ಹುಬ್ಬಳ್ಳಿ: ಬಿ.ಎಸ್.ಯಡಿಯೂರಪ್ಪ ಅವರ ರಾಜೀನಾಮೆಯ ಕುರಿತಾಗಿ ಹಾಗೂ ನಂತರ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಬಗ್ಗೆ ಇದ್ದ ಎಲ್ಲಾ ಗೊಂದಲಗಳೂ ಪರಿಹಾರವಾದ ಮೇಲೆ ಇದೀಗ ಕಾಂಗ್ರೆಸ್ ನಾಯಕರು ಬೈ ಎಲೆಕ್ಷನ್ಗಾಗಿ ರಣತಂತ್ರ ರೂಪಿಸಲು ಶುರು ಮಾಡಿದ್ದಾರೆ.
ಹಾವೇರಿ ಜಿಲ್ಲೆಯ ಹಾನಗಲ್ಲ ಮತ್ತು ವಿಜಯಪುರ ಜಿಲ್ಲೆಯ ಸಿಂದಗಿ ಬೈ ಎಲೆಕ್ಷನ್ ನಡೆಯಲಿದ್ದು, ಇದಕ್ಕಾಗಿ ಕಾಂಗ್ರೆಸ್ ನಾಯಕರು ರಣತಂತ್ರ ರೂಪಿಸಲು ತೊಡಗಿದ್ದಾರೆ. ಇದರ ಚರ್ಚೆಗೆ ಇಂದು ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ನಾಯಕರ ಹೈ ಓಲ್ಟೇಜ್ ಮೀಟಿಂಗ್ ಇದೆ.
ಬಿಜೆಪಿ ಶಾಸಕ ಸಿ.ಎಂ. ಉದಾಸಿ ನಿಧನದಿಂದ ಹಾನಗಲ್ ಕ್ಷೇತ್ರ ತೆರವಾಗಿದ್ದರೆ, ಜೆಡಿಎಸ್ ಶಾಸಕ ಎಂ.ಸಿ. ಮನಗೂಳಿ ನಿಧನದಿಂದ ಸಿಂದಗಿ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯಬೇಕಿದೆ. ಇದರಿಂದಾಗಿ ಹಾವೇರಿ, ವಿಜಯಪುರ ಜಿಲ್ಲೆಯ ಕೈ ಲೋಕಸಭಾ ಸದಸ್ಯರು, ಶಾಸಕರು, ಜಿಲ್ಲಾಧ್ಯಕ್ಷರು ಹಾಗೂ ಪರಿಷತ್ ಸದಸ್ಯರನ್ನೊಳಗೊಂಡು ಹಾಲಿ, ಮಾಜಿಗಳ ಸಭೆ ಇಂದು ಹುಬ್ಬಳ್ಳಿಯಲ್ಲಿ ನಡೆಯಲಿದೆ.
ಸಂಜೆ 6 ಗಂಟೆಗೆ ನಗರದ ಖಾಸಗಿ ಹೋಟೆಲ್ನಲ್ಲಿ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ. ಸಂಭ್ಯಾವ್ಯ ಅಭ್ಯರ್ಥಿಗಳ ಆಯ್ಕೆ ಮತ್ತು ಅವರ ಬಗ್ಗೆ ಆಯಾ ಕ್ಷೇತ್ರದ ನಾಯಕರ ಅಭಿಪ್ರಾಯ ಸಂಗ್ರಹದ ಕುರಿತು ಇಲ್ಲಿ ಚರ್ಚಿಸುವ ಸಾಧ್ಯತೆ ಇದೆ.

