ಜೀ ಕನ್ನಡ ವಾಹಿನಿಯು ಜನಪ್ರಿಯ ಧಾರಾವಾಹಿಗಳು, ರಿಯಾಲಿಟಿ ಶೋಗಳು ಮತ್ತು ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ಗಳಿಂದ ಕಿರುತೆರೆಗೆ ಹೊಸತನದ ಮೆರುಗನ್ನು ನೀಡಿದೆ. ವಾಹಿನಿಯು ಎಲ್ಲಾ ವಯೋಮಿತಿಯ ಪ್ರೇಕ್ಷಕರ ಪ್ರೀತಿಗೆ ಪಾತ್ರವಾಗಿದೆ. ಈಗ ಕಿರುತೆರೆಯ ಸಿನಿಪ್ರಿಯರಿಗೆ ಹೊಸದೊಂದು ಗುಡ್ ನ್ಯೂಸ್ ಇದೆ ನೋಡಿ.
ಅದೇನಂದರೆ, ಕಳೆದ ವರ್ಷದ ಕೊನೆಯಲ್ಲಿ ತೆರೆಕಂಡ ʻ45ʼ ಸಿನಿಮಾವು ಜೀ ಕನ್ನಡ ವಾಹಿನಿಯಲ್ಲಿ ಪ್ರೀಮಿಯರ್ ಆಗಲಿದೆ.
ಹೌದು, ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಮತ್ತು ರಾಜ್ ಬಿ.ಶೆಟ್ಟಿ ನಟನೆಯ ʻ45ʼ ಚಿತ್ರವು ಇದೇ ಫೆಬ್ರವರಿ 22 ರಂದು ಸಂಜೆ 4.30 ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಚೊಚ್ಚಲ ನಿರ್ದೇಶನದ ಈ ಸಿನಿಮಾವನ್ನು ರಮೇಶ್ ರೆಡ್ಡಿ ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಇದೊಂದು ಫ್ಯಾಂಟಸಿ ಆಕ್ಷನ್ ಡ್ರಾಮಾ ಆಗಿದ್ದು, ಇಲ್ಲಿ ಫಿಲಾಸಫಿ ಜೊತೆಗೆ ಆಕ್ಷನ್ ಹಾಗೂ ಭಾವನಾತ್ಮಕ ಅಂಶಗಳು ಕೂಡ ಇವೆ. ಉತ್ತಮ ತಾರಾಬಳಗ, ವಿಭಿನ್ನವಾದ ಕಥೆಯನ್ನು ಹೊಂದಿರುವ ಈ ಚಿತ್ರದಲ್ಲಿ ಅತೀಂದ್ರೀಯ ಅಂಶಗಳು ಮತ್ತು ಜೀವನದ ಮೌಲ್ಯಗಳನ್ನು ತೋರಿಸಲಾಗಿದೆ.
ಈ ಸಿನಿಮಾದ ಕಥೆ ಏನು?
ಈ ಸಿನಿಮಾದ ಕಥೆಯು ವಿನಯ್ (ರಾಜ್ ಬಿ. ಶೆಟ್ಟಿ) ಎಂಬ ಸಾಧುಸ್ವಭಾವದ ಸಾಫ್ಟ್ವೇರ್ ಎಂಜಿನಿಯರ್ ಸುತ್ತ ಸಾಗುತ್ತದೆ. ತಾಯಿಯೊಂದಿಗೆ ಮತ್ತು ತನ್ನ ಗೆಳತಿ ಮೇಘನಾಳ ಜೊತೆ ಸರಳ ಹಾಗೂ ಸಂತೋಷಕರ ಜೀವನ ನಡೆಸುತ್ತಿದ್ದ ಅವನ ಬದುಕು, ಒಂದು ಅನಿರೀಕ್ಷಿತ ಘಟನೆಯಿಂದ ಸಂಪೂರ್ಣವಾಗಿ ಬದಲಾಗುತ್ತದೆ. ಲೋಕಲ್ ಡಾನ್ ರಾಯಪ್ಪ (ಉಪೇಂದ್ರ) ಅತ್ಯಂತ ಪ್ರೀತಿಯಿಂದ ಸಾಕುತ್ತಿದ್ದ 'ರೋಸಿ' ಎಂಬ ಕಪ್ಪು ನಾಯಿಯನ್ನು ವಿನಯ್ ಅರಿಯದೆ ಗುದ್ದಿ, ಅದರ ಸಾವಿಗೆ ಕಾರಣನಾಗುತ್ತಾನೆ. ದುಃಖದಿಂದ ಕಂಗಾಲಾದ ಹಾಗೂ ಕೋಪದಿಂದ ಉರಿಯುತ್ತಿರುವ ರಾಯಪ್ಪ, ತಕ್ಷಣ ಶಿಕ್ಷೆ ನೀಡದೆ, ಗರುಡಪುರಾಣದಲ್ಲಿರುವ ಮರಣಾನಂತರ ಜೀವನದ ತತ್ವವನ್ನು ಉಲ್ಲೇಖಿಸಿ, ವಿನಯ್ಗೆ ತನ್ನ ತಪ್ಪಿನ ಬಗ್ಗೆ ಆತ್ಮಪರಿಶೀಲನೆ ಮಾಡಲು 45 ದಿನಗಳ ಕಾಲಾವಕಾಶ ನೀಡುತ್ತಾನೆ.
ಭಯ ಮತ್ತು ಆತಂಕದಿಂದ ಬಳಲುತ್ತಿರುವ ವಿನಯ್, ತನ್ನ ಬದುಕಿನ ಘಟನೆಗಳನ್ನು ಮುಂಚಿತವಾಗಿ ಸೂಚಿಸುವ ಭಯಾನಕ ಕನಸುಗಳನ್ನು ಕಾಣಲು ಆರಂಭಿಸುತ್ತಾನೆ. ಅದರಲ್ಲಿ ತನ್ನದೇ ಅಂತ್ಯದ ಚಿತ್ರಣವೂ ಸೇರಿದೆ. ಈ ಗೊಂದಲದ ನಡುವೆ, ಅವನು ಶಿವಣ್ಣ (ಶಿವರಾಜಕುಮಾರ್) ಅವರನ್ನು ಭೇಟಿಯಾಗುತ್ತಾನೆ. ದಿಟ್ಟ ವ್ಯಕ್ತಿತ್ವ ಹೊಂದಿರುವ ಶಿವಣ್ಣ, ವಿನಯ್ನ ಮಾರ್ಗದರ್ಶಕ ಹಾಗೂ ರಕ್ಷಕರಾಗಿ ನಿಂತುಕೊಳ್ಳುತ್ತಾರೆ. 45 ದಿನಗಳ ಕೌಂಟ್ಡೌನ್ ಆರಂಭವಾಗುತ್ತಿದ್ದಂತೆ. ವಿನಯ್ ತನ್ನ ಹಣೆಬರಹವನ್ನು ಮತ್ತು ಭವಿಷ್ಯದಲ್ಲಿ ತನ್ನ ಜೀವನದಲ್ಲಿ ಏನಾಗಬಹುದು ಎಂಬುದನ್ನು ಊಹಿಸಿಕೊಳ್ಳಲು ಶುರು ಮಾಡುತ್ತಾನೆ. ಈ ಎಲ್ಲಾ ಅಂಶಗಳು ಪ್ರೇಕ್ಷಕರಲ್ಲಿ ಮತ್ತಷ್ಟು ಕುತೂಹಲವನ್ನು ಉಂಟುಮಾಡುತ್ತದೆ.
ಒಂದೇ ಪರದೆ ಮೇಲೆ ಮೂವರು ದಿಗ್ಗಜರು
"ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ಅವರು ಜೊತೆಯಾಗಿ ಕಾಣಿಸಿಕೊಂಡಿರುವುದು ಈ ಚಿತ್ರದ ತೂಕವನ್ನು ದುಪ್ಪಟ್ಟು ಮಾಡಿದೆ. ಈ ಮೂವರು ದಿಗ್ಗಜರು ಒಂದೇ ಪರದೆಯಲ್ಲಿ ಕಾಣಿಸಿಕೊಳ್ಳುವುದನ್ನು ನೋಡುವುದೇ ಒಂದು ಚಂದದ ಅನುಭವ. ಇದು ಜಸ್ಟ್ ಪ್ರೀಮಿಯರ್ ಅಷ್ಟೇ ಅಲ್ಲ, ಇದು ಜೀ ಕನ್ನಡ ಪ್ರೇಕ್ಷಕರಿಗೆ ಒಂದು ಹಬ್ಬ" ಎನ್ನುತ್ತಾರೆ ಜೀ ಕನ್ನಡದ ಚೀಫ್ ಚಾನೆಲ್ ಆಫೀಸರ್ ಮತ್ತು ಬಿಸಿನೆಸ್ ಹೆಡ್ ದೀಪಕ್ ಶ್ರೀರಾಮುಲು.

