Dailyhunt Logo
  • Light mode
    Follow system
    Dark mode
    • Play Story
    • App Story
Vishweshwar Bhat Column: ಇದು ದೇಶವಾಸಿಗಳ ಶ್ರಮದಾನ

Vishweshwar Bhat Column: ಇದು ದೇಶವಾಸಿಗಳ ಶ್ರಮದಾನ

Vishwavani 6 days ago

ಸಂಪಾದಕೀಯ ಸದ್ಯಶೋಧನೆ

ಫ್ರಿಕಾ ಖಂಡದ ಪುಟ್ಟ ದೇಶವಾದ ರವಾಂಡ ಇಂದು ವಿಶ್ವದ ಅತ್ಯಂತ ಸ್ವಚ್ಛ ಮತ್ತು ಶಿಸ್ತುಬದ್ಧ ರಾಷ್ಟ್ರ ಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಈ ಅಭೂತಪೂರ್ವ ಬದಲಾವಣೆಯ ಹಿಂದಿರುವ ಪ್ರಮುಖ ಶಕ್ತಿ 'ಉಮುಗಂದ' ಎಂಬ ವಿಶಿಷ್ಟ ಸಾಮೂಹಿಕ ಶ್ರಮದಾನ ಪದ್ಧತಿ.

ಕಿನ್ಯಾರವಾಂಡ ಭಾಷೆಯಲ್ಲಿ 'ಉಮುಗಂದ' ಎಂದರೆ 'ಸಾಮಾನ್ಯ ಉದ್ದೇಶಕ್ಕಾಗಿ ಒಗ್ಗೂಡಿ ಶ್ರಮಿಸುವುದು ಅಥವಾ ಪರಸ್ಪರ ಸಹಾಯ ಮಾಡುವುದು' ಎಂದರ್ಥ.

ಪ್ರತಿ ತಿಂಗಳ ಕೊನೆಯ ಶನಿವಾರದಂದು ಇಡೀ ದೇಶದ ಜನರೆಲ್ಲರೂ ಜಾತಿ, ಮತ, ಅಂತಸ್ತುಗಳ ಭೇದವಿಲ್ಲದೇ ತಮ್ಮ ದೈನಂದಿನ ವ್ಯಾಪಾರ-ವಹಿವಾಟುಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ, ಸಾರ್ವಜನಿಕ ಸ್ಥಳಗಳ ಸ್ವಚ್ಛತೆ ಹಾಗೂ ಅಭಿವೃದ್ಧಿ ಕಾರ್ಯಗಳಲ್ಲಿ ಸ್ವತಃ ಕೈಜೋಡಿಸು ತ್ತಾರೆ. ಉಮುಗಂದ ಆಚರಣೆಯು ಕೇವಲ ಆಧುನಿಕ ಕಾನೂನಲ್ಲ, ಬದಲಿಗೆ ಶತಮಾನಗಳ ಇತಿಹಾಸವಿ ರುವ ರವಾಂಡದ ಸಾಂಪ್ರದಾಯಿಕ ಸಂಸ್ಕೃತಿಯಾಗಿದೆ.

ಪ್ರಾಚೀನ ಕಾಲದಲ್ಲಿ ಗ್ರಾಮಸ್ಥರು ಪರಸ್ಪರರ ಮನೆ ನಿರ್ಮಾಣ, ಕೃಷಿ ಕೊಯ್ಲು ಅಥವಾ ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ನೆರವಾಗಲು ಒಗ್ಗೂಡುತ್ತಿದ್ದ ಪದ್ಧತಿಯೇ ಕಾಲಕ್ರಮೇಣ ಸಾಂಸ್ಥಿಕ ರೂಪ ಪಡೆಯಿತು. 1994ರ ಭೀಕರ ನರಮೇಧದ (Genocide) ನಂತರ ರವಾಂಡ ಸಂಪೂರ್ಣ ವಾಗಿ ಛಿದ್ರಗೊಂಡು, ಸಾಮಾಜಿಕ ವಿಶ್ವಾಸ ಕುಸಿದು ಹೋದಾಗ, ರಾಷ್ಟ್ರವನ್ನು ಪುನರ್ನಿರ್ಮಿಸಲು ಮತ್ತು ಜನರಲ್ಲಿ ಐಕ್ಯತೆಯನ್ನು ಮರುಸ್ಥಾಪಿಸಲು 1998ರಲ್ಲಿ ಸರಕಾರವು ಈ ಪದ್ಧತಿಗೆ ಅಧಿಕೃತ ವಾಗಿ ಮರುಜೀವ ನೀಡಿತು.

Vishweshwar Bhat Column: ಇದು ಶ್ವಾನ ಪ್ರೇಮಿಗಳ ರಾಜಧಾನಿ

ಪ್ರತಿ ತಿಂಗಳ ಕೊನೆಯ ಶನಿವಾರ ಬೆಳಗ್ಗೆ ಎಂಟು ಗಂಟೆಯಿಂದ ಹನ್ನೊಂದು ಗಂಟೆಯವರೆಗೆ ದೇಶಾದ್ಯಂತ ಕಟ್ಟುನಿಟ್ಟಿನ ನಿಯಮ ಜಾರಿಯಲ್ಲಿರುತ್ತದೆ. ಈ ಮೂರು ಗಂಟೆಗಳ ಅವಧಿಯಲ್ಲಿ ಎಲ್ಲ ಅಂಗಡಿ-ಮುಂಗಟ್ಟುಗಳು, ಮಾರುಕಟ್ಟೆಗಳು, ಶಾಲೆ-ಕಾಲೇಜುಗಳು ಮತ್ತು ಸಾರ್ವಜನಿಕ ಕಚೇರಿಗಳನ್ನು ಸಂಪೂರ್ಣವಾಗಿ ಮುಚ್ಚಲಾಗುತ್ತದೆ.

ತುರ್ತು ವೈದ್ಯಕೀಯ ಸೇವೆಗಳು, ಆಂಬುಲೆನ್ಸ್ ಹಾಗೂ ಭದ್ರತಾ ವಾಹನಗಳನ್ನು ಹೊರತುಪಡಿಸಿ, ಖಾಸಗಿ ಕಾರುಗಳು, ಬಸ್‌ಗಳು ಸೇರಿದಂತೆ ಯಾವುದೇ ಸಾರ್ವಜನಿಕ ಸಾರಿಗೆ ರಸ್ತೆಗಿಳಿಯುವಂತಿಲ್ಲ. ಇಡೀ ದೇಶವೇ ಸ್ತಬ್ಧವಾದಂತೆ ಕಂಡರೂ, ಬೀದಿಬೀದಿಗಳಲ್ಲಿ ಲಕ್ಷಾಂತರ ನಾಗರಿಕರು ಪೊರಕೆ, ಸಲಿಕೆ, ಹಾರೆ ಹಿಡಿದು ಕೆಲಸದಲ್ಲಿ ನಿರತರಾಗಿರುತ್ತಾರೆ. ಈ ಶ್ರಮದಾನದ ವ್ಯಾಪ್ತಿಯು ಅತ್ಯಂತ ವಿಶಾಲವಾಗಿದೆ. ನಾಗರಿಕರು ಕೇವಲ ರಸ್ತೆ ಬದಿಯ ಕಸ ಗುಡಿಸುವುದು ಮಾತ್ರವಲ್ಲ, ಚರಂಡಿ ಗಳನ್ನು ಸ್ವಚ್ಛಗೊಳಿಸುವುದು, ಮಳೆನೀರು ಸರಾಗವಾಗಿ ಹರಿಯುವಂತೆ ಹೂಳೆತ್ತುವುದು ಮತ್ತು ಸಾರ್ವಜನಿಕ ರಸ್ತೆಗಳ ದುರಸ್ತಿ ಕಾರ್ಯಗಳನ್ನು ಮಾಡುತ್ತಾರೆ.

ಇದರೊಂದಿಗೆ ಪರಿಸರ ಸಂರಕ್ಷಣೆಗಾಗಿ ಬೆಟ್ಟಗುಡ್ಡಗಳಲ್ಲಿ ಲಕ್ಷಾಂತರ ಗಿಡಗಳನ್ನು ನೆಡುವುದು, ಸವಕಳಿ ತಡೆಯಲು ಕಂದಕಗಳನ್ನು ನಿರ್ಮಿಸುವುದು, ಬಡವರಿಗೆ ಮತ್ತು ವೃದ್ಧರಿಗೆ ಮನೆಗಳನ್ನು ಕಟ್ಟಿ ಕೊಡುವುದು ಹಾಗೂ ಸಮುದಾಯ ಭವನಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ಮಾಣಕ್ಕೆ ಉಚಿತ ಶ್ರಮ ಒದಗಿಸುವುದು ಈ ಅಭಿಯಾನದ ಪ್ರಮುಖ ಅಂಗವಾಗಿದೆ.

ರವಾಂಡದ ಕಾನೂನಿನ ಪ್ರಕಾರ, 18 ರಿಂದ 65 ವರ್ಷದೊಳಗಿನ ದೈಹಿಕವಾಗಿ ಸಮರ್ಥರಾದ ಪ್ರತಿಯೊಬ್ಬ ನಾಗರಿಕನೂ ಉಮುಗಂದದಲ್ಲಿ ಭಾಗವಹಿಸುವುದು ಕಡ್ಡಾಯ. ದೇಶದ ಯಾವುದೇ ಪ್ರಮುಖ ವ್ಯಕ್ತಿಗೂ ಇದರಲ್ಲಿ ವಿನಾಯಿತಿ ಇರುವುದಿಲ್ಲ. ದೇಶದ ಅಧ್ಯಕ್ಷರು, ಮಂತ್ರಿಗಳು, ವಿದೇಶಿ ರಾಯಭಾರಿಗಳು, ಉನ್ನತ ಅಧಿಕಾರಿಗಳಿಂದ ಹಿಡಿದು ಸಾಮಾನ್ಯ ಕೃಷಿಕನವರೆಗೂ ಎಲ್ಲರೂ ಸಾಮಾನ್ಯರಂತೆ ಕೈಯಲ್ಲಿ ಉಪಕರಣ ಗಳನ್ನು ಹಿಡಿದು ಕೆಲಸ ಮಾಡುತ್ತಾರೆ.

ಕಾರಣಾಂತರಗಳಿಂದ ಭಾಗವಹಿಸದ ವ್ಯಕ್ತಿಗಳಿಗೆ ಸ್ಥಳೀಯ ಆಡಳಿತದಿಂದ ದಂಡ ವಿಧಿಸಲಾಗುತ್ತದೆ ಅಥವಾ ಮುಂದಿನ ಸಮುದಾಯ ಕಾರ್ಯಗಳಲ್ಲಿ ಪಾಲ್ಗೊಳ್ಳುವಂತೆ ಸೂಚಿಸಲಾಗುತ್ತದೆ. ಉಮು ಗಂದ ಕೇವಲ ದೈಹಿಕ ಶ್ರಮಕ್ಕೆ ಸೀಮಿತವಾಗಿಲ್ಲ. ಬೆಳಗಿನ ಕೆಲಸ ಮುಗಿದ ನಂತರ ನಡೆಯುವ ಗ್ರಾಮ ಸಭೆ ಇದರ ಅತ್ಯಂತ ನಿರ್ಣಾಯಕ ಭಾಗವಾಗಿದೆ. ಶ್ರಮದಾನ ಮುಗಿದ ತಕ್ಷಣ ಸಮುದಾಯದ ಜನರು ಒಂದೆಡೆ ವೃತ್ತಾಕಾರದಲ್ಲಿ ಕುಳಿತು ಮುಕ್ತ ಸಂವಾದ ನಡೆಸುತ್ತಾರೆ.

ಇಲ್ಲಿ ಸ್ಥಳೀಯ ನೈರ್ಮಲ್ಯ ಸಮಸ್ಯೆಗಳು, ಭದ್ರತೆ, ಆರೋಗ್ಯ ವಿಮೆ, ಸರಕಾರದ ಹೊಸ ಯೋಜನೆ ಗಳು ಮತ್ತು ಆರ್ಥಿಕ ಸವಾಲುಗಳ ಬಗ್ಗೆ ಚರ್ಚಿಸಲಾಗುತ್ತದೆ. ಪ್ರತಿಯೊಬ್ಬ ನಾಗರಿಕನಿಗೂ ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಹೇಳಿಕೊಳ್ಳುವ ಮತ್ತು ಸ್ಥಳೀಯ ನಾಯಕರನ್ನು ನೇರವಾಗಿ ಪ್ರಶ್ನಿಸುವ ಪ್ರಜಾಪ್ರಭುತ್ವದ ಹಕ್ಕು ಈ ವೇದಿಕೆಯಲ್ಲಿ ಸಿಗುತ್ತದೆ.

Dailyhunt
Disclaimer: This content has not been generated, created or edited by Dailyhunt. Publisher: Vishwavani