Dailyhunt
Roopa Gururaj Column: ಶರಣಾಗತಿಯ ಶಕ್ತಿಯ ಕುರಿತು ವಿವರಿಸುವ ರಾಮಚರಿತ ಮಾನಸ

Roopa Gururaj Column: ಶರಣಾಗತಿಯ ಶಕ್ತಿಯ ಕುರಿತು ವಿವರಿಸುವ ರಾಮಚರಿತ ಮಾನಸ

Vishwavani 2 weeks ago

ಒಂದೊಳ್ಳೆ ಮಾತು

ಕೈಲಾಸದ ಬೆಳ್ಳಿಯ ಶಿಖರಗಳ ಮೇಲೆ ಶಿವ ಪಾರ್ವತಿಯರ ಚರ್ಚೆ ಗಹನವಾಗುತ್ತಿತ್ತು. ಪಾರ್ವತಿ ಕೇಳಿದಳು, "ಸ್ವಾಮೀ, ಅಂತರಂಗದ ಸಂವಾದವೇ ರಾಮನ ದರ್ಶನಕ್ಕೆ ದಾರಿ ಎಂದಿರಿ. ಆದರೆ, ಈ ಸಂವಾದವು ಕೇವಲ ಜ್ಞಾನದಿಂದ ಸಾಧ್ಯವೇ? ಅಥವಾ ಜ್ಞಾನಕ್ಕಿಂತ ಮಿಗಿಲಾದದ್ದು ಯಾವುದಾದರೂ ಇದೆಯೇ?".

ಶಿವನು ಕಿರುನಗು ಬೀರುತ್ತಾ ಉತ್ತರಿಸಿದನು, "ಪಾರ್ವತಿ, eನವು ಹಾದಿಯನ್ನು ತೋರಿಸು ತ್ತದೆ, ಆದರೆ ಗುರಿಯನ್ನು ತಲುಪಿಸುವುದು 'ಶರಣಾಗತಿ'. ಜ್ಞಾನಕ್ಕೆ ಅಹಂಕಾರದ ಸೋಂಕು ತಗಲುವ ಅಪಾಯವಿರುತ್ತದೆ, ಆದರೆ ಸಂಪೂರ್ಣವಾಗಿ ಶರಣಾದ ಭಕ್ತನಿಗೆ ಅಹಂಕಾರದ ಹಂಗಿರುವುದಿಲ್ಲ. ಅಲ್ಲಿ ಕೇವಲ ಪ್ರೀತಿ ಮತ್ತು ಸಮರ್ಪಣೆ ಮಾತ್ರ ಇರುತ್ತದೆ".

ಶಿವ ಮಾತು ಮುಂದುವರಿಸುತ್ತಾ "ನೋಡು ದೇವೀ, ಮನುಷ್ಯ ತನ್ನ ಬುದ್ಧಿವಂತಿಕೆಯಿಂದ ಎಲ್ಲವನ್ನೂ ಗೆಲ್ಲಬ ಎಂದು ಭಾವಿಸುತ್ತಾನೆ. ಆದರೆ ಅವನ ಬುದ್ಧಿ ಎಂಬುದು ಒಂದು ಮಿತಿಯೊಳಗೆ ಬಂಧಿಯಾಗಿದೆ. ಯಾವಾಗ ಅವನು 'ನಾನು' ಎಂಬ ಭಾವವನ್ನು ಬಿಟ್ಟು 'ನಿನದೇ ಎಲ್ಲ' ಎಂದು ಪರಮಾತ್ಮನಿಗೆ ಶರಣಾಗುತ್ತಾನೋ, ಆಗ ಅವನ ಅಂತರಂಗದ ಕವಾಟಗಳು ತೆರೆಯುತ್ತವೆ.

Roopa Gururaj Column: ರಾಮಚರಿತ ಮಾನಸ: ಸತ್ಯದ ಅರಿವಿನ ಶಿವ-ಪಾರ್ವತಿ ಸಂವಾದ

ಕಾಕಭುಶುಂಡಿಯ ಉದಾಹರಣೆಯನ್ನೇ ನೋಡು; ಆತ ಪಕ್ಷಿಯ ರೂಪದಲ್ಲಿದ್ದರೂ ತನ್ನ ಅಹಂಕಾರವಿಲ್ಲದ ಭಕ್ತಿಯಿಂದಲೇ ಪರಮ ಸತ್ಯವನ್ನು ಕಂಡುಕೊಂಡನು".

ಪಾರ್ವತಿಯ ಕಣ್ಣುಗಳಲ್ಲಿ ಭಕ್ತಿ ತುಂಬಿ ಬಂತು. "ಹಾಗಾದರೆ ಶರಣಾಗತಿ ಎಂದರೆ ಸೋಲ ಲ್ಲವೇ?" ಎಂದು ಕೇಳಿದಳು. ಶಿವ ಗಂಭೀರವಾಗಿ ಹೇಳಿದನು, "ಖಂಡಿತ ಇಲ್ಲ ಪಾರ್ವತಿ. ಶರಣಾಗತಿ ಎಂದರೆ ಸೋಲಲ್ಲ, ಅದು ವಿಜಯದ ಆರಂಭ. ಅಹಂಕಾರವನ್ನು ಸೋಲಿಸು ವುದೇ ಅತಿದೊಡ್ಡ ವಿಜಯ.

ಸಮುದ್ರಕ್ಕೆ ಸೇರುವ ನದಿ ತನ್ನ ಹೆಸರನ್ನು ಕಳೆದುಕೊಂಡರೂ ಸಮುದ್ರವೇ ಆಗಿ ಬದಲಾಗು ವಂತೆ, ಭಕ್ತನು ತನ್ನ ಅಸ್ತಿತ್ವವನ್ನು ಭಗವಂತನಲ್ಲಿ ವಿಲೀನಗೊಳಿಸಿದಾಗ ಅವನೇ ಭಗವಂತನ ಸ್ವರೂಪವಾಗುತ್ತಾನೆ".

ಶ್ರೀ ರಾಮಚರಿತಮಾನಸ ಶ್ಲೋಕ

ಈ ಭಾವಕ್ಕೆ ಪೂರಕವಾಗಿ ತುಳಸಿದಾಸರು

ಬಾಲಕಾಂಡದಲ್ಲಿ ಹೀಗೆ ಹೇಳುತ್ತಾರೆ:

ಸೋಇ ಜಾನಇ ಜೇಹಿ ದೇಹು ಜನಾಯಿ |

ಜಾನತ ತುಮ್ಹಹಿ ತುಮ್ಹಇ ಹೋಇ ಜಾಯಿ ||

ಅಂದರೆ, ಹೇ ಪ್ರಭು, ನೀನು ಯಾರಿಗೆ ನಿನ್ನನ್ನು ಅರಿಯುವಂತೆ ಮಾಡುತ್ತೀಯೋ ಅವರು ಮಾತ್ರ ನಿನ್ನನ್ನು ತಿಳಿಯಬಲ್ಲರು. ಒಮ್ಮೆ ನಿನ್ನನ್ನು ಅರಿತ ಮೇಲೆ, ಅವರು ನಿನ್ನ ಒಂದಾಗಿ ನಿನ್ನ ಸ್ವರೂಪವೇ ಆಗಿಬಿಡುತ್ತಾರೆ ಎಂದರ್ಥ.

ಈ ಶ್ಲೋಕವು 'ಶರಣಾಗತಿ'ಯ ಪರಮ ಸತ್ಯವನ್ನು ಸಾರುತ್ತದೆ. ಜ್ಞಾನವು ನಮ್ಮನ್ನು ದೇವರೆಡೆಗೆ ಕರೆದೊಯ್ದರೆ, ಶರಣಾಗತಿಯು ನಮ್ಮನ್ನು ದೇವರೇ ಆಗಿಸಿ ಬಿಡುತ್ತದೆ. ನಮ್ಮ ಬದುಕಿನ ಸಂಕಷ್ಟಗಳ ಸಮಯದಲ್ಲಿ ನಾವು ಯಾರಲ್ಲಿ ಆಶ್ರಯ ಪಡೆಯುತ್ತೇವೆ ಎಂಬುದು ಮುಖ್ಯ.

ಕಷ್ಟಗಳು ಎಲ್ಲರಿಗೂ ಬರುತ್ತದೆ, ಆದರೆ ಅಂಥ ಸಮಯದಲ್ಲಿ ಉತ್ತಮರಿಂದ ಸಹಾಯ ಪಡೆದಾಗ ಕಷ್ಟದ ಪರಿಹಾರವು ಕೂಡ ಒಳ್ಳೆಯ ರೀತಿಯಲ್ಲಿ ಆಗುತ್ತದೆ. ಕಷ್ಟ ತೀರಿದರೆ ಸಾಕು ಎಂದು ವಾಮಮಾರ್ಗದಲ್ಲಿ ಸಹಾಯ ಪಡೆದಾಗ ಒಂದು ಕಷ್ಟ ನೂರಾಗುತ್ತದೆ. ಜೀವನದಲ್ಲಿ ವಿದ್ಯೆ-ಬುದ್ಧಿಯನ್ನು ಸಂಪಾದಿಸುವುದರ ಜತೆಗೆ ನಮ್ಮಲ್ಲಿ ಬೇಡದಿರುವ ಅಹಂಕಾರ ಕೂಡ ಮನೆ ಮಾಡುತ್ತಾ ಹೋಗುತ್ತದೆ.

ಅಹಂಕಾರವು ನಮ್ಮನ್ನು ಪ್ರಪಾತಕ್ಕೆ ತಳ್ಳಿದರೆ, ವಿವೇಕ ಮತ್ತು ಶರಣಾಗತಿ ನಮ್ಮನ್ನು ಉನ್ನತಿಗೆ ಒಯ್ಯುತ್ತವೆ. ಆದ್ದರಿಂದಲೇ ಬದುಕಿನಲ್ಲಿ ಮುಂದೆ ನಡೆಯುತ್ತಾ ಅಲ್ಲ ಅಹಂಕಾರವನ್ನು ಬಿಟ್ಟು ವಿನಯವಂತಿಕೆಯಿಂದ ನಡೆದುಕೊಳ್ಳುವುದನ್ನು ರೂಢಿ ಮಾಡಿಕೊಳ್ಳಬೇಕು.. ಅಹಂಕಾರ ಪಟ್ಟಾಗ ಕಲಿತ ವಿದ್ಯೆ, ಚಿಕ್ಕ ಯಶಸ್ಸು ಯಾವುದನ್ನೂ ನಾವು ಅನುಭವಿಸಲು ಸಾಧ್ಯವಾಗುವುದಿಲ್ಲ.

ಎಲ್ಲಕ್ಕಿಂತ ಹೆಚ್ಚಾಗಿ ಕಲಿತ ಜ್ಞಾನವನ್ನು ಹಂಚಿದಾಗ ನಮ್ಮಲ್ಲಿರುವ ಸಾತ್ವಿಕ ಶಕ್ತಿ ಮತ್ತಷ್ಟು ಅಕ್ಷಯವಾಗುತ್ತಾ ಹೋಗುತ್ತದೆ. ಜೀವನದಲ್ಲಿ ವಿದ್ಯೆ ಸಂಪಾದಿಸಿ, ಅಧಿಕಾರವನ್ನು ಗಳಿಸಿ ಶ್ರೀಮಂತಿಕೆಯಿಂದ ಬದುಕಿದರೆ ಯಶಸ್ಸು ಗಳಿಸಿದಂತಲ್ಲ. ಕಲಿತ ವಿದ್ಯೆಯಿಂದ ನೂರು ಜನರಿಗೆ ಒಳ್ಳೆಯದಾಗಬೇಕು. ಅಧಿಕಾರದ ಮದ ತಲೆಗೆ ಏರಬಾರದು. ಎಲ್ಲಕ್ಕಿಂತ ಹೆಚ್ಚಾಗಿ ಜ್ಞಾನದ ಅಹಂಕಾರಕ್ಕಿಂತ ಭಗವಂತನಿಗೆ ಶರಣಾಗುವ ಗುಣವನ್ನು ಬೆಳೆಸಿಕೊಂಡು ಬದುಕಿ ದಾಗ ನಮ್ಮೊಳಗೆ ರಾಮನ ( ಸತ್ಯದ) ದರ್ಶನವಾಗುತ್ತದೆ. ಆಗ ನಮ್ಮೊಳಗೂ ರಾಮ ನೆಲೆಸು ತ್ತಾನೆ...

Dailyhunt
Disclaimer: This content has not been generated, created or edited by Dailyhunt. Publisher: Vishwavani