Dailyhunt
Vipassana: ಸರ್ಕಾರಿ ನೌಕರರಿಗೆ ಈಗ 'ಧ್ಯಾನ' ಮಾಡಲು ಸಂಬಳ ಸಹಿತ ರಜೆ! ಸರ್ಕಾರದ ಹೊಸ ಪ್ಲಾನ್ ಇಲ್ಲಿದೆ

Vipassana: ಸರ್ಕಾರಿ ನೌಕರರಿಗೆ ಈಗ 'ಧ್ಯಾನ' ಮಾಡಲು ಸಂಬಳ ಸಹಿತ ರಜೆ! ಸರ್ಕಾರದ ಹೊಸ ಪ್ಲಾನ್ ಇಲ್ಲಿದೆ

ರಾಯ್‌ಪುರ: ಸರ್ಕಾರಿ ಕೆಲಸವೆಂದರೆ ಒತ್ತಡ ಇರುವುದು ಸಹಜ. ಈ ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಮತ್ತು ನೌಕರರ ಕಾರ್ಯದಕ್ಷತೆಯನ್ನು ಹೆಚ್ಚಿಸಲು ಛತ್ತೀಸ್‌ಗಢ ಸರ್ಕಾರವು ಒಂದು ವಿಭಿನ್ನ ನಿರ್ಧಾರವನ್ನು ಕೈಗೊಂಡಿದೆ. ಇನ್ಮುಂದೆ ರಾಜ್ಯ ಸರ್ಕಾರದ ನೌಕರರು 'ವಿಪಶ್ಯನಾ' (Vipassana) ಧ್ಯಾನ ಶಿಬಿರಗಳಲ್ಲಿ ಭಾಗವಹಿಸಲು 'ವಿಶೇಷ ಸಂಬಳ ಸಹಿತ ರಜೆ'ಯನ್ನು ಪಡೆಯಬಹುದಾಗಿದೆ.

ಏನಿದು ಹೊಸ ಆದೇಶ? ಯಾರಿಗೆ ಲಭ್ಯ?

ಸರ್ಕಾರದ ಹೊಸ ಆದೇಶದ ಪ್ರಕಾರ, ಅಖಿಲ ಭಾರತ ಸೇವೆ (All India Service) ಮತ್ತು ರಾಜ್ಯ ಸೇವಾ ಅಧಿಕಾರಿಗಳು ಸೇರಿದಂತೆ ಎಲ್ಲಾ ಸರ್ಕಾರಿ ನೌಕರರು 10 ದಿನಗಳ ವಸತಿ ಸಹಿತ ವಿಪಶ್ಯನಾ ಧ್ಯಾನ ಶಿಬಿರಗಳಲ್ಲಿ ಪಾಲ್ಗೊಳ್ಳಲು ಅರ್ಹರಾಗಿರುತ್ತಾರೆ. ಸರ್ಕಾರದ ಮಾನ್ಯತೆ ಪಡೆದ ವಿಪಶ್ಯನಾ ಕೇಂದ್ರಗಳಲ್ಲಿ ಈ ಶಿಬಿರಗಳು ನಡೆಯಲಿದ್ದು, ಒಬ್ಬ ನೌಕರ ತನ್ನ ಇಡೀ ವೃತ್ತಿಜೀವನದಲ್ಲಿ ಗರಿಷ್ಠ 6 ಬಾರಿ ಈ ಸೌಲಭ್ಯವನ್ನು ಬಳಸಿಕೊಳ್ಳಲು ಅವಕಾಶ ನೀಡಲಾಗಿದೆ.

ರಜೆ ಮತ್ತು ಸಂಬಳದ ವಿವರಗಳು

ರಜೆ ಅವಧಿ: ಪ್ರತಿ ಶಿಬಿರಕ್ಕೆ ಪ್ರಯಾಣದ ಸಮಯ ಸೇರಿದಂತೆ ಒಟ್ಟು 12 ದಿನಗಳ ವಿಶೇಷ ಆಕಸ್ಮಿಕ ರಜೆ (Special Casual Leave) ನೀಡಲಾಗುತ್ತದೆ.ಸಂಬಳ: ಈ 12 ದಿನಗಳ ಅವಧಿಯಲ್ಲಿ ನೌಕರನನ್ನು 'ಕರ್ತವ್ಯದ ಮೇಲೆ' (On Duty) ಎಂದು ಪರಿಗಣಿಸಲಾಗುತ್ತದೆ ಮತ್ತು ಪೂರ್ಣ ಸಂಬಳವನ್ನು ನೀಡಲಾಗುತ್ತದೆ.ವೆಚ್ಚ: ಈ ಯೋಜನೆಯಡಿ ಯಾವುದೇ ಪ್ರಯಾಣ ಭತ್ಯೆ (TA) ಅಥವಾ ಇತರ ಹೆಚ್ಚುವರಿ ವೆಚ್ಚಗಳನ್ನು ಸರ್ಕಾರ ಭರಿಸುವುದಿಲ್ಲ. ಶಿಬಿರದ ಮತ್ತು ಪ್ರಯಾಣದ ಸಂಪೂರ್ಣ ವೆಚ್ಚವನ್ನು ನೌಕರನೇ ಭರಿಸಬೇಕಾಗುತ್ತದೆ.

ನಿಯಮ ಮತ್ತು ಷರತ್ತುಗಳು

ರಜೆಗಾಗಿ ಅರ್ಜಿ ಸಲ್ಲಿಸುವಾಗ ವಿಪಶ್ಯನಾ ಕೇಂದ್ರದಿಂದ ಪಡೆದ ಪ್ರವೇಶ ಪತ್ರವನ್ನು (Admission Letter) ಸಲ್ಲಿಸುವುದು ಕಡ್ಡಾಯ.ಶಿಬಿರ ಮುಗಿಸಿ ಬಂದ ನಂತರ ಪೂರ್ಣಗೊಳಿಸಿದ ಪ್ರಮಾಣಪತ್ರವನ್ನು (Completion Certificate) ಇಲಾಖೆಗೆ ನೀಡಬೇಕು. ಒಂದು ವೇಳೆ ಈ ಪ್ರಮಾಣಪತ್ರ ನೀಡದಿದ್ದರೆ, ಆ ಅವಧಿಯನ್ನು ನೌಕರನ ಇತರ ರಜೆಗಳ ಖಾತೆಗೆ ಸೇರಿಸಲಾಗುತ್ತದೆ.ಇಲಾಖೆಯ ಕೆಲಸ ಕಾರ್ಯಗಳಿಗೆ ಅಡ್ಡಿಯಾಗದಂತೆ ನೋಡಿ ಉನ್ನತ ಅಧಿಕಾರಿಗಳು ಈ ರಜೆಯನ್ನು ಮಂಜೂರು ಮಾಡುತ್ತಾರೆ.

ವಿಪಶ್ಯನಾ ಧ್ಯಾನ ಎಂದರೇನು?

ವಿಪಶ್ಯನಾ ಎಂದರೆ "ವಸ್ತುಗಳನ್ನು ಅವುಗಳ ನೈಜ ರೂಪದಲ್ಲಿ ನೋಡುವುದು" ಎಂದರ್ಥ. ಇದು ಭಾರತದ ಅತ್ಯಂತ ಪ್ರಾಚೀನ ಧ್ಯಾನ ಪದ್ಧತಿಗಳಲ್ಲಿ ಒಂದಾಗಿದೆ. ಈ ಶಿಬಿರಗಳಲ್ಲಿ 10 ದಿನಗಳ ಕಾಲ ಮೌನವಾಗಿಿದ್ದುಕೊಂಡು ಆತ್ಮಾವಲೋಕನ ಮಾಡಿಕೊಳ್ಳುವ ಮೂಲಕ ಮನಸ್ಸಿನ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು.ಸರ್ಕಾರದ ಈ ನಡೆಯು ನೌಕರರಲ್ಲಿ ನೈತಿಕ ಮೌಲ್ಯಗಳನ್ನು ವೃದ್ಧಿಸಲು ಮತ್ತು ಸಕಾರಾತ್ಮಕ ಮನೋಭಾವನೆಯನ್ನು ಬೆಳೆಸಲು ಸಹಕಾರಿಯಾಗಲಿದೆ ಎಂದು ಅಧಿಕಾರಿಗಳು ಆಶಿಸಿದ್ದಾರೆ. ಇತರ ರಾಜ್ಯಗಳಿಗೂ ಇದು ಮಾದರಿಯಾಗುವ ಸಾಧ್ಯತೆಯಿದೆ,(ಏಜೆನ್ಸೀಸ್​).

ಇನ್ನಷ್ಟು ಓದಿ
Dailyhunt
Disclaimer: This content has not been generated, created or edited by Dailyhunt. Publisher: Vijayvani