ಭಾರತೀಯ ಪೌರಾಣಿಕ ಕಥನಗಳನ್ನು ತಲೆಮಾರುಗಳಿಂದ ಜನರಿಗೆ ತಲುಪಿಸಿದ ಸಾಗರ್ ಪಿಕ್ಚರ್ಸ್ ಎಂಟರ್ಟೈನ್ಮೆಂಟ್, ಇದೀಗ ತನ್ನ ಐತಿಹಾಸಿಕ ಪರಂಪರೆಯನ್ನು ಮತ್ತೊಂದು ಭವ್ಯ ಸಿನಿಮ್ಯಾಟಿಕ್ ಪಯಣಕ್ಕೆ ಕೊಂಡೊಯ್ಯುತ್ತಿದೆ. ರಾಮಾಯಣದಿಂದ ಶ್ರೀಮದ್ಭಾಗವತದವರೆಗೆ.


ರಾಮಾಯಣ, ಶ್ರೀಕೃಷ್ಣದಂತಹ ಜನಪ್ರಿಯ ಪೌರಾಣಿಕ ಕೃತಿಗಳ ಮೂಲಕ ಮನೆಮಾತಾದ ಸಾಗರ್ ಕುಟುಂಬ, ಇದೀಗ ಶ್ರೀಮದ್ಭಾಗವತ ಮಹಾಪುರಾಣವನ್ನು ಏಳು ಭಾಗಗಳ ಲೈವ್-ಆಯಕ್ಷನ್ ಸಿನಿಮಾಟಿಕ್ ಸಾಗಾವಾಗಿ ದೊಡ್ಡ ಪರದೆಗೆ ತರುವ ಸಿದ್ಧತೆಯಲ್ಲಿದೆ.
ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ಆಕಾಶ್ ಸಾಗರ್ ಚೋಪ್ರಾ ಮತ್ತು ಅಮೃತ್ ಸಾಗರ್ ಸಹ-ನಿರ್ದೇಶಿಸುತ್ತಿದ್ದು, ಸಾಗರ್ ಕುಟುಂಬದ ಮುಂದಿನ ತಲೆಮಾರು ತನ್ನ ಪರಂಪರೆಯನ್ನು ಮುಂದುವರಿಸುತ್ತಿದೆ. National Film Award ಪಡೆದ 1971 ಚಿತ್ರದ ನಿರ್ದೇಶಕರಾದ ಅಮೃತ್ ಸಾಗರ್ ಅವರ ಅನುಭವವೂ ಈ ಯೋಜನೆಗೆ ಮತ್ತಷ್ಟು ವಿಶೇಷತೆ ನೀಡಿದೆ.


ರಾಮೋಜಿ ಫಿಲ್ಮ್ ಸಿಟಿಯಲ್ಲಿ ಆರಂಭಗೊಂಡಿರುವ ಈ ಭವ್ಯ ನಿರ್ಮಾಣಕ್ಕೆ ಅಂತರರಾಷ್ಟ್ರೀಯ ಮಟ್ಟದ ತಾಂತ್ರಿಕ ಪರಿಣತಿಯೂ ಕೈಜೋಡಿಸಿದೆ. Marvel 'Game of Thrones' ಸರಣಿಗಳಿಗೆ ಕೆಲಸ ಮಾಡಿರುವ ತಂತ್ರಜ್ಞರ ತಂಡವೂ ಈ ಸಿನಿಮಾದಲ್ಲಿ ಕಾರ್ಯನಿರ್ವಹಿಸಿರುವುದು, ಚಿತ್ರದ ದೃಶ್ಯ ವೈಭವದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಆಧುನಿಕ VFX, ಭವ್ಯ ನಿರ್ಮಾಣ ಮತ್ತು ಸಮಕಾಲೀನ ಸಿನಿಮ್ಯಾಟಿಕ್ ತಂತ್ರಜ್ಞಾನದ ಮೂಲಕ ಪ್ರಾಚೀನ ಭಾರತದ ಆಧ್ಯಾತ್ಮಿಕ ಕಥನವನ್ನು ಹೊಸ ತಲೆಮಾರಿನ ಪ್ರೇಕ್ಷಕರಿಗೆ ತಲುಪಿಸುವ ಉದ್ದೇಶ ಈ ಯೋಜನೆಯದ್ದು.

ಇದು ಕೇವಲ ಮತ್ತೊಂದು ಪೌರಾಣಿಕ ಸಿನಿಮಾ ಅಲ್ಲ; ರಾಮಾಯಣದಿಂದ ಆರಂಭವಾದ ಸಾಗರ್ ಪರಂಪರೆ, ಶ್ರೀಮದ್ಭಾಗವತದ ಮೂಲಕ ಹೊಸ ಸಿನಿಮ್ಯಾಟಿಕ್ ಯುಗಕ್ಕೆ ಕಾಲಿಡುತ್ತಿರುವ ಕ್ಷಣ. ಒಂದು ಪರಂಪರೆ. ಏಳು ಭಾಗಗಳು. ಒಂದು ಮಹಾ ಆಧ್ಯಾತ್ಮಿಕ ಸಿನಿಮಾಟಿಕ್ ಪಯಣ.

