Photo Credit X
ಜಾಮ್ನಗರ: ಬಾಲಿವುಡ್ನ 'ದೃಶ್ಯಂ' ಚಲನಚಿತ್ರದ ಕಥೆಯನ್ನು ನೆನಪಿಸುವಂತಹ ಘಟನೆಯೊಂದರಲ್ಲಿ, ಜಾಮ್ನಗರ ಪೊಲೀಸರು ಸ್ಥಳೀಯ ವ್ಯಕ್ತಿಯೊಬ್ಬರ ನಿಗೂಢ ನಾಪತ್ತೆ ಪ್ರಕರಣವನ್ನು ಭೇದಿಸಿದ್ದಾರೆ.ಆ ವ್ಯಕ್ತಿಯನ್ನು ಆತನ ಪತ್ನಿ ಮತ್ತು ಆಕೆಯ ಪ್ರಿಯಕರನೆಂದು ಶಂಕಿಸಲಾದ ವ್ಯಕ್ತಿಯೊಬ್ಬರು ಸೇರಿ ಹತ್ಯೆಗೈದಿದ್ದಾರೆ ಹಾಗೂ ಸುಮಾರು ಎರಡು ವರ್ಷಗಳ ಕಾಲ ಸತ್ಯವನ್ನು ಮುಚ್ಚಿಡುವ ಪ್ರಯತ್ನದ ಭಾಗವಾಗಿ ಆತನ ಮೃತದೇಹವನ್ನು ಕೈಗಾರಿಕಾ ಘಟಕವೊಂದರ ನೆಲದಡಿ ಹೂತುಹಾಕಿದ್ದಾರೆ.
ಪೊಲೀಸರ ಪ್ರಕಾರ, ಕಳೆದ ಎರಡು ವರ್ಷದಿಂದ ಪತಿ ಜಿಗ್ನೇಶ್ ಮಾವಡಿಯಾ ಅವರು ಆಸ್ಟ್ರೇಲಿಯಾದಲ್ಲಿ ವಾಸಿಸುತ್ತಿದ್ದಾರೆ ಮತ್ತು ಕೆಲಸ ಮಾಡುತ್ತಿದ್ದಾರೆ ಎಂದು ಪತ್ನಿ ಆತನ ಕುಟುಂಬಕ್ಕೆ ನಂಬಿಸಿದ್ದಾಳೆ.
ಆದರೆ ಆಕೆ ತನ್ನ ಪ್ರಿಯಕರನ ಜತೆ ಸೇರಿ ಆತನಿಗೆ ಆಹಾರದಲ್ಲಿ ಸೈನೈಡ್ ನೀಡಿ ಕೊಂದ ಬಳಿಕ ಆತನ ಮೃತದೇಹವನ್ನು ಜಿಐಡಿಸಿ ಪ್ರದೇಶದಲ್ಲಿರುವ ಕಾರ್ಖಾನೆಯೊಂದರ ನೆಲದಡಿ ಸುಮಾರು 12 ಅಡಿ ಆಳದಲ್ಲಿ ಹೂತುಹಾಕಲಾಗಿದೆ ಎಂದು ತನಿಖಾಧಿಕಾರಿಗಳು ಆರೋಪಿಸಿದ್ದಾರೆ.
ಆಸ್ಟ್ರೇಲಿಯಾಕ್ಕೆ ಪ್ರಯಾಣಿಸುತ್ತಿದ್ದ ಸಂಬಂಧಿಕರೊಬ್ಬರು ಜಿಗ್ನೇಶ್ ಅವರ ಸ್ಥಳೀಯ ಸಂಪರ್ಕ ವಿವರಗಳನ್ನು ಕೇಳಿದಾಗ ಈ ಪ್ರಕರಣದ ಸತ್ಯಾಂಶ ಹೊರಬರಲು ಪ್ರಾರಂಭಿಸಿತು.
ಈ ಘಟನೆಯು ಕುಟುಂಬದಲ್ಲಿ ಅನುಮಾನವನ್ನು ಹುಟ್ಟುಹಾಕಿತು. ಈ ಅನುಮಾನಗಳು ಅಂತಿಮವಾಗಿ ಜಿಗ್ನೇಶ್ ಅವರ ಪತ್ನಿ ಪೃಥ್ವಿ ಮತ್ತು ಆಕೆಯ ಪ್ರಿಯಕರನೆಂದು ಶಂಕಿಸಲಾದ ನಿಲೇಶ್ ಅವರನ್ನು ವಶಕ್ಕೆ ಪಡೆಯಲು ಕಾರಣವಾದವು.
ಸ್ಥಳದಿಂದ ಪತ್ತೆಯಾದ ಅಸ್ಥಿಪಂಜರದ ಅವಶೇಷಗಳನ್ನು ಡಿಎನ್ಎ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅವಶೇಷಗಳ ಗುರುತು ಖಚಿತಪಟ್ಟ ನಂತರ, ಕೊಲೆ ಮತ್ತು ಸಾಕ್ಷ್ಯ ನಾಶ ಸೇರಿದಂತೆ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

