Dailyhunt Logo
  • Light mode
    Follow system
    Dark mode
    • Play Story
    • App Story
Vishwavani Editorial: ಅಡಿಕೆಗೆ ಹಾನಿಯಾಗದು

Vishwavani Editorial: ಅಡಿಕೆಗೆ ಹಾನಿಯಾಗದು

Vishwavani 1 week ago

ತಂಬಾಕು ಅಥವಾ ನಿಕೋಟಿನ್ ಒಳಗೊಂಡಿರುವ ಗುಟ್ಕಾ ಹಾಗೂ ಪಾನ್ ಮಸಾಲಾ ಉತ್ಪನ್ನಗಳ ಮೇಲೆ ಕರ್ನಾಟಕ ಸರಕಾರ ಒಂದು ವರ್ಷದ ನಿಷೇಧ ಹೇರಿದ್ದು, ತದನಂತರ, ಅಡಿಕೆ ಬೆಳೆಗಾರರ ಹಿತ ಪರಿಗಣಿಸಿ ಆ ನಿಷೇಧವನ್ನು ವಾಪಸ್ ಪಡೆದುಕೊಂಡಿದೆ. ಸರಕಾರದ ಆದೇಶದಿಂದ ಅಡಿಕೆ ಕೃಷಿಕರಲ್ಲಿ, ಅಡಿಕೆ ಬೆಲೆ ಕುಸಿಯಬಹುದು ಎಂಬ ಆತಂಕ ಉಂಟಾಗಿತ್ತು.

ರೈತರ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿತ್ತು. ಸದ್ಯ ನಿಷೇಧದ ಗುಮ್ಮ ದೂರವಾಗಿದೆ. ಆದರೆ ಗುಟ್ಕಾ, ಪಾನ್ ಮಸಾಲಾ ಮತ್ತು ಅಡಿಕೆ ಸಂಬಂಧ ಇರುವ ಹಲವು ತಪ್ಪು ಕಲ್ಪನೆಗಳು ನಿವಾರಣೆ ಆಗಬೇಕಿವೆ.

ಗುಟ್ಕಾ ನಿಷೇಧ ಎಂದರೆ ಅಡಿಕೆಯ ನಿಷೇಧವಲ್ಲ ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳ ಬೇಕು. ಹಾನಿಕಾರಕವಾದ, ತಂಬಾಕು ಮಿಶ್ರಿತವಾದ ಉತ್ಪನ್ನಗಳ ಮಾರಾಟಕ್ಕೆ ನಿಷೇಧ ಜನತೆಯ ಆರೋಗ್ಯ ದೃಷ್ಟಿಯಿಂದ ಸ್ವಾಗತಾರ್ಹ. ಇದರ ನಿಷೇಧದಿಂದ ಅಡಿಕೆ ಬೆಲೆಯ ಮೇಲೆ ಏನೂ ಪರಿಣಾಮ ಆಗುವುದಿಲ್ಲ. ರಾಜ್ಯದ ಸುಮಾರು 144 ತಾಲೂಕುಗಳ 5.51 ಲಕ್ಷ ಎಕರೆ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತದೆ.

ದೇಶದ ಶೇ.60ಕ್ಕಿಂತ ಹೆಚ್ಚು ಅಡಿಕೆ ರಾಜ್ಯದಲ್ಲಿ ಬೆಳೆಯುತ್ತದೆ. ಸುಮಾರು 5 ಲಕ್ಷಕ್ಕೂ ಅಧಿಕ ಕುಟುಂಬ ಗಳಿಗೆ ನೇರವಾಗಿ ಹಾಗೂ 10 ಲಕ್ಷಕ್ಕಿಂತ ಹೆಚ್ಚು ಕುಟುಂಬಗಳಿಗೆ ಪರೋಕ್ಷವಾಗಿ ಈ ಬೆಳೆ ಆಧಾರವಾಗಿದೆ. ರಾಜ್ಯದಲ್ಲಿ ಬೆಳೆಯುವ ಚಾಲಿ ಅಡಿಕೆ ಹಾಗೂ ಕೆಂಪಡಿಕೆಯ ಪ್ರಮುಖ ಗ್ರಾಹಕರು ಗುಜರಾತ್, ಉತ್ತರ ಪ್ರದೇಶ ಸೇರಿದಂತೆ ಉತ್ತರ ಭಾರತೀಯರಾಗಿದ್ದು, ರಾಜ್ಯದ ಅಡಿಕೆಯ ಶೇ.80 ಭಾಗ ಅಲ್ಲಿಗೆ ರಫ್ತಾಗುತ್ತದೆ.

2014ರಲ್ಲಿಯೂ ತಂಬಾಕು, ನಿಕೋಟಿನ್‌ಯುಕ್ತ ಗುಟ್ಕಾ ಹಾಗೂ ಪಾನ್ ಮಸಾಲಾ ಮೇಲೆ ನಿಷೇಧ ವಿಧಿಸಲಾಗಿತ್ತು. ಆದರೆ ಆ ಬಳಿಕ ಅಡಿಕೆ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಿಸಿಕೊಳ್ಳುತ್ತ ಬಂದಿದೆಯೇ ಹೊರತು, ಕುಸಿದಿಲ್ಲ. ಕರ್ನಾಟಕದಲ್ಲಿ ಅಡಿಕೆ ಸಂಬಂಧಿತ ಜಿಎಸ್‌ಟಿ ಸಂಗ್ರಹ ಈ ಸಾಲಿನಲ್ಲಿ 379.34 ಕೋಟಿಗಳಷ್ಟಿದೆ. ಹೀಗಾಗಿ ಅಡಿಕೆ ಬೆಳೆಗಾರರ ಹಿತರಕ್ಷಣೆಯನ್ನು ಸರಕಾರ ಬಿಡುವುದಿಲ್ಲ. ಆದರೆ ಮುಂದಾದರೂ, ತಂಬಾಕು ಸಹವಾಸದಿಂದ ಅಡಿಕೆಗೆ ನಷ್ಟವಿದೆ. ಅಡಿಕೆ ಕ್ಯಾನ್ಸರ್‌ಕಾರಕ ಎಂದು ಯಾವ ಅಧ್ಯಯನವೂ ಇದುವರೆಗೆ ಹೇಳಿಲ್ಲ. ಆದರೆ ತಂಬಾಕಿನ ಕೆಲವು ಅಂಶಗಳು ಕ್ಯಾನ್ಸರ್‌ಕಾರಕ ಎಂದು ದೃಢಪಟ್ಟಿದೆ. ಹೀಗಾಗಿ ತಂಬಾಕಿನ ನಂಟಿನಿಂದ ಕಳಚಿಕೊಂಡರೆ ಮಾತ್ರ ಅಡಿಕೆಗೆ ಭವಿಷ್ಯ ವಿದೆ. ಅಡಿಕೆಯ ಮೌಲ್ಯವರ್ಧನೆಯ ಪ್ರಯತ್ನಗಳೂ ನಡೆಯುತ್ತಿದ್ದು, ಅದರಿಂದಲೂ ಅಡಿಕೆ ಬೆಳೆಗಾರರು ಲಾಭ ಪಡೆಯಬಹುದು.

Dailyhunt
Disclaimer: This content has not been generated, created or edited by Dailyhunt. Publisher: Vishwavani