾರದ ಮಾಜಿ ಡಿಸಿಎಂ ಸುಶೀಲ್ ಕುಮಾರ್ ಮೋದಿ ಬಹಿರಂಗಪಡಿಸಿದ್ದಾರೆ. ಆರ್ಜೆಡಿ ಮುಖಂಡ ಲಾಲು ಪ್ರಸಾದ್ ಯಾದವ್ ರಾಂಚಿಯಿಂದ ಎನ್ಡಿಎ ಶಾಸಕರಿಗೆ ಕರೆ ಮಾಡಿ ಸಚಿವ ಸ್ಥಾನದ ಆಮಿಷವೊಡ್ಡಿ ಸೆಳೆಯಲು ಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಸ್ವತಃ ನಾನೇ ಲಾಲುಗೆ ಕರೆ ಮಾಡಿದ್ದು, ಅವರೇ ಕರೆ ಸ್ವೀಕರಿಸಿದ್ದಾರೆ. ಜೈಲ್ನಲ್ಲಿದ್ದುಕೊಂಡು ಇಂಥ ಕೆಟ್ಟ ಕೆಲಸ ಮಾಡಬೇಡಿ, ನೀವು ಯಶಸ್ವಿಯಾಗುವುದಿಲ್ಲ ಎಂದು ಹೇಳಿದ್ದಾಗಿ ಮೋದಿ ತಿಳಿಸಿದ್ದಾರೆ.

