ಕರೋನಾ ಹಾವಳಿಯಿಂದ ಚಿತ್ರರಂಗ ಈಗ ತಕ್ಕಮಟ್ಟಿಗೆ ಉಸಿರಾಡತೊಡಗಿದೆ. ಸರ್ಕಾರದಿಂದ 50% ಚಿತ್ರಮಂದಿರ ಪ್ರದರ್ಶನಕ್ಕೆ ಅನುಮತಿ ಸಿಕ್ಕುತ್ತಿದ್ದ ಹಾಗೇ ಚಿತ್ರಗಳು ಬಿಡುಗಡೆ ಆಗತೊಡಗಿದೆ. ಇದರ ನಡುವೆ ಇದೆ ಸೆಪ್ಟೆಂಬರ್ 17 ಕ್ಕೆ ನಟ ಹಾಗೂ ನಿರ್ದೇಶಕ ಎಸ್.ಮೋಹನ್ ನಿರ್ದೇಶಿಸಿರುವ "ಜಿಗ್ರಿದೋಸ್ತ್" ಚಿತ್ರ ಬಿಡುಗಡೆಯಾಗುತ್ತಿದೆ.
ಚಿತ್ರದ ಬಗ್ಗೆ ನಿರ್ದೇಶಕ ಮೋಹನ್ ಮಾತನಾಡುತ್ತಾ ನನಗೆ ಗಂಗಾಧರ್ ಅವರು ಸುಮಾರು ೨೨ ವರ್ಷಗಳ ಪರಿಚಯ. ಅವರ "ಯಾರಿಗೆ ಸಾಲತ್ತೆ ಸಂಬಳ" ಚಿತ್ರದಲ್ಲಿ ನಟಿಸಲು ನನಗೆ ಅವಕಾಶ ನೀಡಿದ್ದರು.ಈಗ ಅವರದೇ ನಿರ್ಮಾಣದ ಚಿತ್ರ ನಿರ್ದೇಶನ ಮಾಡಿದ್ದೇನೆ.
ಪ್ರಪಂಚದಲ್ಲಿ ಎಲ್ಲಾ ಸಂಬಂಧಿಗಳನ್ನು ನಮಗೆ ಅಪ್ಪ - ಅಮ್ಮ ಪರಿಚಯ ಮಾಡಿಕೊಟ್ಟರಷ್ಟೇ ತಿಳಿಯುತ್ತದೆ. ಆದರೆ ನಾವು ಇಷ್ಟ ಪಟ್ಟು ಪಡೆಯುವ ಸಂಬಂಧ ಸ್ನೇಹ. ಹಾಗಾಗಿ ಎಲ್ಲಕ್ಕಿಂತ ಮೀರಿದ್ದು ಸ್ನೇಹ. ಇದನ್ನೇ ನಮ್ಮ ಚಿತ್ರದಲ್ಲಿ ಹೇಳಿದ್ದೇವೆ. ಸ್ಕಂದ ಅಶೋಕ್ ಹಾಗೂ ಚೇತನ್ ಇಬ್ಬರೂ ಸ್ನೇಹಿತರಾಗಿ ಕಾಣಿಸಿಕೊಂಡಿದ್ದಾರೆ. ಅಕ್ಷತ, ಸುಷ್ಮ ನಾಯಕಿಯರು.
ಪಂಚಭಾಷಾ ನಟ ವಿನೋದ್ ಆಳ್ವ, ಮಾಜಿ ಸಚಿವರಾದ ಟಿ.ಬಿ.ಜಯಚಂದ್ರ, ಚಿತ್ಕಲಾ ಬಿರಾದಾರ್ , ಇಫ್ರಾನ್, ಮಂಜುನಾಥ್, ರಮೇಶ್ ಪಂಡಿತ್, ಟಿನ್ನಿಸ್ ಕೃಷ್ಣ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ ಎಂದು ಚಿತ್ರತಂಡದ ಬಗ್ಗೆ ಮಾಹಿತಿ ನೀಡಿದರು.
ಅದೇ ರೀತಿ ನಿರ್ಮಾಪಕ ಬಿ. ಎನ್. ಗಂಗಾಧರ್ ಮಾತನಾಡುತ್ತಾ ನಾನು ಇಲ್ಲಿಯವರೆಗೂ ಇಪ್ತತ್ತೇಳು ಚಿತ್ರಗಳ ನಿರ್ಮಾಣ ಮಾಡಿದ್ದೇನೆ. ಕೋವಿಡ್ ಬರದಿದ್ದರೆ ಕಳೆದ ವರ್ಷ ನಮ್ಮ ಚಿತ್ರ ಬಿಡುಗಡೆ ಅಗಬೇಕಿತ್ತು. ಆದರೆ ಈಗ ಬಿಡುಗಡೆ ಮಾಡುತ್ತಿದ್ದೇವೆ ನೋಡಿ ಹರಸಿ ಎಂದರು.
ನಾಯಕರಲೊಬ್ಬರಾದ ಚೇತನ್ ಮತಾನಾಡುತ್ತಾ, ನಾನು ಪೋಲಿಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಪಾತ್ರ ನೀಡಿದ ನಿರ್ಮಾಪಕ ಹಾಗೂ ನಿರ್ದೇಶಕರಿಗೆ ಧನ್ಯವಾದ ಎಂದರು.ನಟಿಯರಾದ ಅಕ್ಷತ, ಸುಷ್ಮ ಕಲಾವಿದರಾದ ಇರ್ಫಾನ್ ಹಾಗೂ ಚಿತ್ರದ ಸಹ ನಿರ್ಮಾಪಕ ಹಾಗೂ ನಟ ಮಂಜುನಾಥ್ ಹಾಗೂ ಸಂಗೀತ ನಿರ್ದೇಶಕ ದಿನೇಶ್ ಕುಮಾರ್ ಮಾಧ್ಯಮದ ಮುಂದೆ ಚಿತ್ರದ ಬಗ್ಗೆ ಮಾಹಿತಿ ನೀಡಿದರು.
ಪ್ರಸಾದ್ ಬಾಬು ಛಾಯಾಗ್ರಹಣ, ಶಿವಪ್ರಸಾದ್ ಯಾದವ್ ಸಂಕಲನ, ಕೌರವ ವೆಂಕಟೇಶ್ ಸಾಹಸ ನಿರ್ದೇಶನ ಹಾಗೂ ಮದನ್ - ಹರಿಣಿ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಯಾವುದೇ ಚಿತ್ರಕ್ಕಾಗಲಿ ಪ್ರಚಾರ ಬಹಳ ಮುಖ್ಯ , ಆದರೆ ನಿರ್ಮಾಪಕರು ಮಾತ್ರ ಈ ಚಿತ್ರಕ್ಕೆ ಪ್ರಚಾರ ಮಾಡುವ ಮನಸ್ಸು ಮಾಡದೆ ಪತ್ರಿಕಾಗೋಷ್ಠಿ ಕರೆದು ಮಾಧ್ಯಮದವರಿಗೆ ನಮ್ಮ ಚಿತ್ರವನ್ನು ಎಲ್ಲರೂ ಪ್ರಮೋಷನ್ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

