Dailyhunt
Dubai: ದುಬೈ ಕನ್ನಡಿಗರ ಕೂಟದ ಅಧ್ಯಕ್ಷರಾಗಿ ಅರುಣ್ ಕುಮಾರ್ ಎಂ.ಕೆ ಪುನರಾಯ್ಕೆ

Dubai: ದುಬೈ ಕನ್ನಡಿಗರ ಕೂಟದ ಅಧ್ಯಕ್ಷರಾಗಿ ಅರುಣ್ ಕುಮಾರ್ ಎಂ.ಕೆ ಪುನರಾಯ್ಕೆ

Vishwavani 2 weeks ago

ದುಬೈ, ಏ.02: ಮಧ್ಯಪ್ರಾಚ್ಯದ ಪ್ರತಿಷ್ಠಿತ ಹಾಗೂ ಹಿರಿಯ ಕನ್ನಡ ಸಂಘಟನೆಗಳಲ್ಲಿ ಒಂದಾದ 'ಕನ್ನಡಿಗರ ಕೂಟ, ದುಬೈ' (Dubai Kannadigara Kuta) ಸಂಘಟನೆಯ 2026-2028ನೇ ಸಾಲಿನ ಅಧ್ಯಕ್ಷರಾಗಿ ಅರುಣ್ ಕುಮಾರ್ ಎಂ.ಕೆ (Arun Kumar MK) ಅವರು ಎರಡನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಂಘಟನೆಯ ಸ್ಥಾಪಕ ಸದಸ್ಯರು, ಸಲಹಾ ಮಂಡಳಿ ಹಾಗೂ ಪದಾಧಿಕಾರಿಗಳ ಸಮ್ಮುಖದಲ್ಲಿ ನಡೆದ ಪ್ರಕ್ರಿಯೆಯಲ್ಲಿ ಈ ಮಹತ್ವದ ತೀರ್ಮಾನವನ್ನು ಏಕಮತದಿಂದ ಕೈಗೊಳ್ಳಲಾಯಿತು.

ಕನ್ನಡಿಗರ ಕೂಟ, ದುಬೈ ಕಳೆದ 24 ವರ್ಷಗಳಿಂದ ದುಬೈಯಲ್ಲಿ ಪ್ರತಿ ನವೆಂಬರ್ 2ನೇ ವಾರದಲ್ಲಿ "ಕರ್ನಾಟಕ ರಾಜ್ಯೋತ್ಸವ'ವನ್ನು ನಿರಂತರವಾಗಿ ಆಚರಿಸುತ್ತಿರುವ ಏಕೈಕ ಕನ್ನಡ ಸಂಘಟನೆ ಎಂಬ ವಿಶಿಷ್ಟ ಸ್ಥಾನವನ್ನು ಹೊಂದಿದೆ. ಜೊತೆಗೆ, ದುಬೈ ಮತ್ತು ಕರ್ನಾಟಕದಲ್ಲಿ ಅನೇಕ ಸಂಗೀತ, ಸಾಂಸ್ಕೃತಿಕ ಹಾಗೂ ಸಮಾಜಮುಖಿ ಕಾರ್ಯಕ್ರಮಗಳು, ರಕ್ತದಾನ ಶಿಬಿರ, ಇಫ್ತಾರ್ ಕೂಟ. ಹಿರಿಯ ಸಾಧಕರಿಗೆ ಗೌರವ ಸನ್ಮಾನ ಸಮಾರಂಭ ಹೀಗೆ ನೂರಾರು ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿ, ಕನ್ನಡಿಗರ ಸೇವೆಯಲ್ಲಿ ಮುಂಚೂಣಿಯಲ್ಲಿದೆ.

ಪುನರ್ ಆಯ್ಕೆಯ ನಂತರ ಅಧ್ಯಕ್ಷ ಅರುಣ್ ಕುಮಾರ್ ಅವರು ಸಮಿತಿ ಮತ್ತು ಸಲಹಾ ಸದಸ್ಯರಿಗೆ ತಮ್ಮ ಮೇಲೆ ಇಟ್ಟಿರುವ ನಂಬಿಕೆ ಮತ್ತು ಬೆಂಬಲಕ್ಕಾಗಿ ಧನ್ಯವಾದಗಳನ್ನು ಸಲ್ಲಿಸಿದರು. ಅವರು ಸಂಸ್ಥೆಯ ಸ್ಥಾಪಕರು ನಿರ್ಮಿಸಿದ ಪರಂಪರೆಯನ್ನು ಮುಂದಿನ ವರ್ಷಗಳಲ್ಲಿ ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಜವಾಬ್ದಾರಿಯನ್ನು ನಿಭಾಯಿಸುವುದಾಗಿ ಭರವಸೆ ನೀಡಿದರು. 2026ರ ಏಪ್ರಿಲ್ ತಿಂಗಳಲ್ಲಿ ಸಮಿತಿ ವಿಸ್ತರಣೆ ನಡೆಯಲಿದ್ದು, ಮಧ್ಯಪ್ರಾಚ್ಯದ ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು "ಸಂಗೀತ ಸೌರಭ 2026" ಸೇರಿದಂತೆ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು UAE ನಿಯಮಾವಳಿ ಮತ್ತು ಮಾರ್ಗಸೂಚಿಗಳ ಪ್ರಕಾರ ಮುಂದಿನ ದಿನಗಳಲ್ಲಿ ಘೋಷಿಸಲಾಗುವುದೆಂದು ತಿಳಿಸಿದರು.

'ಕರ್ನಾಟಕ ರಾಜ್ಯೋತ್ಸವ-2026' ದಿನಾಂಕ ಪ್ರಕಟ

ಕಳೆದ ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ದುಬೈನಲ್ಲಿ ನಿರಂತರವಾಗಿ ರಾಜ್ಯೋತ್ಸವ ಆಚರಿಸುತ್ತಿರುವ ಪರಂಪರೆಯನ್ನು ಮುಂದುವರಿಸಿರುವ ಈ ಸಂಘಟನೆಯು, ತನ್ನ ಸುದೀರ್ಘ ಸಾಂಸ್ಕೃತಿಕ ಪಯಣದಲ್ಲಿ ನಾಡಿನ ಸಾಹಿತಿಗಳು, ಸಾಧಕರು, ಸಂಗೀತ ದಿಗ್ಗಜರು, ಖ್ಯಾತ ನಟ-ನಟಿಯರು, ರಾಜಕೀಯ ಮುತ್ಸದ್ಧಿಗಳು ಹಾಗೂ ಕ್ರೀಡಾ ಸಾಧಕರನ್ನು ದುಬೈಗೆ ಆಮಂತ್ರಿಸಿ ಗೌರವಿಸಿದ ಕೀರ್ತಿ ಹೊಂದಿದೆ. ಅನಿವಾಸಿ ಕನ್ನಡಿಗರು ಮತ್ತು ತಾಯ್ತಾಡಿನ ಸಾಧಕರ ನಡುವೆ ಭದ್ರವಾದ ಸಾಂಸ್ಕೃತಿಕ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿರುವ ಈ ಸಂಘವು, ತನ್ನ ಈ ಭವ್ಯ ಪರಂಪರೆಯನ್ನು ಮುಂದುವರಿಸುತ್ತಾ ಈ ವರ್ಷದ 'ಕರ್ನಾಟಕ ರಾಜ್ಯೋತ್ಸವ-2026' ಸಮಾರಂಭವನ್ನು ನವೆಂಬರ್ 07, ಶನಿವಾರದಂದು ಆಚರಿಸಲು ನಿರ್ಧರಿಸಿದೆ.

ಕನ್ನಡಿಗರ ಏಕತೆಗಾಗಿ ಕರೆ

2025ರ ರಾಜ್ಯೋತ್ಸವದಲ್ಲಿ ಕನ್ನಡಿಗರ ಕೂಟ, ದುಬೈಯಿಂದ ʼಅಂತಾರಾಷ್ಟ್ರೀಯ ಸೇವಾ ರತ್ನʼ ಪ್ರಶಸ್ತಿ ಪಡೆದ ಡಾ. ರೋನಾಲ್ಡ್ ಕೊಲಾಸೋ ಅವರ ಮಾತುಗಳನ್ನು ಸ್ಮರಿಸಿದ ಅವರು, ಲೋಕೋಪಕಾರಿ ಸಾಧಕರು, ಉದ್ಯಮಿ ಹಾಗೂ ಅನೇಕ ಕನ್ನಡ ಸಂಘಟನೆಗಳ ಪೋಷಕರಾದ ಡಾ. ರೋನಾಲ್ಡ್ ಕೊಲಾಸೋ ಅವರು ದುಬೈಯಲ್ಲಿರುವ ಎಲ್ಲಾ ಕನ್ನಡ ಸಂಘಟನೆಗಳು ಒಂದಾಗಿ ಸೇರಿ ಒಂದು ದೊಡ್ಡ ರಾಜ್ಯೋತ್ಸವವನ್ನು ನಡೆಸುವಂತೆ ಕರೆ ನೀಡಿದ್ದರು. ಈ ಕರೆಗೆ ಗೌರವ ಸೂಚಿಸಿ, ಡಾ. ರೋನಾಲ್ಡ್ ಕೊಲಾಸೋ ಅವರ ಸಲಹೆಯಂತೆ, 2026ರ ರಾಜ್ಯೋತ್ಸವವನ್ನು ಕನ್ನಡಿಗರ ಕೂಟ, ದುಬೈ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಸಲು ಎಲ್ಲಾ ಕನ್ನಡ ಸಂಘಟನೆಗಳು ಒಗ್ಗೂಡಿ ಕನ್ನಡಿಗರ ಶಕ್ತಿ ಮತ್ತು ಐಕ್ಯತೆಯನ್ನು ಜಗತ್ತಿಗೆ ಪ್ರದರ್ಶಿಸಬೇಕೆಂದು ವಿನಂತಿಸಿದ್ದಾರೆ.

ಸಂಘಟನೆಯ ಸ್ಥಾಪಕ ಸದಸ್ಯರು, ಸಲಹಾ ಸಮಿತಿ ಸದಸ್ಯರಾದ ಸದನ್ ದಾಸ್, ವೀರೇಂದ್ರ ಬಾಬು, ಉಮಾ ವಿದ್ಯಾಧರ, ಇವರೊಂದಿಗೆ ಸಲಹಾ ಮಂಡಳಿಯ ಪ್ರಮುಖರಾದ ಮಂಜುನಾಥ್ ರಾಜನ್, ಅಡ್ವಕೇಟ್ ಇಬ್ರಾಹಿಂ ಖಲೀಲ್, ಅಶ್ರಫ್ ಮಂತೂರ್, ಛಾಯಾ ಕೃಷ್ಣಮೂರ್ತಿ, ಕಾರ್ಯಕಾರಿಣಿ ಸಮಿತಿಯ ಮಲ್ಲಿಕಾರ್ಜುನ ಅಂಗಡಿ, ಚೇತನ್ ಸುಬ್ರಮಣ್ಯ, ದೀಪಕ್ ಸೋಮಶೇಖರ, ವಿನೀತ್ ರಾಜ್, ಶ್ರೀನಿವಾಸ ಅರಸ್, ವೆಂಕಟರಮಣ ಕಾಮತ್, ವಿನಾಯಕ ಹೆಗಡೆ, ಡಾ.ನಿರುಪಮಾ ದಿನೇಶ್ ಮತ್ತು ನಟರಾಜ್ ಸೇರಿದಂತೆ ಹಲವು ಗಣ್ಯರು ಹಾಗೂ ಕಾರ್ಯಕಾರಿಣಿ ಸಮಿತಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದು, ನೂತನ ಅಧ್ಯಕ್ಷರ ಆಯ್ಕೆಯನ್ನು ಸ್ವಾಗತಿಸಿದರು.

ದುಬೈನಲ್ಲಿ ಸಿಲುಕಿರುವ ಭಾರತೀಯರಿಗಾಗಿ 64 ಫ್ಲಾಟ್‌ಗಳ ಅಪಾರ್ಟ್‌ಮೆಂಟ್‌ ಬಿಟ್ಟುಕೊಟ್ಟ ಉದ್ಯಮಿ!

Dailyhunt
Disclaimer: This content has not been generated, created or edited by Dailyhunt. Publisher: Vishwavani