Dailyhunt
ವಿಜೃಂಭಣೆಯ ಲಕ್ಷ್ಮೀಕಾಂತಸ್ವಾಮಿ ಬ್ರಹ್ಮರಥೋತ್ಸವ

ವಿಜೃಂಭಣೆಯ ಲಕ್ಷ್ಮೀಕಾಂತಸ್ವಾಮಿ ಬ್ರಹ್ಮರಥೋತ್ಸವ

ನಂಜನಗೂಡು : ತಾಲೂಕಿನ ಕಳಲೆ ಗ್ರಾಮದಲ್ಲಿ ಪುರಾಣ ಪ್ರಸಿದ್ಧ ಶ್ರೀ ಲಕ್ಷ್ಮೀಕಾಂತ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ಬೆಳಗ್ಗೆ ಶ್ರೀ ಲಕ್ಷ್ಮೀಕಾಂತಸ್ವಾಮಿ ರಥೋತ್ಸವ ವಿಜಂಭಣೆಯಿಂದ ಜರುಗಿತು.
ನಾನಾ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಸಂಖ್ಯೆಯ ಭಕ್ತರು ಶ್ರದ್ಧಾಭಕ್ತಿಯಿಂದ ಜಾತ್ರೆಯಲ್ಲಿ ಪಾಲ್ಗೊಂಡು ಭಕ್ತಿಯಿಂದ ರಥವನ್ನೆಳೆದು ಸಂಭ್ರಮಿಸಿದರು.
ಜಾತ್ರೆಯ ಅಂಗವಾಗಿ ಲಕ್ಷ್ಮೀಕಾಂತಸ್ವಾಮಿ ದೇವಾಲಯದಲ್ಲಿ ಬೆಳಗಿನ ಜಾವ 5 ಗಂಟೆಯಿಂದಲೇ ವಿಶೇಷ ಧಾರ್ಮಿಕ ಪೂಜಾ ಕಾರ್ಯಗಳು ಜರುಗಿದವು. ನಂತರ ಬೆಳಗ್ಗೆ 7.05 ರಿಂದ 7.26 ವರೆಗೆ ಸಲ್ಲುವ ಶುಭ ಮೇಷ ಲಗ್ನದಲ್ಲಿ ದೇವಾಲಯದಿಂದ ಅರವಿಂದ ನಾಯಕಿಯಮ್ಮ, ಆಂಡಾಳಮ್ಮ ಹಾಗೂ ಲಕ್ಷ್ಮೀಕಾಂತಸ್ವಾಮಿ ಅವರ ಉತ್ಸವ ಮೂರ್ತಿಗಳನ್ನು ಹೊತ್ತು ತಂದು ದೇವಾಲಯದ ಪ್ರಾಂಗಣದಲ್ಲಿರಿಸಿ ಪೂಜೆ ಸಲ್ಲಿಸಲಾಯಿತು.
ಅನಂತರ ದೇವಾಲಯದ ಸುತ್ತ ಉತ್ಸವ ಮೂರ್ತಿಗಳನ್ನು ಪ್ರದಕ್ಷಿಣೆ ಹಾಕಿಸಿ ಸರ್ವಾಲಂಕತಗೊಂಡಿದ್ದ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಮಂಗಳವಾದ್ಯ, ಮೇಳ ಹಾಗೂ ವೇದ ಘೋಷಗಳ ಜೈಕಾರದ ನಡುವೆ ರಥ ಚಲಿಸಿತು. ರಥ ಬೀದಿಯಲ್ಲಿ ಸಂಚರಿಸಿದ ರಥಕ್ಕೆ ಜನರು ಭಕ್ತಿಯಿಂದ ಪೂಜೆ ಸಲ್ಲಿಸಿ, ಹಣ್ಣು ದವನ ಎಸೆದು ಭಕ್ತಿ ಸಮರ್ಪಿಸಿದರು. ಸುಮಾರು 20 ನಿಮಿಷಕ್ಕೂ ಹೆಚ್ಚು ಸಮಯ ಸಂಚರಿಸಿದ ರಥ ಯಾವುದೇ ಅಡೆತಡೆಯಿಲ್ಲದೆ ರಥದ ಬೀದಿಯಲ್ಲಿ ಸಂಚರಿಸಿತು.
ರಥೋತ್ಸವದ ಅಂಗವಾಗಿ ಕೆಲ ಸಂಘ, ಸಂಸ್ಥೆ, ದಾನಿಗಳು ನೀರು ಮಜ್ಜಿಗೆ, ಪಾನಕ ವಿತರಿಸಿದರು. ರಥೋತ್ಸವಕ್ಕೆ ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಜೆ.ಕೃಷ್ಣ, ಎಇಒ ಸತೀಶ್, ಪಾರುಪಾತ್ತೇದಾರ ಎಚ್.ಎಸ್.ಜಯರಾಮ್, ಪ್ರಧಾನ ಅರ್ಚಕ ಕೆ.ಎಸ್.ನರಸಿಂಹನ್, ವರದರಾಜನ್, ವ್ಯವಸ್ಥಾಪನಾ ಸಮಿತಿ ಸದಸ್ಯ ನಂಜಮ್ಮಣಿ ಗುರುಮಲ್ಲಪ್ಪ, ಮಾಜಿ ಗ್ರಾಪಂ ಅಧ್ಯಕ್ಷ ಲತಾ ಮಹೇಶ್ ಸೇರಿದಂತೆ ಗ್ರಾಮದ ಯಜಮಾನರು ಹಾಜರಿದ್ದರು.

ಇನ್ನಷ್ಟು ಓದಿ
Dailyhunt
Disclaimer: This content has not been generated, created or edited by Dailyhunt. Publisher: Vijayvani